ಮನೆ ಸುದ್ದಿ ಜಾಲ ಬಾಂಗ್ಲಾದಲ್ಲಿ 2026ರ ಐಪಿಎಲ್‌ ಪ್ರಸಾರ ನಿಷೇಧ – ಆರ್‌ಸಿಬಿ ಬ್ರ್ಯಾಂಡ್‌ಗೂ ಸಮವಿಲ್ಲ ಕ್ರಿಕೆಟ್‌ನ ಆದಾಯ

ಬಾಂಗ್ಲಾದಲ್ಲಿ 2026ರ ಐಪಿಎಲ್‌ ಪ್ರಸಾರ ನಿಷೇಧ – ಆರ್‌ಸಿಬಿ ಬ್ರ್ಯಾಂಡ್‌ಗೂ ಸಮವಿಲ್ಲ ಕ್ರಿಕೆಟ್‌ನ ಆದಾಯ

0

ಢಾಕಾ : ದುಬಾರಿ ಬೆಲೆಗೆ ಬಿಕರಿಯಾಗಿದ್ದ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್‌ ಅವರನ್ನು ಐಪಿಎಲ್‌ನಿಂದ ಹೊರದಬ್ಬಿದ ಬಳಿಕ ಬಾಂಗ್ಲಾದೇಶ ಹೊಸ ಕ್ಯಾತೆ ಶುರು ಮಾಡಿದೆ. ತನ್ನ ದೇಶಾದ್ಯಂತ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪ್ರಸಾರ ನಿಷೇಧಿಸುವಂತೆ ಆದೇಶ ಹೊರಡಿಸಿದೆ.

ಅನಿರ್ದಿಷ್ಟಾವಧಿವರೆಗೆ ಐಪಿಎಲ್‌ ಪ್ರಸಾರ ನಿಷೇಧಿಸುವಂತೆ ಬಾಂಗ್ಲಾದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ದೇಶದ ಟಿವಿ ಚಾನೆಲ್‌ಗಳಿಗೆ ಸುತ್ತೋಲೆ ಹೊರಡಿಸಿದೆ. ಬಿಸಿಸಿಐ ನಿರ್ಧಾರದ ಹಿಂದೆ ಯಾವುದೇ ನಿರ್ದಿಷ್ಟ ಕಾರಣ ಇಲ್ಲ. ಮುಸ್ತಾಫಿಜುರ್‌ ರೆಹಮಾನ್‌ ಅವರನ್ನ ಐಪಿಎಲ್‌ನಿಂದ ಹೊರಗೆ ಕಳಿಸಿದ್ದು, ದೇಶದ ಜನರಿಗೆ ಅತೀವ ನೋವುಂಟು ಮಾಡಿದೆ. ಹೀಗಾಗಿ 2026 ರ ಮಾರ್ಚ್‌ 26 ರಿಂದ ಆರಂಭವಾಗಲಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪ್ರಸಾರ ನಿಲ್ಲಿಸಲಾಗುತ್ತಿದೆ ಎಂದು ಸಚಿವಾಲಯ ಹೇಳಿದೆ.

ಮುಂದಿನ ಸೂಚನೆ ಬರುವವರೆಗೆ ಐಪಿಎಲ್‌ನ ಎಲ್ಲಾ ಪಂದ್ಯಗಳು ಹಾಗೂ ಕಾರ್ಯಕ್ರಮಗಳ ಪ್ರಸಾರ ನಿಲ್ಲಿಸುವಂತೆ ಸೂಚಿಸಲಾಗಿದೆ. ಬಿಸಿಸಿಐ ತನ್ನ ನಿರ್ಧಾರಕ್ಕೆ ಸೂಕ್ತ ಕಾರಣ ತಿಳಿಸಿಲ್ಲ. ಆದ್ರೆ ರೆಹಮಾನ್‌ ವಿಚಾರದಲ್ಲಿ ಕೈಗೊಂಡ ನಿರ್ಧಾರವು ಬಾಂಗ್ಲಾ ವಿರೋಧಿ ಭಾವನೆಗೆ ಪುಷ್ಠಿ ಕೊಟ್ಟಂತಾಗಿದೆ ಎಂದು ಅನ್ನೋದು ಬಾಂಗ್ಲಾದ ಆರೋಪವಾಗಿದೆ.

ಬಾಂಗ್ಲಾದಲ್ಲಿ ಐಪಿಎಲ್‌ ಪ್ರಸಾರ ನಿಷೇಧಿಸಿರೋದ್ರಿಂದ ಆದಾಯದ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ. ಏಕೆಂದ್ರೆ ಬಾಂಗ್ಲಾದ‌ ಕ್ರಿಕೆಟ್‌ನ ವಾರ್ಷಿಕ ಆದಾಯ 423 ಕೋಟಿ ಇದ್ದರೆ, ಆರ್‌ಸಿಬಿ ಫ್ರಾಂಚೈಸಿಯ ಬ್ರ್ಯಾಂಡ್‌ವ್ಯಾಲ್ಯೂ 2,259 ಕೋಟಿ ರೂ. ಇದೆ. ಅಲ್ಲದೇ ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಆಗಿರುವ ಐಪಿಎಲ್‌ನ‌ ಬ್ರ್ಯಾಂಡ್‌ ವ್ಯಾಲ್ಯೂ 2024 ರಿಂದ 76,100 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಹೀಗಾಗಿ ಐಪಿಎಲ್‌ ಪ್ರಸಾರ ನಿಷೇಧದಿಂದ ಫ್ರಾಂಚೈಸಿಗಳಿಗಾಗಲಿ, ಬಿಸಿಸಿಐ ಆದಾಯದ ಮೇಲಾಗಲಿ ಯಾವುದೇ ಪರಿಣಾಮ ಬೀರೋದಿಲ್ಲ.

2026ರ ಐಪಿಎಲ್‌ ಟೂರ್ನಿಗಾಗಿ ಡಿಸೆಂಬರ್‌ನಲ್ಲಿ ನಡೆದ ಹರಾಜಿನಲ್ಲಿ ಮುಸ್ತಾಫಿಜುರ್ ರೆಹಮಾನ್‌ ಅವರನ್ನ ಕೆಕೆಆರ್‌ ಫ್ರಾಂಚೈಸಿಯು 9.20 ಕೋಟಿ ರೂ. ನೀಡಿ ಖರೀದಿಸಿತ್ತು. ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಬಾಂಗ್ಲಾ ಆಟಗಾರ ಎಂಬ ಹೆಗ್ಗಳಿಕೆಗೂ ಮುಸ್ತಾಫಿಜುರ್ ಪಾತ್ರವಾಗಿದ್ದರು. ಆದ್ರೆ ಶೇಖ್‌ ಹಸೀನಾ ಸರ್ಕಾರ ಪತನದ ಬಳಿಕ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಹಾಳಾಗಿದೆ.

ಈಗ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಕಾರಣ ಬಾಂಗ್ಲಾದೇಶದ ಆಟಗಾರರು ಐಪಿಎಲ್‌ನಲ್ಲಿ ಆಡಬಾರದು ಎಂಬ ಆಕ್ರೋಶ ಕ್ರಿಕೆಟ್‌ ಅಭಿಮಾನಿಗಳಿಂದ ವ್ಯಕ್ತವಾಗಿತ್ತು. ಒತ್ತಡ ಜಾಸ್ತಿಯಾಗುತ್ತಿದ್ದಂತೆ ಬಿಸಿಸಿಐ ಮಧ್ಯಪ್ರವೇಶಿಸಿ ಮುಸ್ತಾಫಿಜುರ್ ರೆಹಮಾನ್ ಅವರನ್ನ ಕೆಕೆಆರ್‌ನಿಂದ ಕೈಬಿಡುವಂತೆ ಫ್ರಾಂಚೈಸಿಗೆ ಸೂಚಿಸಿತ್ತು.