ಮನೆ ರಾಜ್ಯ ಬಿಜೆಪಿ ಭಿನ್ನಮತ: ದಿಢೀರ್ ಅಸಮಾಧಾನಕ್ಕೆ ಕಾರಣವಾಯ್ತು ವಿಜಯೇಂದ್ರ ನಡೆ..!

ಬಿಜೆಪಿ ಭಿನ್ನಮತ: ದಿಢೀರ್ ಅಸಮಾಧಾನಕ್ಕೆ ಕಾರಣವಾಯ್ತು ವಿಜಯೇಂದ್ರ ನಡೆ..!

0

ಬೆಂಗಳೂರು : ಧರ್ಮಸ್ಥಳ ಚಲೋ ಹಮ್ಮಿಕೊಂಡಿದ್ದ, ಬಿಜೆಪಿ ಕೊನೆಯ ಕ್ಷಣದಲ್ಲಿ ಹತ್ಯೆಗೀಡಾಗಿದ್ದ ಸೌಜನ್ಯ ನಿವಾಸಕ್ಕೆ ಭೇಟಿ ಕಾರ್ಯಕ್ರಮ ನಿಗದಿಪಡಿಸಿತ್ತು. ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ಅವರು ಸೌಜನ್ಯ ತಾಯಿ ಕುಸುಮಾವತಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಮಾತುಕತೆ ಮಾಡಿ ಸೌಜನ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸುವುದಾದರೆ ಅಗತ್ಯ ಕಾನೂನು ನೆರವು ನೀಡುವ ಭರವಸೆಯನ್ನೂ ನೀಡಿ ಬಂದಿದ್ದರು. ಆದರೆ, ಸೌಜನ್ಯ ನಿವಾಸಕ್ಕೆ ಭೇಟಿ ನೀಡಿದ್ದು ಈಗ ಬಿಜೆಪಿಯೊಳಗೇ ಆಕ್ಷೇಪಕ್ಕೆ ಕಾರಣವಾಗಿದೆ.

ಪಕ್ಷದಲ್ಲಿ ಮೊದಲೇ ಚರ್ಚೆ ನಡೆಸದೇ ಏಕಾಏಕಿ ರಾಜ್ಯಾಧ್ಯಕ್ಷ ವಿಜಯೇಂದ್ರ‌ ನಿರ್ಧಾರ ತೆಗೆದುಕೊಂಡರು ಎಂಬ ಅಸಮಾಧಾನದೊಂದಿಗೇ ಬಿಜೆಪಿ ನಾಯಕರು ಧರ್ಮಸ್ಥಳದಿಂದ ಬೆಂಗಳೂರಿಗೆ ವಾಪಸಾಗಿದ್ದರೆ, ಧಾರ್ಮಿಕ ಕೇಂದ್ರದ ಪರವಾಗಿ ಸಮಾವೇಶ ನಡೆಸಿ ನಂತರ ಸೌಜನ್ಯ ‌ನಿವಾಸಕ್ಕೆ ಭೇಟಿ ನೀಡಬೇಕಾದ ಅವಶ್ಯಕತೆ ಏನಿತ್ತು ಎಂಬ ಆಕ್ಷೇಪವನ್ನೂ ಆಂತರಿಕವಾಗಿ ಕೆಲವು ಮಂದಿ ಬಿಜೆಪಿ ನಾಯಕರು ಎತ್ತಿದ್ದಾರೆ.

ಇನ್ನೊಂದೆಡೆ, ಸಮಾವೇಶದಲ್ಲಿ ಕರಾವಳಿ ಮೂಲದ ಬಿಜೆಪಿ ನಾಯಕರಿಗೇ ಭಾಷಣಕ್ಕೆ ಅವಕಾಶ ದೊರೆಯದ ವಿಚಾರ ಗಮನ ಸೆಳೆದಿದೆ. ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಶಾಸಕ ಸುನೀಲ್ ಕುಮಾರ್ ಸೇರಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಮೂಲದ ನಾಯಕರು ವೇದಿಕೆ ಮೇಲೆ ಕುಳಿತು ಎದ್ದು ಹೋಗುವುದಕ್ಕಷ್ಟೇ ಸೀಮಿತವಾದರು.

ಅದರಲ್ಲೂ ವಿಧಾನಸಭೆಯಲ್ಲಿ ಧರ್ಮಸ್ಥಳ ಪ್ರಕರಣವನ್ನು ಪ್ರಸ್ತಾಪಿಸಿದ್ದ ಶಾಸಕ ಸುನೀಲ್ ಕುಮಾರ್​ಗೂ ಭಾಷಣಕ್ಕೆ ಅವಕಾಶ ನೀಡದಿರುವುದು ಗಮನಾರ್ಹವಾಗಿದೆ. ಆದರೆ ಇದಕ್ಕೆ ಸಮಯಾವಕಾಶದ ಕೊರತೆ ಎಂಬ ಸಮಜಾಯಿಷಿಯನ್ನೂ ಬಿಜೆಪಿ ಕೊಟ್ಟುಕೊಂಡಿದೆ.

ಒಟ್ಟಾರೆಯಾಗಿ ಧರ್ಮಸ್ಥಳ ಪ್ರಕರಣವನ್ನು ಎನ್ಐಎಗೆ ಒಪ್ಪಿಸಬೇಕೆಂಬ ವಿಪಕ್ಷ ಬಿಜೆಪಿ ಆಗ್ರಹಕ್ಕೆ ರಾಜ್ಯ ಸರ್ಕಾರ ಸೊಪ್ಪು ಹಾಕಿಲ್ಲ. ಇದರ ಮಧ್ಯೆ ಸೌಜನ್ಯ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ‌ ಭೇಟಿ ಕೊಟ್ಟಿದ್ದು, ಪಕ್ಷದ ನಡೆ ಸಕಾಲಿಕ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ಆದರೆ ಇದು ಬಿಜೆಪಿ ಯಾರ ಪರ ಎಂದು ಕಾಂಗ್ರೆಸ್ ಪ್ರಶ್ನೆ ಎತ್ತುವಂತೆ ಮಾಡಿದೆ. ಇದರ ಜೊತೆಗೆ ಸ್ವಪಕ್ಷೀಯರೇ ವಿಜಯೇಂದ್ರ‌ ನಿರ್ಧಾರದ ಬಗ್ಗೆ ಆಕ್ಷೇಪ ಎತ್ತುವಂತಾಗಿದೆ.