ಮನೆ ಕಾನೂನು ಕಾಲೇಜಿನಲ್ಲಿ ಹಿಜಾಬ್‌ ಮತ್ತಿತರ ಧಿರಿಸು ನಿಷೇಧ: ಬಾಂಬೆ ಹೈಕೋರ್ಟ್ ಮೊರೆ ಹೋದ ವಿದ್ಯಾರ್ಥಿಗಳು

ಕಾಲೇಜಿನಲ್ಲಿ ಹಿಜಾಬ್‌ ಮತ್ತಿತರ ಧಿರಿಸು ನಿಷೇಧ: ಬಾಂಬೆ ಹೈಕೋರ್ಟ್ ಮೊರೆ ಹೋದ ವಿದ್ಯಾರ್ಥಿಗಳು

0

ತಮ್ಮ ಧರ್ಮವನ್ನು ಪ್ರತಿನಿಧಿಸುವ ಬುರ್ಖಾ, ನಖಾಬ್‌, ಪದಕ, ಟೊಪ್ಪಿಗೆ ಅಥವಾ ಸ್ಟ್ರೋಲ್‌ಗಳಂತಹ ಬಟ್ಟೆ ಧರಿಸುವುದನ್ನು ನಿರ್ಬಂಧಿಸಿ ಮುಂಬೈನ ಕಾಲೇಜೊಂದು ವಿಧಿಸಿರುವ ವಸ್ತ್ರ ಸಂಹಿತೆಯನ್ನು ಒಂಬತ್ತು ವಿದ್ಯಾರ್ಥಿಗಳು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

Join Our Whatsapp Group

ಜೂನ್ 4ರ ಹೊಸ ಶೈಕ್ಷಣಿಕ ವರ್ಷದಿಂದ ವಸ್ತ್ರ ಸಂಹಿತೆ ಜಾರಿಗೆ ತರಲು ಉದ್ದೇಶಿಸಲಾಗಿತ್ತು. ವಸ್ತ್ರ ಸಂಹಿತೆಯ ಮಾರ್ಗಸೂಚಿಗಳನ್ನು ಅಧ್ಯಾಪಕರು ಎರಡನೇ ಮತ್ತು ಮೂರನೇ ವರ್ಷದ ಪದವಿ ವಿದ್ಯಾರ್ಥಿಗಳಿಗೆ ವಾಟ್ಸಾಪ್‌ ಮೂಲಕ ನೀಡಿದ್ದರು.

ನ್ಯಾಯಮೂರ್ತಿಗಳಾದ ಎ ಎಸ್ ಚಂದೂರ್ಕರ್ ಮತ್ತು ರಾಜೇಶ್ ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಜೂನ್ 18ರಂದು ಅರ್ಜಿ ಆಲಿಸುವ ಸಾಧ್ಯತೆಯಿದೆ.

ನಿಗದಿತ ಸಮವಸ್ತ್ರದ ಬದಲಿಗೆ ಹಿಜಾಬ್ ಧರಿಸಿ ಬರುತ್ತಿದ್ದ ವಿವಿಧ ಜೂನಿಯರ್ ಕಾಲೇಜು ಹುಡುಗಿಯರಿಗೆ ಕಾಲೇಜು ಪ್ರವೇಶ ನಿರಾಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಕೀಲ ಅಲ್ತಾಫ್ ಖಾನ್ ಅವರ ಮೂಲಕ ಅರ್ಜಿ ಸಲ್ಲಿಸಲಾಗಿತ್ತು.

ಕಾಲೇಜಿನ ಮಾರ್ಗಸೂಚಿಗಳು ಕಾನೂನುಬಾಹಿರ, ನಿರಂಕುಶ ಮತ್ತು ಅಸಮಂಜಸ. ಮುಂಬೈ ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾಗಿರುವ ಮತ್ತು ಮಹಾರಾಷ್ಟ್ರ ಸರ್ಕಾರದಿಂದ ನೆರವು ಪಡೆದಿರುವ ಕಾಲೇಜಿಗೆ ಅಂತಹ ನಿರ್ಬಂಧ ವಿಧಿಸುವ ಅಧಿಕಾರ ಇಲ್ಲ. ಯಾವ ಸೆಕ್ಷನ್‌ ಪ್ರಕಾರ ನಿರ್ದಿಷ್ಟ ಉಡುಪುಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂಬುದನ್ನು ಕಾಲೇಜು ಆಡಳಿತ ಮಂಡಳಿ ವಿವರಿಸಿಲ್ಲ. ನಖಾಬ್ ಮತ್ತು ಹಿಜಾಬ್ ಅರ್ಜಿದಾರರ ಧಾರ್ಮಿಕ ನಂಬಿಕೆಯ ಅವಿಭಾಜ್ಯ ಅಂಗವಾಗಿದ್ದು ತರಗತಿಯಲ್ಲಿ ನಖಾಬ್ ಮತ್ತು ಹಿಜಾಬ್ ಧರಿಸುವುದನ್ನು ಮುಂದುವರಿಸುವುದು ತಮ್ಮ ಇಚ್ಛೆ. ಇದು ಆಯ್ಕೆ ಮತ್ತು ಖಾಸಗಿತನದ ಹಕ್ಕಿನ ಭಾಗ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸದಂತೆ ನಿಷೇಧಿಸಲು ರಾಜ್ಯದ ಸರ್ಕಾರಿ ಕಾಲೇಜುಗಳಿಗೆ ಅಧಿಕಾರ ನೀಡಿ 2022ರಲ್ಲಿ ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶದ ಸಿಂಧುತ್ವ ಕುರಿತು ಸುಪ್ರೀಂ ಕೋರ್ಟ್ ಇನ್ನಷ್ಟೇ ಅಂತಿಮ ತೀರ್ಪು ನೀಡಬೇಕಿದೆ.

ಹಿಜಾಬ್ ನಿಷೇಧವನ್ನು ಕರ್ನಾಟಕ ಹೈಕೋರ್ಟ್‌ ಮಾರ್ಚ್ 2022ರಲ್ಲಿ ಎತ್ತಿ ಹಿಡಿದಿತ್ತು, ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ ಅಕ್ಟೋಬರ್ 2022ರಲ್ಲಿ ಭಿನ್ನ ತೀರ್ಪು ನೀಡಿತ್ತು. ಹೀಗಾಗಿ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯದ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿತ್ತು. ಪ್ರಕರಣ ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ.

ಹಿಂದಿನ ಲೇಖನಲಂಚಕ್ಕೆ ಬೇಡಿಕೆ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ, ಮಧ್ಯವರ್ತಿ ಲೋಕಾಯುಕ್ತ ಬಲೆಗೆ
ಮುಂದಿನ ಲೇಖನಅಶ್ವತ್ಥಾಮ ಅಸಹಜ ಸಾವು: ಸ್ವಯಂ ಪ್ರೇರಿತ ದೂರು ಸ್ವೀಕರಿಸಿದ ಕರ್ನಾಟಕ ಹೈಕೋರ್ಟ್