ಮೈಸೂರು : ವಿಮಾನ ನಿಲ್ದಾಣದಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾದರು.
ಇಂದು ಮಧ್ಯಾಹ್ನ 2:20 ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ರಾಹುಲ್ ಗಾಂಧಿ ಆಗಮಿಸಿದ್ದರು. 2:35 ಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ನಲ್ಲಿ ತಮಿಳುನಾಡಿನ ಗುಡ್ಲುರಿಗೆ ಪಯಣ ಬೆಳೆಸಿದರು. ನಂತರ ಸಂಜೆ 5:45 ಕ್ಕೆ ಹೆಲಿಕಾಪ್ಟರ್ನಲ್ಲಿ ತಮಿಳುನಾಡಿನಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಸಂಜೆ 6 ಗಂಟೆಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ವಾಪಸ್ ಆಗಲಿದ್ದಾರೆ.
15 ನಿಮಿಷ ಅಷ್ಟೆ ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಇದ್ದರು. ತಮಿಳುನಾಡಿನಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಜೆ ಹೆಲಿಕಾಪ್ಟರ್ನಲ್ಲಿ ಮೈಸೂರಿಗೆ ವಾಪಸ್ ಆಗಲಿದ್ದಾರೆ. ಹೀಗಾಗಿ ತರಾತುರಿಯಲ್ಲಿ ರಾಹುಲ್ ಗಾಂಧಿ ಹೊರಟರು. ಕೇವಲ 2 ನಿಮಿಷವಷ್ಟೇ ಸಿಎಂ, ಡಿಸಿಎಂಗೆ ಭೇಟಿಗೆ ಅವಕಾಶ ಸಿಕ್ಕಿತು. ಇಬ್ಬರೂ ನಾಯಕರು ಉಭಯ ಕುಶಲೋಪರಿ ವಿಚಾರಿಸಿದರು.
ಅಧಿಕಾರ ಹಂಚಿಕೆ ಗೊಂದಲ ಶುರುವಾದ ಮೇಲೆ ಮೊದಲ ಬಾರಿಗೆ ರಾಹುಲ್ ಗಾಂಧಿ ಅವರನ್ನು ಸಿದ್ದು-ಡಿಕೆಶಿ ಭೇಟಿಯಾಗಿದ್ದಾರೆ. ಆದರೂ ಈ ಭೇಟಿಯಲ್ಲಿ ಯಾವುದೇ ಮಾತುಕತೆ ಇರಲಿಲ್ಲ. ಉಭಯ ಕುಶಲೋಪರಿಗಷ್ಟೆ ಸಿಮೀತವಾಯಿತು. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ರಾಹುಲ್ ಗಾಂಧಿ ಆಗಮಿಸಿದರು. ಅವರನ್ನು ಸಿಎಂ ಮತ್ತು ಡಿಕೆಶಿ ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ವಿಶೇಷ ವಿಮಾನದಿಂದ ಇಳಿದು ಎರಡೇ ನಿಮಿಷಕ್ಕೆ ತಮಿಳುನಾಡು ಪ್ರವಾಸಕ್ಕೆ ರಾಹುಲ್ ಗಾಂಧಿ ಹೊರಟರು.
ಮೈಸೂರಿನಲ್ಲಿ ಡಿಕೆಶಿ ಏಕಾಂಗಿ ಸಂಚಾರ ಮಾಡಿದರು. ಡಿಕೆ-ಸಿದ್ದು ನಾನೊಂದು ತೀರ, ನೀನೊಂದು ತೀರ ಎಂಬಂತಿದ್ದರು. ರಾಹುಲ್ ಗಾಂಧಿಯನ್ನು ಹೆಲಿಕಾಪ್ಟರ್ ಹತ್ತಿಸಿ ನಾಯಕರು ಹೊರಬಂದರು. ಏರ್ಪೋರ್ಟ್ ಹೊರಗೆ ಬರುತ್ತಿದ್ದಂತೆ ಇಬ್ಬರೂ ಪ್ರತ್ಯೇಕವಾಗಿ ತೆರಳಿದರು. ಸಿಎಂ ಜೊತೆ ಬಾರದೆ ದೂರ ನಡೆದು ಕಾರ್ ಹತ್ತಿ ಡಿಕೆಶಿ ಹೊರಟರು. ರಾಹುಲ್ ಗಾಂಧಿಗೆ ಮೈಸೂರು ಅರಮನೆ ಪ್ರತಿಕೃತಿಯನ್ನು ಸಿಎಂ ಸಿದ್ದರಾಮಯ್ಯ ಉಡುಗೊರೆಯಾಗಿ ನೀಡಿದರು. ಆನೆ ಪ್ರತಿಕೃತಿಯನ್ನು ಸಚಿವ ಕೆ.ಜೆ ಜಾರ್ಜ್ ಗಿಫ್ಟ್ ಕೊಟ್ಟರು.















