ಬೆಂಗಳೂರು (Bengaluru): ಆಗಸ್ಟ್ 28ರಂದು ನಡೆಯಲಿರುವ ಏಷ್ಯಾ ಕಪ್ 2022 ಟೂರ್ನಿಯಲ್ಲಿನ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾದ ಸ್ಟಾರ್ ಆಟಗಾರ ಕೆ.ಎಲ್.ರಾಹುಲ್ ಕಮ್ ಬ್ಯಾಕ್ ಮಾಡಲಿದ್ದಾರೆ. ಆದರೆ, ಈ ಟೂರ್ನಿಗೂ ಮುನ್ನ ರಾಹುಲ್ ತಮ್ಮ ಫಿಟ್ನೆಸ್ ಸಾಬೀತು ಪಡಿಸಬೇಕಾಗಿದೆ.
ಟೂರ್ನಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದ್ದು, ರಾಹುಲ್ಗೆ ಉಪನಾಯಕನ ಪಟ್ಟ ಕೂಡ ನೀಡಿದೆ. ಐಪಿಎಲ್ 2022 ಟೂರ್ನಿ ಬಳಿಕ ರಾಹುಲ್ ಈವರೆಗೆ ಒಂದು ಪಂದ್ಯವನ್ನೂ ಆಡಿಲ್ಲ. ಐಪಿಎಲ್ ಬೆನ್ನಲ್ಲೇ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡವನ್ನು ರಾಹುಲ್ ಮುನ್ನಡೆಸಬೇಕಿತ್ತು. ಆದರೆ ತೊಡೆ ಸಂಧು ನೋವಿನ ಗಾಯದ ಸಮಸ್ಯೆ ಎದುರಿಸಿದರು. ಇದೇ ಕಾರಣಕ್ಕೆ ಇಂಗ್ಲೆಂಡ್ ಪ್ರವಾಸದಿಂದಲೂ ಹೊರಗುಳಿದರು. ಬಳಿಕ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡ ಸೇರಿಕೊಳ್ಳಬೇಕಿತ್ತು. ಆದರೆ, ಕೊರೊನಾ ವೈರಸ್ (ಕೋವಿಡ್-19) ಸೋಂಕಿಗೆ ತುತ್ತಾದರು. ಇದೇ ಕಾರಣಕ್ಕೆ ಮುಂಬರುವ ಜಿಂಬಾಬ್ವೆ ಪ್ರವಾಸದಿಂದಲೂ ಹೊರಗುಳಿದರು.
ಪಾಕಿಸ್ತಾನ ವಿರುದ್ಧದ ಹೈ-ವೋಲ್ಟೇಜ್ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡುವುದನ್ನು ಎದುರು ನೋಡುತ್ತಿರುವ ರಾಹುಲ್ ಇದಕ್ಕೂ ಮೊದಲು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತಮ್ಮ ಫಿಟ್ನೆಸ್ ಸಾಬೀತು ಪಡಿಸಬೇಕಿದೆ. ಈ ಅಗ್ನಿ ಪರೀಕ್ಷೆಯಲ್ಲಿ ಪಾಸಾದರಷ್ಟೇ ಅವರಿಗೆ ಭಾರತ ತಂಡ ಸೇರಲು ಗ್ರೀನ್ ಸ್ನಿಗ್ನಲ್ ಸಿಗಲಿದೆ. ಟೂರ್ನಿಯಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಜೊತೆಗೆ ರಾಹುಲ್ ಇನಿಂಗ್ಸ್ ಆರಂಭಿಸಲು ಇರುವ ಮೊದಲ ಆಯ್ಕೆಯ ಓಪನರ್ ಆಗಿದ್ದಾರೆ.
ಇನ್ನು ಟೂರ್ನಿಯಲ್ಲಿ ಭಾರತ ತಂಡ ತನ್ನ ಸ್ಟಾರ್ ಬೌಲರ್ಗಳ ಸೇವೆ ಇಲ್ಲದೇ ಕಣಕ್ಕಿಳಿಯುತ್ತಿದೆ. ಗಾಯದ ಸಮಸ್ಯೆ ಎದುರಿಸಿರುವ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಏಷ್ಯಾ ಕಪ್ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಏಷ್ಯಾ ಕಪ್ ಆಡಲಿರುವ ಭಾರತ ತಂಡ
ಓಪನರ್ಸ್: ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್, ಮಧ್ಯಮ ಕ್ರಮಾಂಕದ ಬ್ಯಾಟರ್ಸ್: ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ವಿಕೆಟ್ಕೀಪರ್ಸ್: ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್, ಆಲ್ರೌಂಡರ್ಸ್: ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ, ವೇಗದ ಬೌಲರ್ಸ್: ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಸ್ಪಿನ್ನರ್ಸ್: ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ರವಿ ಬಿಷ್ಣೋಯ್, ಕಾಯ್ದಿರಿಸಿದ ಆಟಗಾರರು: ಅಕ್ಷರ್ ಪಟೇಲ್, ದೀಪಕ್ ಚಹರ್ ಮತ್ತು ಶ್ರೇಯಸ್ ಅಯ್ಯರ್.