ಅಲಹಾಬಾದ್: ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 11 ರ ಅಡಿಯಲ್ಲಿ ವಿವಾಹ ಅಸಿಂಧು ಎಂದು ಘೋಷಿಸಲು ಕೋರಿ ಪತಿ ದಾಖಲಿಸಿದ್ದ ಪ್ರಕರಣವನ್ನು ಪತಿಯ ಮರಣದ ನಂತರ ಆತನ ಪೋಷಕರು ಮುನ್ನಡೆಸಬಹುದು ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 11 ರ ಅಡಿಯಲ್ಲಿ ಹತಿ ಪ್ರಕರಣ ದಾಖಲಿಸಿ ಮೃತಪಟ್ಟಾಗ ಆತನ ಪೋಷಕರು ಪ್ರಕರಣವನ್ನು ಮುನ್ನಡೆಸಬಹುದಾಗಿದೆ. ಸಿವಿಲ್ ಪ್ರೊಸೀಜರ್ ಕೋಡ್ ನ ಆರ್ಡರ್ 22 ರೂಲ್ 3 ರ ಅಡಿಯಲ್ಲಿ ಆತನ ಪೋಷಕರು ಇಂತಹ ಅಧಿಕಾರ ಹೊಂದಿದ್ದಾರೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: ಪತ್ನಿಗೆ ಈಗಾಗಲೇ ವಿವಾಹವಾಗಿದ್ದು, ಅದನ್ನು ಮುಚ್ಚಿಟ್ಟು ಮೋಸದಿಂದ ತನ್ನೊಂದಿಗೆ ಎರಡನೇ ವಿವಾಹ ಮಾಡಿಕೊಂಡಿದ್ದಾರೆ. ಹೀಗಾಗಿ ವಿವಾಹವನ್ನು ಅಸಿಂಧು ಎಂದು ಘೋಷಿಸಬೇಕು ಎಂದು ಕೋರಿ ಪತಿ 2022ರ ಏಪ್ರಿಲ್ 5ರಂದು ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 11 ರ ಅಡಿಯಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಆಕ್ಷೇಪಿಸಿದ್ದ ಪತ್ನಿ ತಾನು ಈ ಮೊದಲು ಯಾವುದೇ ವಿವಾಹವಾಗಿಲ್ಲ ಎಂದಿದ್ದರಲ್ಲದೇ, ಅದಕ್ಕೆ ಸಂಬಂಧಿಸಿದಂತೆ ಕೆಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಯುವ ಸಂದರ್ಭದಲ್ಲೇ 2023ರ ಫೆಬ್ರವರಿ 24 ರಂದು ಪತಿ ಅಪಘಾತದಲ್ಲಿ ಮೃತಪಟ್ಟಿದ್ದರು.
ಮಗನ (ಪತಿ) ಸಾವಿನ ಬಳಿಕ ಆತನ ಪೋಷಕರು ಸಿವಿಲ್ ಪ್ರೊಸೀಜರ್ ಕೋಡ್ ನ ಆರ್ಡರ್ 22 ರೂಲ್ 3 ರ ಅಡಿಯಲ್ಲಿ ಅರ್ಜಿ ಸಲ್ಲಿಸಿ ಪ್ರಕರಣವನ್ನು ಮುನ್ನಡೆಸಲು ಕೋರಿದ್ದರು. ಇದಕ್ಕೆ ಆಕ್ಷೇಸಿದ್ದ ಪತ್ನಿ, ಪ್ರಕರಣ ದಾಖಲಿಸಿದ್ದ ಅರ್ಜಿದಾರ (ಪತಿ) ಈಗಾಗಲೇ ಮೃತಪಟ್ಟಿರುವುದರಿಂದ ಪ್ರಕರಣವನ್ನು ಕೊನೆಗೊಳಿಸಬೇಕು ಮತ್ತು ವಿವಾದವನ್ನು ಮುಂದುವರೆಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು. ಜತೆಗೆ ಪೋಷಕರ ಅರ್ಜಿಯನ್ನು ತಿರಸ್ಕರಿಸುವಂತೆ ಕೋರಿದ್ದರು. ಆದರೆ ಕೌಟುಂಬಿಕ ನ್ಯಾಯಾಲಯ ನಿಯಮಾನುಸಾರ ಪೋಷಕರ ಅರ್ಜಿಯನ್ನು ಪುರಸ್ಕರಿಸಿ, ಪ್ರಕರಣ ಮುಂದುವರೆಸುವುದಾಗಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಪತ್ನಿ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ತೀರ್ಪಿನ ಸಾರಾಂಶ: ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 11 ರ ಅಡಿಯಲ್ಲಿ ದಾಖಲಿಸಿದ ಪ್ರಕರಣಗಳಲ್ಲಿ ಕೌಟುಂಬಿಕ ನ್ಯಾಯಾಲಯದ ಮುಂದೆ ಬಾಕಿ ಇರುವ ಪ್ರಕ್ರಿಯೆಗಳಲ್ಲಿ ಸಿವಿಲ್ ಪ್ರೊಸೀಜರ್ ಕೋಡ್ ನ ಆರ್ಡರ್ 22 ರ ನಿಬಂಧನೆಗಳು ಅನ್ವಯವಾಗುತ್ತವೆ. ಅದರಂತೆ ಮೃತಪಟ್ಟಿರುವ ಹತಿಯ ಪೋಷಕರು ಸಲ್ಲಿಸಿರುವ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ಪರಿಗಣಿಸಿರುವ ಕ್ರಮ ಸರಿಯಿದೆ ಎಂದು ಆದೇಶಿಸಿದೆ. ಜತೆಗೆ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದೆ.














