ಮನೆ ರಾಜ್ಯ ಪಿಎಸ್ಐ ಅಮಾನತಿಗೆ ಆಗ್ರಹಿಸಿ ರಾಮನಗರದಲ್ಲಿ ವಕೀಲರ ಅಹೋರಾತ್ರಿ ಧರಣಿ: ಪೊಲೀಸ್​ ಬಿಗಿ ಭದ್ರತೆ

ಪಿಎಸ್ಐ ಅಮಾನತಿಗೆ ಆಗ್ರಹಿಸಿ ರಾಮನಗರದಲ್ಲಿ ವಕೀಲರ ಅಹೋರಾತ್ರಿ ಧರಣಿ: ಪೊಲೀಸ್​ ಬಿಗಿ ಭದ್ರತೆ

0

ರಾಮನಗರ: ಪಿಎಸ್ ಐ ಅಮಾನತ್ತಿಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ವಕೀಲರ ಪ್ರತಿಭಟನೆ ತೀವ್ರಗೊಂಡಿದೆ. ಜಿಲ್ಲಾಧಿಕಾರಿ ಕಚೇರಿಗೆ ದಿಗ್ಬಂಧನ ಹಾಕಲಾಗಿದ್ದು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಎದುರಿನಲ್ಲೇ ಹಾಸಿರುವ ಹಾಸಿಗೆ ಮೇಲೆ ಮಲಗಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಎರಡೂ ಗೇಟ್ ಮುಂಭಾಗದಲ್ಲಿ ವಕೀಲರು ಧರಣಿ ಕುಳಿತಿದ್ದು, ಡಿಸಿ, ಎಸ್ಪಿ ಮನೆಗೆ ಹೋಗದ ಹಾಗೆ ಮಾಡಲಾಗಿದೆ. ಪ್ರತಿಭಟನೆಯ ಬಿಸಿಯಿಂದ ಡಿಸಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಎಸ್ಪಿ ಕಾರ್ತಿಕ್ ರೆಡ್ಡಿ ಕಚೇರಿಯಲ್ಲೇ ಉಳಿದುಕೊಳ್ಳುವಂತೆ ಆಗಿದೆ. ಇಡೀ ರಾತ್ರಿ‌ ಧರಣಿ ಕುಳಿತುಕೊಳ್ಳುತ್ತೇವೆ ಎಂದು ನಿನ್ನೆ (ಸೋಮವಾರ) ವಕೀಲರು ಪಟ್ಟು ಹಿಡಿದಿದ್ದಾರೆ. ಯಾವುದೇ ಕಾರಣಕ್ಕೂ ಡಿಸಿ ಹಾಗೂ ಎಸ್ಪಿಯನ್ನು ಕಚೇರಿಯಿಂದ ಹೊರಗೆ ಬಿಡುವುದಿಲ್ಲ ಎಂದು ವಕೀಲರು ಅಹೋರಾತ್ರಿ ಧರಣಿ ನಡೆಸಿದ್ದಾರೆ.

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಆದರ್ಶ್ ಅಗರ್ವಾಲ್, ಬೆಂಗಳೂರು ಪರಿಷತ್ ಅಧ್ಯಕ್ಷ ವಿಶಾಲ್ ರಘು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.

ರಾಜಕೀಯ ತಿರುವ ಪಡೆದುಕೊಂಡ ಪ್ರತಿಭಟನೆ:

ಸುಳ್ಳು ಎಫ್ ಐಆರ್ ದಾಖಲು ಮಾಡಿರುವ ಪಿಎಸ್ಐ ಅಮಾನತು ಮಾಡುವಂತೆ ಆಗ್ರಹಿಸಿ ಪೊಲೀಸರ ವಿರುದ್ಧ ನಡೆಯುತ್ತಿದ್ದ ವಕೀಲರ ಪ್ರತಿಭಟನೆ ಇದೀಗ ರಾಜಕೀಯ ತಿರುವು ಪಡೆದಿದೆ.

ಪೊಲೀಸರ ಹಠ, ವಕೀಲರ ಹೋರಾಟ ರಾಜಕೀಯವಾಗಿ ಆರೋಪ, ಪ್ರತ್ಯಾರೋಪಕ್ಕೆ ನಾಂದಿ ಹಾಡಿದೆ. ತಡರಾತ್ರಿ ಪ್ರತಿಭಟನಾ ಸ್ಥಳಕ್ಕೆ ಬಂದ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ವಕೀಲರೊಂದಿಗೆ ಚರ್ಚಿಸಿದ್ದಾರೆ.

ಇದೇ ವೇಳೆ, ವಕೀಲರ‌ ಮೇಲಿನ ಸುಳ್ಳು ಪ್ರಕರಣ ಹಾಕಲು‌ ಡಿಕೆ‌ ಸಹೋದರರು ಒತ್ತಡ ಹಾಕಿದ್ದಾರೆ ಎಂದು‌ ಆರ್. ಅಶೋಕ್ ಮತ್ತು ಎಚ್. ಡಿ. ಕುಮಾರಸ್ವಾಮಿ ನೇರವಾಗಿ ಆರೋಪ ಮಾಡಿದ್ದಾರೆ.

ಅಲ್ಪಸಂಖ್ಯಾತರನ್ನು ಉಳಿಸಿಕೊಳ್ಳಲು ವಕೀಲರ ಮೇಲೆ ಎಫ್​ಐಆರ್ ದಾಖಲು ಮಾಡಿದ್ದಾರೆ ಎಂದು ಆರೋಪಿಸಿದ್ದು, ವಿಧಾನಸಭೆ ಕಲಾಪ ನಡೆಯುತ್ತಿರುವ ಕಾರಣ ಇಂದಿನ ಸೆಷನ್‌ ನಲ್ಲಿ ವಕೀಲರ ಹೋರಾಟದ ವಿಚಾರದ ಬಗ್ಗೆ ಚರ್ಚೆ ನಡೆಸಲು ವಿಪಕ್ಷ ಸಜ್ಜಾಗಿದೆ.

ಇಂದು (ಮಂಗಳವಾರ) ವಿಧಾನ‌ಸಭೆ ಕಲಾಪದಲ್ಲಿ ಡಿಕೆ ಬ್ರದರ್ಸ್ ವಿರುದ್ಧ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಪ್ರತಿಭಟನೆ ನಡೆಸಲಿದ್ದು, ವಕೀಲರಿಗೆ ನ್ಯಾಯ ಕೊಡಿಸುವುದಾಗಿ ಎಚ್​ಡಿಕೆ, ಆರ್. ಅಶೋಕ್ ಭರವಸೆ ಕೊಟ್ಟಿದ್ದಾರೆ.

ಬಿಗಿ ಪೋಲೀಸ್ ಬಂದೋ ಬಸ್ತ್

ವಕೀಲರ ಪ್ರತಿಭಟನೆಗೆ ಬಿಗಿ ಪೋಲೀಸ್ ಬಂದೋ ಬಸ್ತ್ ಕಲ್ಪಿಸಲಾಗಿದೆ. 40 ವಕೀಲರ ಮೇಲೆ ರಾಮನಗರದ ಐಜೂರು ಠಾಣೆಯಲ್ಲಿ ಎಫ್ ಐಆರ್ ದಾಖಲು ಖಂಡಿಸಿ‌ ಪ್ರತಿಭಟನೆ ನಡೆಸಲಾಗುತ್ತಿದ್ದು, ಪಿಎಸ್ಐ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

900ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದ್ದು, ಭದ್ರತಾ ಕಾರ್ಯಕ್ಕೆ ಒಬ್ಬ ಎಸ್ಪಿ, ಇಬ್ಬರು ಎಎಸ್ಪಿ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ. ಮೂರು ಮಂದಿ ಡಿವೈಎಸ್ಪಿ, 13 ಮಂದಿ ಸಿಪಿಐ, 45 ಪಿಎಸ್ ಐ, 60 ಎಎಸ್ಐ, 700 ಮಂದಿ ಪೊಲೀಸ್ ಪೇದೆಗಳನ್ನು ನಿಯೋಜನೆ ಮಾಡಲಾಗಿದೆ. ಹೆಚ್ಚುವರಿಯಾಗಿ ಮೂರು ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಎರಡು ಕೆಎಸ್ಆರ್​ಪಿ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಚಲನ ವಲನಗಳ ಕಣ್ಗಾವಲಿನ ಉದ್ದೇಶಕ್ಕೆ 40 ಹ್ಯಾಂಡಿಕ್ಯಾಮ್, 2 ಡ್ರೋಣ್, 100 ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಇಂದು ಕೂಡ ವಕೀಲರ ಪ್ರತಿಭಟನೆ ಮುಂದುವರೆಯಲಿದ್ದು, ಪಿಎಸ್ಐ ಅಮಾನತು ಮಾಡುವವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.

ಹಿಂದಿನ ಲೇಖನಲಡಾಖ್‌ ನಲ್ಲಿ 5.2ರಷ್ಟು ತೀವ್ರತೆಯ ಭೂಕಂಪ
ಮುಂದಿನ ಲೇಖನಲಾರಿ – ಬೈಕ್ ಮಧ್ಯೆ ಅಪಘಾತ: ನಿವೃತ್ತ ಸಿಆರ್ ಪಿಎಫ್ ಯೋಧ ಸಾವು