ಬೆಂಗಳೂರು (Bengaluru): ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಕೋವಿಡ್ ಸಮಯದಲ್ಲಿದ್ದ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವರು, ಗಣೇಶೋತ್ಸವ ಆಚರಣೆಗೆ ಯಾವುದೇ ಇತಿ ಮಿತಿಯಾಗಲೀ, ನಿರ್ಬಂಧವಾಗಲೀ ಇರುವುದಿಲ್ಲ. ಈ ಬಾರಿ ಸಾರ್ವಜನಿಕ ಗಣೇಶೋತ್ಸವವನ್ನು ಕೋವಿಡ್ ಪೂರ್ವದಲ್ಲಿ ಯಾವ ರೀತಿ ಬೀದಿಗಳಲ್ಲಿ ಆಚರಿಸುತ್ತಿದ್ದರೋ ಆ ರೀತಿ ಆಚರಿಸಬಹುದು. ರಸ್ತೆಗೊಂದು, ವಾರ್ಡ್ಗೊಂದು, ಬೀದಿಗೊಂದು ಎಂಬ ನಿಯಮಗಳು ಇರುವುದಿಲ್ಲ ಎಂದರು.
ಬೆಂಗಳೂರು ನಗರದಲ್ಲಿ ವಾರ್ಡ್ಗೆ ಒಂದು ಗಣೇಶ ಕೂರಿಸಬೇಕು ಎಂಬ ಮಹಾನಗರ ಪಾಲಿಕೆ ನಿಯಮಗಳ ಬಗ್ಗೆ ಸ್ಪಷ್ಟನೆ ನೀಡಿ, ಈ ಹಿಂದೆ ಕೋವಿಡ್ ಇದ್ದ ಕಾರಣ ಗಣೇಶೋತ್ಸವ ಆಚರಣೆಗೆ ಮಿತಿ ಹೇರಲಾಗಿತ್ತು. ಈಗ ಆ ರೀತಿಯ ಯಾವುದೇ ನಿಯಮಗಳು ಇಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ ಎಂದರು.
ಗಣೇಶೋತ್ಸವ ಸಂದರ್ಭದಲ್ಲಿ ಪ್ಲಾಸ್ಟಿಕ್ ಮತ್ತು ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶಮೂರ್ತಿ ಕೂರಿಸಲು ಆವಕಾಶವಿಲ್ಲ. ಪರಿಸರ ಪ್ರೇಮಿ ಮಣ್ಣಿನ ಗಣೇಶ ಮೂರ್ತಿಗಳನ್ನು ಕೂರಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.