ಬೆಂಗಳೂರು: ಮಲೇಶಿಯಾಗೆ ತೆರಳಿದ ನಂತರ ಭಾರತಕ್ಕೆ ವಾಪಸಾಗದೆ ಪತ್ನಿ ಮೇಲೆ ಕ್ರೌರ್ಯ ಎಸಗಿದ ಆರೋಪ ಸಂಬಂಧ ಬಂಧನ ಭೀತಿ ಎದುರಿಸುತ್ತಿರುವ ದಂತ ವೈದ್ಯರೊಬ್ಬರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.
ಕ್ರೌರ್ಯ ಮತ್ತು ವರದಕ್ಷಿಣೆ ಕಿರುಕುಳವೆಂದು ಆರೋಪಿಸಿ ಪತ್ನಿ ದಾಖಲಿಸಿದ್ದ ದೂರಿನ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಮಲೇಶಿಯಾದಲ್ಲಿ ದಂತ ವೈದ್ಯರಾಗಿ ಕೆಲಸ ಮಾಡುತ್ತಿರುವ ತುಮಕೂರಿನ ಅಮರಜ್ಯೋತಿ ನಗರದ ನಿವಾಸಿ ಎಂ.ಎಸ್. ಮಧುನಿರಂಜನ್ ಸ್ವಾಮಿ ಎಂಬುವರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ರಜಾ ಕಾಲದ ನ್ಯಾಯಪೀಠ ಈ ಆದೇಶ ನೀಡಿದೆ.
ಕೂಲಂಕಷವಾಗಿ ಪ್ರಕರಣದ ದಾಖಲೆ ಪರಿಶೀಲಿಸಿದರೆ, ಅರ್ಜಿದಾರರು ಮಲೇಶಿಯಾದಲ್ಲಿ ದಂತ ವೈದ್ಯನಾಗಿ ಉದ್ಯೋಗ ಮಾಡುತ್ತಿದ್ದಾರೆ. ಆಗಾಗ್ಗೆ ಭಾರತಕ್ಕೆ ಬಂದು ಪತ್ನಿಯೊಂದಿಗೆ ಉಳಿದಿದ್ದಾರೆ ಎನ್ನುವುದು ತಿಳಿಯುತ್ತದೆ. ಜಾಮೀನು ನೀಡುವುದಕ್ಕೆ ಪ್ರಕರಣದಲ್ಲಿ ಆರೋಪಗಳು ಅಡ್ಡಿಯಾಗುವುದಿಲ್ಲ. ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿರುವ ಆರೋಪಗಳು ಅರ್ಜಿದಾರರ ಮೇಲಿಲ್ಲ. ಜಾಮೀನು ನೀಡಿದರೆ ಅರ್ಜಿದಾರ ತಲೆಮರೆಸಿಕೊಳ್ಳಬಹುದು, ಸಾಕ್ಷ್ಯ ತಿರುಚಬಹುದು ಅಥವಾ ಸಾಕ್ಷಿಗಳನ್ನು ಬೆದರಿಸಬಹುದು ಎಂಬ ತನಿಖಾಧಿಕಾರಿಯ ಆತಂಕ ದೂರಮಾಡಲು ಅಗತ್ಯ ಷರತ್ತು ವಿಧಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಿದೆ.
ಕೋರ್ಟ್ ಷರತ್ತು: ಅಲ್ಲದೆ, ಈ ತೀರ್ಪಿನ ಪ್ರತಿ ಲಭ್ಯವಾದ ಒಂದು ತಿಂಗಳಲ್ಲಿ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ಎರಡು ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ನೀಡಬೇಕು. ತನಿಖಾಧಿಕಾರಿ ಕರೆದಾಗೆಲೆಲ್ಲಾ ಅವರ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸಬೇಕು. ಪ್ರಕರಣದ ಸಾಕ್ಷ್ಯಾಧಾರ ತಿರುಚಲು ಅಥವಾ ಸಾಕ್ಷಿಗಳನ್ನು ಬೆದರಿಸಲು ಯತ್ನಿಸಬಾರದು ಎಂದು ಪೀಠ ಅರ್ಜಿದಾರನಿಗೆ ಷರತ್ತು ವಿಧಿಸಿದೆ. ಇದೇ ವೇಳೆ ನ್ಯಾಯಾಲಯ ವಿಧಿಸಿರುವ ಯಾವುದೇ ಷರತ್ತು ಉಲ್ಲಂಘಿಸಿದರೂ ಜಾಮೀನು ರದ್ದತಿಗೆ ನ್ಯಾಯಾಲಯವನ್ನು ತನಿಖಾಧಿಕಾರಿ ಕೋರಲು ಮುಕ್ತವಾಗಿರುತ್ತಾರೆ ಎಂದು ಆದೇಶದಲ್ಲಿ ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರ ಮತ್ತು ದೂರುದಾರ ಮಹಿಳೆ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಅರ್ಜಿದಾರ ದಂತ ವೈದ್ಯರಾಗಿದ್ದು, ಉದ್ಯೋಗದ ನಿಮಿತ್ತ ಮಲೇಶಿಯಾಗೆ ತೆರಳಿದ್ದರು. ಒಂದು ವರ್ಷದ ನಂತರ ಮಲೇಶಿಯಾಗೆ ಪತ್ನಿಯನ್ನು ಕರೆದೊಯ್ಯುವುದಾಗಿ ಭರವಸೆ ನೀಡಿದ್ದರು. ಅಲ್ಲದೆ, ಮಲೇಶಿಯಾಗೆ ತೆರಳುವಾಗ ಪತ್ನಿಯ ತಂದೆಯಿಂದ ಐದು ಲಕ್ಷ ರೂ. ಹಣ ಪಡೆದುಕೊಂಡಿದ್ದರು. ಆದರೆ, ಅಲ್ಲಿಗೆ ಹೋದ ನಂತರ ಮತ್ತೆ ಭಾರತಕ್ಕೆ ಹಿಂದಿರುಗಲಿಲ್ಲ. ಪತ್ನಿಗೆ ಕರೆಯನ್ನೂ ಮಾಡಲಿಲ್ಲ ಹಾಗೂ ಆಕೆಯನ್ನು ಮಲೇಶಿಯಾಗೆ ಕರೆದೊಯ್ಯಲಿಲ್ಲ. ಸದ್ಯ ಆತ ಎಲ್ಲಿದ್ದಾರೆ ಎನ್ನುವುದೇ ತಿಳಿದಿಲ್ಲ ಎಂಬ ಆರೋಪ ಅರ್ಜಿದಾರರ ಮೇಲಿದೆ.
ಇದೇ ವಿಚಾರವಾಗಿ ಕ್ರೌರ್ಯ, ಜೀವ ಬೆದರಿಕೆ, ಅಕ್ರಮವಾಗಿ ಕೂಡಿಹಾಕಿದ, ವಂಚನೆ, ಅಪರಾಧ ಎಸಗಲು ಕುಮ್ಮಕ್ಕು ಮತ್ತು ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಸಂಬಂಧ ಪತಿ ವಿರುದ್ಧ ಪತ್ನಿ ದೂರು ದಾಖಲಿಸಿದ್ದರು. ಅದನ್ನು ಆಧರಿಸಿ ತುಮಕೂರಿನ ಮಹಿಳಾ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಬಂಧನ ಭೀತಿಯಿಂದ ಅರ್ಜಿದಾರ ಹೈಕೋರ್ಟ್ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಕಾಂಗ್ರೆಸ್ ಯುವ ಮುಖಂಡರಾದ ರಮೇಶ್ ಗೌಡರವರ ಹುಟ್ಟುಹಬ್ಬವನ್ನು ಶಾಸಕರ ಕಚೇರಿಯಲ್ಲಿ, ಆಚರಿಸಿದರು….
ರಾಜ್ಯದ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ವಾರ್ತಾ ಇಲಾಖೆಯ ಆಯುಕ್ತರಾಗಿ ಹೇಮಂತ್ ನಿಂಬಾಳ್ಳರ್ ವರ್ಗಾವಣೆ
ನಯನ ಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಉಚಿತ ತಪಾಸಣಾ…..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.