ಮನೆ ಸ್ಥಳೀಯ ಕೇಂದ್ರ ಸರ್ಕಾರದಿಂದ 143 ವಸ್ತುಗಳ ಬೆಲೆ ಏರಿಕೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿ

ಕೇಂದ್ರ ಸರ್ಕಾರದಿಂದ 143 ವಸ್ತುಗಳ ಬೆಲೆ ಏರಿಕೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿ

0

ಮೈಸೂರು: ಕಳೆದ ೧೦ ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ೧೪೩ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಬೆಲೆ ಏರಿಕೆ ವಿರುದ್ಧ ಬಿಜೆಪಿ ನಡೆಸುತ್ತಿರುವ ಜನಾಕ್ರೋಶ ನಾಟಕದ ಯಾತ್ರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೪ಕ್ಕೂ ಮೊದಲು ಅನಂತರ ಯಾವ್ಯಾವ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂಬುದನ್ನು ಪಟ್ಟಿ ಸಮೇತ ವಿವರಿಸಿದರು. ಅಗತ್ಯ ವಸ್ತುಗಳ ಬೆಲೆಯೂ ಶೇ. ೪೦೦ರಷ್ಟು ಹೆಚ್ಚಾಗಿದೆ ಎಂದರು. ೨೦೧೪ರಲ್ಲಿ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡಿಸೇಲ್ ಏರಿಕೆಯಾಗಿದ್ದರೂ ಲೀಟರ್ ಪೆಟ್ರೋಲ್ ೭೦, ಡಿಸೇಲ್ ೫೦ ರೂ.ಗೆ ಸಿಗುತ್ತಿತ್ತು. ಗ್ಯಾಸ್ ಬೆಲೆ ೪೫೦ ರೂ. ಇತ್ತು. ಇವತ್ತು ತೈಲಬೆಲೆ ಕಡಿಮೆಯಿದ್ದರೂ ಲೀಟರ್ ಪೆಟ್ರೋಲ್ ೧೦೩, ಡಿಸೇಲ್ ೯೨ ರೂ. ತಲುಪಿದೆ. ತೈಲ ಬೆಲೆ ಏರಿಕೆಯಿಂದ ಕೇಂದ್ರದ ಎನ್‌ಡಿಎ ಸರ್ಕಾರ ೧೧ ವರ್ಷದಲ್ಲಿ ೪೩ ಲಕ್ಷಕೋಟಿ ಹಣವನ್ನು ಲೂಟಿ ಮಾಡಿದೆ. ರಾಜ್ಯದಲ್ಲಿ ಜನಾಕ್ರೋಶ ಯಾತ್ರೆ ಆರಂಭವಾದ ದಿನವೇ ೫೦ ರೂ. ಗ್ಯಾಸ್ ದರ ಏರಿಕೆಯಾಗಿದೆ. ಟೋಲ್ ದರ ಏರಿಕೆ ಮಾಡಲಾಗಿದೆ ಎಂದರು.

ಬಿಜೆಪಿಯವರು ರೈತ ವಿರೋಧಿಗಳಾದ ಕಾರಣಕ್ಕೆ ಹಾಲಿನ ದರ ಏರಿಕೆ ವಿರೋಧಿಸುತ್ತಿದ್ದಾರೆ. ೧೦ ವರ್ಷಗಳ ಹಿಂದೆ ಚಿನ್ನ, ಬೆಳ್ಳಿ, ಕಬ್ಬಿಣ, ಇನ್ನೋವ ಕಾರು, ಅಡುಗೆ ಎಣ್ಣೆ ಎಷ್ಟಿತ್ತು. ಈಗ ಎಷ್ಟಾಗಿದೆ. ಲೆಕ್ಕ ಹಾಕುವಂತೆ ಒತ್ತಾಯಿಸಿದರು. ಹೆಣ ಸುಡುವುದಕ್ಕೂ ಜಿಎಸ್‌ಟಿ ಹಾಕಿದ ಕೀರ್ತಿ ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ಸಲ್ಲಬೇಕು ಎಂದು ಟೀಕಿಸಿದರು. ವಕ್ಫ್ ಬಿಲ್ ವಿರುದ್ಧ ಹೋರಾಡಿ: ವಕ್ಫ್ ಬಿಲ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ. ಜನರು ಬೀದಿಗಿಳಿದು ಹೋರಾಟ ಮಾಡಬೇಕು. ಈ ಮಸೂದೆಯನ್ನು ಯಾರು ಕೇಳಿದ್ದರು? ಇದರ ಹಿಂದಿನ ಮರ್ಮ ಏನು ಎಂದು ಪ್ರಶ್ನಿಸಿದರು.

ದೇಶದಲ್ಲಿ ನಾಲ್ಕು ವಕ್ಫ್ ಬೋರ್ಡ್‌ನಡಿ ೮.೬೨ ಲಕ್ಷ ವಕ್ಫ್ ಆಸ್ತಿಗಳಿವೆ. ಒಟ್ಟು ೩೮ ಲಕ್ಷ ಎಕರೆ ಜಮೀನಿದೆ. ತೆಲಂಗಾಣ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಹಿಂದೂ ದೇವಾಲಯಗಳಿಗೆ ಸೇರಿದ ೬೮ ಲಕ್ಷಎಕರೆ ಜಮೀನಿದೆ. ಜಿಲ್ಲಾಧಿಕಾರಿಗೆ ನೀಡಲಾಗಿರುವ ಅಧಿಕಾರ ಪ್ರಶ್ನಿಸುವಂತಿಲ್ಲ. ಸಮಿತಿಗೆ ಸಂಘ ಪರಿವಾರದವರನ್ನು ನಿಯೋಜಿಸಬಹುದಾಗಿದೆ ಎಂದರು. ಮುಸ್ಲಿಂರನ್ನು ಎರಡನೇ ದರ್ಜೆ ಪ್ರಜೆಯನ್ನಾಗಿಸುವ ಮತ್ತು ಮುಂದೆ ಕ್ರಿಶ್ಚಿಯನ್ನರ ಆಸ್ತಿಗಳನ್ನು ಕಿತ್ತುಕೊಳ್ಳಲಿದ್ದಾರೆ. ಮುಸ್ಲಿಮರು ದೇಶದವರಲ್ಲ ಎಂದು ಬಿಂಬಿಸಲಾಗುತ್ತಿದೆ. ಒಡೆದಾಳುವ ನೀತಿ ಮೊದಲಿಂದಲೂ ಅನುಸರಿಸಿದ್ದಾರೆ. ಹೋರಾಟ ಮಾಡಿ ಜನರಿಗೆ ಅರಿವು ಮೂಡಿಸಬೇಕು ಎಂದರು.

ಪೌರಕಾರ್ಮಿಕರ ಕಾಯಂ: ಮೇ ೧ರಿಂದ ೭.೫ ಲಕ್ಷ ಪೌರಕಾರ್ಮಿಕರನ್ನು ಕಾಯಂ ಮಾಡುವುದಾಗಿ ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎಂ.ಲಕ್ಷ್ಮಣ್ ಅಭಿನಂದಿಸಿದರು. ೭ ಸಾವಿರದಿಂದ ೧೭ ಸಾವಿರಕ್ಕೆ ಸಂಬಳ ಏರಿಕೆ ಮಾಡಿದ್ದು ಸಿದ್ದರಾಮಯ್ಯ. ಈಗ ಎಲ್ಲ ಪೌರಕಾರ್ಮಿಕರನ್ನು ಕಾಯಂ ಮಾಡಿ ೫೦ ಸಾವಿರ ಸಂಬಳ ದೊರೆಯುವಂತೆ ಮಾಡಿದ್ದಾರೆ ಎಂದರು. ಪ್ರಧಾನಿ ನರೇಂದ್ರ ಮೋದಿ ಚುನಾವಣೆ ವೇಳೆಯಲ್ಲಿ ಪೌರಕಾರ್ಮಿಕರ ಕಾಲು ಒರೆಸಿದರು. ಅವರ ಬದುಕಿಗೆ ಏನು ಮಾಡಿದರು? ನಾವು ಪೌರ ಕಾರ್ಮಿಕರ ಬದುಕು ಸರಿ ಮಾಡುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಎಂ.ಶಿವಣ್ಣ, ಕೆ.ಮಹೇಶ್, ಸೇವಾದಳದ ಗಿರೀಶ್, ಅಬ್ರಾರ್ ಉಪಸ್ಥಿತರಿದ್ದರು.