ಮನೆ ಅಪರಾಧ ಬೆಂಗಳೂರು : ನಡು ರಸ್ತೆಯಲ್ಲೇ ರೌಡಿಶೀಟರ್‌ ನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ

ಬೆಂಗಳೂರು : ನಡು ರಸ್ತೆಯಲ್ಲೇ ರೌಡಿಶೀಟರ್‌ ನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ

0

ಬೆಂಗಳೂರು: ಕಾಡುಗೋಡಿ ಪ್ರದೇಶದಲ್ಲಿ ರೌಡಿಶೀಟರ್ ಪುನೀತ್ @ ನೇಪಾಳಿ ಪುನೀತ್ ಎಂಬಾತನನ್ನು ದುಷ್ಕರ್ಮಿಗಳು ನಡು ರಸ್ತೆಯಲ್ಲಿ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಕೊಲೆಯಾಗಿರುವ ಪುನೀತ್ ಕಾಡುಗೋಡಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದಾನೆ. ಈತ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮಿಲಾಗಿದ್ದ ಎನ್ನಲಾಗಿದೆ. ಮಂಗಳವಾರ ರಾತ್ರಿ ಕಾಡುಗೋಡಿಯ ವಿಜಯಲಕ್ಷ್ಮೀ ಲೇಔಟ್ ಬಳಿ ನಡೆದ ಈ ಘಟನೆ ಅತ್ಯಂತ ಕ್ರೂರ ರೀತಿಯಲ್ಲಿ ನಡೆದಿದ್ದು, ಘಟನೆ ಸಮಯದಲ್ಲಿ ಪುನೀತ್ ಏಕಾಂಗಿಯಾಗಿದ್ದ ವೇಳೆ ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಆತನ ಮೇಲೆ ಮಚ್ಚಿನಿಂದ ದಾಳಿ ಮಾಡಿದ್ದಾರೆ.

ದುಷ್ಕರ್ಮಿಗಳು ಪುನೀತ್‌ನ ಮೇಲೆ ನಿರ್ದಾಕ್ಷಿಣ್ಯವಾಗಿ ಹಲವಾರು ಮಚ್ಚಿನಿಂದ ಕೊಚ್ಚಿ ತಲೆಮರೆಸಿಕೊಂಡಿದ್ದಾರೆ. ಸ್ಥಳದಲ್ಲಿ ಬಿದ್ದಿದ್ದ ಪುನೀತ್‌ನ ದೇಹವನ್ನು ಸ್ಥಳೀಯರು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.

ಘಟನೆಗೆ ಕಾರಣವಾಗಿರಬಹುದಾದ ಶಂಕಿತ ವ್ಯಕ್ತಿಯಾಗಿ ರೌಡಿಶೀಟರ್ ಶ್ರೀಕಾಂತ್ ಮತ್ತು ಆತನ ತಂಡದ ಹೆಸರು ಮೇಲೆ ಬರುತ್ತಿದೆ. ಮೂಲಗಳ ಪ್ರಕಾರ, ಪುನೀತ್ ಮತ್ತು ಶ್ರೀಕಾಂತ್ ನಡುವಿನ ವೈಷಮ್ಯ ಹಲವು ದಿನಗಳಿಂದ ಸಾಗುತ್ತಿದ್ದು, ಪುನೀತ್ ಬಹಿರಂಗವಾಗಿ ಶ್ರೀಕಾಂತ್‌ನನ್ನು ಕೊಲೆ ಮಾಡುವ ಬೆದರಿಕೆ ನೀಡುತ್ತಿದ್ದ. ಈ ಹಿನ್ನೆಲೆಯಲ್ಲಿ ಶ್ರೀಕಾಂತ್‌ ಮನಸ್ಸಿನಲ್ಲಿ ಪ್ರತೀಕಾರದ ಭಾವನೆ ಮೂಡಿದ್ದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಈ ಕ್ರೂರ ಕೃತ್ಯಕ್ಕೆ ಸಂಬಂಧಿಸಿದಂತೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಶಂಕಿತ ಆರೋಪಿ ಶ್ರೀಕಾಂತ್ ಹಾಗೂ ಆತನ ಸಹಚರರನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಸ್ಥಳೀಯರ ಮಾಹಿತಿ ಆಧಾರದ ಮೇಲೆ ತನಿಖೆ ಮುಂದುವರೆದಿದೆ.