ಮನೆ Uncategorized ಇಂದು, ನಾಳೆ ಸಿಇಸಿ ಸಭೆ: ರಾಜ್ಯದಿಂದ ಕೆ.ಜೆ.ಜಾರ್ಜ್ ಭಾಗಿ

ಇಂದು, ನಾಳೆ ಸಿಇಸಿ ಸಭೆ: ರಾಜ್ಯದಿಂದ ಕೆ.ಜೆ.ಜಾರ್ಜ್ ಭಾಗಿ

0

ಬೆಂಗಳೂರು: ಎರಡು ರಾಜ್ಯಗಳು ಮತ್ತು ವಿವಿಧ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣಾ ಸಿದ್ಧತೆಗಳ ಕುರಿತು ಚರ್ಚಿಸಲು ಅ. 20 ಮತ್ತು 21ರಂದು ದೆಹಲಿಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ರಾಜ್ಯದಿಂದ ಸಮಿತಿ ಸದಸ್ಯರೂ ಆಗಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಪಾಲ್ಗೊಳ್ಳಲಿದ್ದಾರೆ.

Join Our Whatsapp Group

ಮಹಾರಾಷ್ಟ್ರದಲ್ಲಿ ನ. 20ರಂದು ಒಂದೇ ಹಂತದಲ್ಲಿ ಮತ್ತು ಜಾರ್ಖಂಡ್ ನಲ್ಲಿ ನ. 13 ಮತ್ತು 20ರಂದು 2 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಇದಲ್ಲದೆ, ನ. 13ರಂದು ಕರ್ನಾಟಕದ ಮೂರು ಕ್ಷೇತ್ರಗಳು ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದೆ. ಈ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣಾ ಸಿದ್ಧತೆ ಕುರಿತಂತೆ ಸಭೆಯಲ್ಲಿ ಮೊದಲ ಹಂತದ ಸಮಾಲೋಚನೆ ನಡೆಯಲಿದೆ. ಕಾಂಗ್ರೆಸ್ ಚುನಾವಣಾ ಸಮಿತಿಯಲ್ಲಿ ಕರ್ನಾಟಕದಿಂದ ಸಚಿವ ಕೆ.ಜೆ.ಜಾರ್ಜ್ ಮಾತ್ರ ಸದಸ್ಯರಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಇಂಡಿಯಾ ಕೂಟದಲ್ಲಿ ಕಣಕ್ಕಿಳಿಯುತ್ತಿದ್ದು, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಹಾಗೂ ಬಿಜೆಪಿ ಮೈತ್ರಿ ಸರ್ಕಾರವನ್ನು ಕೆಳಗಿಳಿಸಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಅದೇ ರೀತಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ರಾಜ್ಯದ ಮೂರು ಕ್ಷೇತ್ರಗಳಲ್ಲಿ ಗೆಲ್ಲುವುದು ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯ ವಿಷಯವಾಗಿದೆ. ಹೀಗಾಗಿ ಎರಡು ದಿನಗಳ ಕಾಲ ನಡೆಯುವ ಸಭೆ ಅತ್ಯಂತ ಮಹತ್ವ ಪಡೆದಿದೆ.