ಅಭಿಮಾನ್ ಸ್ಟುಡಿಯೋನಲ್ಲಿದ್ದ, ವಿಷ್ಣುವರ್ಧನ್ ಸಮಾಧಿ ನೆಲಸಮ ಮಾಡಿದ ಬಳಿಕ ವಿಷ್ಣು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಜಾಗ ಕೊಡಿಸಬೇಕು ಎಂದು ಒತ್ತಾಯಿಸಿದ್ದರು.
ಇದೇ ಸಮಯದಲ್ಲಿ ಅಭಿಮಾನ್ ಸ್ಟುಡಿಯೋ ವಿವಾದವೂ ಭುಗಿಲೆದ್ದಿದ್ದು ಇದೀಗ ಅರಣ್ಯ ಇಲಾಖೆಯು ಅಭಿಮಾನ್ ಸ್ಟುಡಿಯೋ ಸ್ಥಳವಾಗಿರುವ 10 ಎಕರೆ ಜಾಗ ತಮ್ಮ ಇಲಾಖೆಗೆ ಸೇರಬೇಕು ಎಂದಿದೆ. ಸ್ವತಃ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು 10 ಎಕರೆ ಜಾಗವನ್ನು ತಮ್ಮ ಇಲಾಖೆಗೆ ವರ್ಗಾಯಿಸಬೇಕು ಎಂದಿದ್ದಾರೆ.
ಇಂದು ವಿಷ್ಣುಸೇನೆ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿಯಾಗಿ ವಿಷ್ಣುವರ್ಧನ್ ಸಮಾಧಿ ನಿರ್ಮಾಣಕ್ಕೆ ಅಭಿಮಾನ್ ಸ್ಟುಡಿಯೋನಲ್ಲಿ ಜಾಗ ಕಲ್ಪಿಸಿಕೊಡಬೇಕೆಂದು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, 1970 ರಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಕಂದಾಯ ಇಲಾಖೆಯ ಮೂಲಕ ಸ್ಟುಡಿಯೋ ನಿರ್ಮಾಣಕ್ಕಾಗಿ ಬಾಲಣ್ಣ ಅವರಿಗೆ ನೀಡಲಾಗಿತ್ತು. ಆ ಸಮಯದಲ್ಲಿ ಕೆಲವು ಷರತ್ತುಗಳನ್ನು ಸಹ ಸರ್ಕಾರ ವಿಧಿಸಿತ್ತು.
ಅದ್ಯಾವ ಷರತ್ತುಗಳನ್ನು ಸಹ ಪಾಲಿಸದೇ ಉಲ್ಲಂಘಿಸಲಾಗಿದ್ದು, ಇದೀಗ ಬಾಕಿ ಉಳಿದಿರುವ 10 ಎಕರೆ ಜಾಗವನ್ನು ಕಂದಾಯ ಇಲಾಖೆ ಮುಟ್ಟುಗೋಲು ಹಾಕಿಕೊಂಡು ಅರಣ್ಯ ಇಲಾಖೆಗೆ ನೀಡಬೇಕಿದೆ. ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ’ ಎಂದರು.
‘ಭೂಮಿ ಹಸ್ತಾಂತರಕ್ಕೆ ಮುಂಚೆ ಹಲವು ಷರತ್ತುಗಳನ್ನು ಸರ್ಕಾರ ವಿಧಿಸಿತ್ತು ಆದರೆ ಅದೆಲ್ಲವನ್ನೂ ಉಲ್ಲಂಘನೆ ಮಾಡಲಾಗಿದೆ. ಈಗ ಪ್ರತಿ ಎಕರೆಗೆ 14.37 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ಸಹ ಷರತ್ತಿನ ಉಲ್ಲಂಘನೆಯಾಗಿದೆ.
ಹೀಗಾಗಿ ಆ ಭೂಮಿಯನ್ನು ಮರಳಿ ಅರಣ್ಯ ಇಲಾಖೆಗೆ ಒಪ್ಪಿಸಬೇಕೆಂದು ನಾವು ಈಗಾಗಲೇ ಕಂದಾಯ ಇಲಾಖೆಗೆ ಕೇಳಿದ್ದೇವೆ. ಒಂದೊಮ್ಮೆ ಅವರು ಮರಳಿ ನೀಡಿದರೆ ನಾವು ಅಲ್ಲಿ ಒಂದು ಟ್ರೀ ಪಾರ್ಕ್ ಮತ್ತು ಲಂಗ್ ಸ್ಪೇಸ್ ಅನ್ನು ನಿರ್ಮಾಣ ಮಾಡಲು ಯೋಜಿಸಿದ್ದೇವೆ’ ಎಂದಿದ್ದಾರೆ.
ವೀರಕಪುತ್ರ ಶ್ರೀನಿವಾಸ್ ಅವರು ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಅದೇ ಹತ್ತು ಎಕರೆಯಲ್ಲಿ ಜಾಗ ನೀಡುವಂತೆ ಕೇಳಿರುವ ಬಗ್ಗೆ ಮಾತನಾಡಿದ ಈಶ್ವರ ಖಂಡ್ರೆ, ‘ವಿಷ್ಣುವರ್ಧನ್ ಅವರು ಎಲ್ಲರ ಮೆಚ್ಚಿನ ನಟ, ಅವರ ಬಗ್ಗೆ ನಮಗೆ ಅಪಾರ ಗೌರವ ಇದೆ. ಈಗ ಶ್ರೀನಿವಾಸ್ ಅವರು ಜಾಗ ಕೇಳಿದ್ದಾರೆ. ಈ ವಿಷಯವನ್ನು ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಿದ್ದೇನೆ’ ಎಂದಿದ್ದಾರೆ.
60ರ ದಶಕದ ಅಂತ್ಯದಲ್ಲಿ ಕೆಂಗೆರಿ ಹೋಬಳಿ ಸರ್ವೆ 26 ರಲ್ಲಿ ತುರಳ್ಳಿ 20 ಎಕರೆ ಜಮೀನನ್ನು ಬಾಲಣ್ಣನವರಿಗೆ ಸ್ಟುಡಿಯೋ ನಿರ್ಮಾಣಕ್ಕೆ ನೀಡಲಾಗಿತ್ತು. ಅದರಲ್ಲಿ 10 ಎಕರೆ ಜಮೀನನ್ನು ಮಾರಾಟ ಮಾಡಲಾಗಿತ್ತು. ಇನ್ನುಳಿದ 10 ಎಕರೆ ಜಾಗವನ್ನು ಈಗ ಒಕರೆಗೆ 14.37 ಕೋಟಿ ರೂಪಾಯಿಗಳಂತೆ ಮಾರಾಟ ಮಾಡಲು ಪ್ರಾಥಮಿಕ ಒಪ್ಪಂದ ಮಾಡಿಕೊಳ್ಳಲಾಗಿದೆ.
ಮಾರಾಟ ಮಾಡಲೆಂದೇ ಇತ್ತೀಚೆಗೆ ವಿಷ್ಣುವರ್ಧನ್ ಸಮಾಧಿ ಹಾಗೂ ಬಾಲಣ್ಣ ಅವರ ಸಮಾಧಿ ಸ್ಥಳಗಳನ್ನು ನೆಲಸಮ ಮಾಡಲಾಗಿದೆ. ಇದೀಗ ಅರಣ್ಯ ಇಲಾಖೆ, ಆ ಸ್ಥಳ ತಮಗೆ ಸೇರಿದ್ದು, ತಮಗೆ ವಾಪಸ್ ಕೊಡಿಸಬೇಕೆಂದು ಕಂದಾಯ ಇಲಾಖೆಗೆ ಪತ್ರ ಬರೆದಿದೆ.














