ಮನೆ ಮನರಂಜನೆ ‘ಅಂಶು’ ಚಿತ್ರದ ಟ್ರೇಲರ್ ಬಿಡುಗಡೆ: ಮಹಿಳಾ ಪ್ರಧಾನ ಸಿನಿಮಾದಲ್ಲಿ ನಿಶಾ ರವಿಕೃಷ್ಣನ್ ಮಿಂಚು

‘ಅಂಶು’ ಚಿತ್ರದ ಟ್ರೇಲರ್ ಬಿಡುಗಡೆ: ಮಹಿಳಾ ಪ್ರಧಾನ ಸಿನಿಮಾದಲ್ಲಿ ನಿಶಾ ರವಿಕೃಷ್ಣನ್ ಮಿಂಚು

0

ಗಟ್ಟಿಮೇಳ ಧಾರಾವಾಹಿಯ ಅಮೂಲ್ಯ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದಿರುವ ನಿಶಾ ರವಿಕೃಷ್ಣನ್ ‘ಅಂಶು’ ಎಂಬ ಮಹಿಳಾ ಪ್ರಧಾನ ಸಿನಿಮಾ ಮೂಲಕ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚುವ ಸಿದ್ಧತೆಯಲ್ಲಿದ್ದಾರೆ.

Join Our Whatsapp Group

ಅಂಥದ್ದೊಂದು ಕಥೆ, ವಿಭಿನ್ನ ಜಾನರ್​​, ಪಕ್ಕಾ ಕಮರ್ಶಿಯಲ್ ಬಗೆಯಲ್ಲಿ ರೂಪುಗೊಂಡಿರುವ ಸಿನಿಮಾವೇ ‘ಅಂಶು’. ಇತ್ತೀಚೆಗೆ ಬಿಡುಗಡೆಯಾಗಿರುವ ಅಂಶು ಚಿತ್ರದ ಟ್ರೇಲರ್ ​​ನಲ್ಲಿಯೂ ಅಂಥದ್ದೇ ಒಂದು ಸೆಳೆತವಿದೆ. ಮಹಿಳಾ ಪ್ರಧಾನ ಕಥಾನಕ ಒಳಗೊಂಡಿರುವ ಈ ಟ್ರೇಲರ್​​ ಸಿನಿಮಾದತ್ತ ಕುತೂಹಲ ಕೇಂದ್ರೀಕರಿಸಿಕೊಳ್ಳುವಲ್ಲಿ ಯಶಸ್ಸು ಕಂಡಿದೆ.

ಚಿತ್ರದಲ್ಲಿ ನಿಶಾ ರವಿಕೃಷ್ಣನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸೀರಿಯಲ್ ಇಮೇಜನ್ನು ಮೀರಿದ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಎಂ.ಸಿ.ಚನ್ನಕೇಶವ ಆ್ಯಕ್ಷನ್​ ಕಟ್​​ ಹೇಳಿದ್ದು, ಅವರ ನಿರ್ದೇಶನದ ಚೊಚ್ಚಲ ಚಿತ್ರವಿದು. ನಾವು ನಂಬೋದೆಲ್ಲಾ ನಿಜ ಅಲ್ಲ, ಸಹಿಸಲು ಆಗದಿರೋದೆಲ್ಲ ಸುಳ್ಳಲ್ಲ ಅಂತಾ ಶುರುವಾಗುವ ಈ ಟ್ರೇಲರ್​ ವೀಕ್ಷಿಸಿದ ಮಂದಿಯಲ್ಲಿ ಒಂದಷ್ಟು ಪ್ರಶ್ನೆಗಳು ಮೂಡಬಹುದು. ಅದಕ್ಕುತ್ತರವೆಂಬಂತೆ, ಬೆರಗಿನ ಸಂಗತಿಗಳನ್ನು ಚಿತ್ರತಂಡ ತೆರೆದಿಟ್ಟಿದೆ.

ಚಿತ್ರತಂಡದ ಪ್ರಕಾರ, ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಜಾನರ್​ನ ಸಿನಿಮಾ. ಈ ಸಮಾಜದಲ್ಲಿ ಇಂದಿನ ದಿನಮಾನದಲ್ಲಿ ಘಟಿಸುತ್ತಿರುವ ವಿಚಾರಗಳನ್ನಿಟ್ಟುಕೊಂಡು, ಅತ್ಯಂತ ಪರಿಣಾಮಕಾರಿಯಾಗಿ ದೃಷ್ಯೀಕರಿಸಲಾಗಿದೆಯಂತೆ. ಅದರ ಒಂದು ಝಲಕ್​ ಅನ್ನು ಈಗಾಗಲೇ ಅನಾವರಣಗೊಂಡಿರುವ ಟ್ರೇಲರ್​​​ ಒದಗಿಸಿದೆ.

ಗ್ರಹಣ ಎಲ್‌ಎಲ್‌ಪಿ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣಗೊಂಡಿದೆ. ರತನ್ ಗಂಗಾಧರ್, ಸಂಪತ್ ಶಿವಶಂಕರ್, ಕೃತಿ ನಾಣಯ್ಯ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಭಜರಂಗಿ 2, ವೇದ ಚಿತ್ರಗಳಲ್ಲಿ ವಿಲನ್ ಆಗಿ ನಟಿಸಿದ್ದ, ಈಗ ಬಾಲಿವುಡ್​ನಲ್ಲಿ ಸಕ್ರಿಯರಾಗಿರುವ ಚಲುವರಾಜ್ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಜೈಚಂದ್ರ, ಪ್ರಮೋದ್, ಡಾ.ಮಧುರಾಜ್ ಮತ್ತು ವೀರನ್ ಗೌಡ ಕೂಡಾ ಅಂಶು ನಿರ್ಮಾಣದಲ್ಲಿ ಸಹಭಾಗಿಗಳು. ಈ ಹಿಂದೆ ಅಂಶು ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಗೊಂಡಿತ್ತು. ಲಂಡನ್​ನಲ್ಲಿ ಡಾಕ್ಟರ್ ಆಗಿರುವ ಮಧುರಾಜ್ ಅದನ್ನು ನೋಡಿ ಥ್ರಿಲ್ ಆಗಿ ನಿರ್ಮಾಣ ತಂಡಕ್ಕೆ ಸೇರಿಕೊಂಡಿದ್ದಾರೆ.

ಇನ್ನುಳಿದಂತೆ, ನಿರ್ದೇಶಕ ಚನ್ನಕೇಶವ ಸೇಂಟ್ ಜೋಸೆಫ್ಸ್ ಯೂನಿವರ್ಸಿಟಿಯಲ್ಲಿ ಫಿಲಂ ಮೇಕಿಂಗ್ ಕೋರ್ಸ್ ಮುಗಿಸಿಕೊಂಡಿರುವವರು. ಚಿತ್ರದಲ್ಲಿ ಸಮಾಜಮುಖಿ ಕಥೆಗೆ ಕಮರ್ಶಿಯಲ್ ಧಾಟಿಯಲ್ಲಿ ದೃಷ್ಯರೂಪ ನೀಡಿದ್ದಾರೆ. ಇನ್ನುಳಿದಂತೆ, ದೂಡಿ ಎಂಬ ತಮಿಳು ಚಿತ್ರ, ಕನ್ನಡದ ಗರುಡ ಪುರಾಣ ಮುಂತಾದ ಸಿನಿಮಾಗಳಿಗೆ ಕೆಲಸ ಮಾಡಿದ್ದ ಸುನೀಲ್ ನರಸಿಂಹಮೂರ್ತಿ ಛಾಯಾಗ್ರಾಹಕರಾಗಿ ಚಿತ್ರದ ಭಾಗವಾಗಿದ್ದಾರೆ. ಜಿ.ವಿ.ಪ್ರಕಾಶ್, ವಿದ್ಯಾಸಾಗರ್ ಜೊತೆ ಪ್ರೋಗ್ರಾಮರ್ ಆಗಿದ್ದ ಕೆ.ಸಿ.ಬಾಲಸಾರಂಗನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ನವ ಪ್ರತಿಭೆ ವಿಘ್ನೇಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಮಹೇಂದ್ರ ಗೌಡ ಸಂಭಾಷಣೆ ಮತ್ತು ಸಾಹಿತ್ಯದ ಜವಾಬ್ದಾರಿ ಹೊತ್ತಿದ್ದಾರೆ. ಇವರು ಬರೆದಿರುವ ಎರಡು ಹಾಡುಗಳು ಈಗಾಗಲೇ ಬಿಡುಗಡೆಗೊಂಡು ಕೇಳುಗರ ಮೆಚ್ಚುಗೆ ಗಿಟ್ಟಿಸಿವೆ. ಇನ್ನುಳಿದ ಹಾಡು ಇಷ್ಟರಲ್ಲಿಯೇ ಬಿಡುಗಡೆಗೊಳ್ಳಲಿದೆ. ಅದರ ಬೆನ್ನಲ್ಲೇ ಅಂಶು ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.