ಮೈಸೂರು: ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳುವಂತೆ ವಿದ್ಯುತ್ ಕ್ಷಾಮ ಕೃತಕವಾಗಿ ಆಗಿರುವ ಅಭಾವವಲ್ಲ. 2 ಬಾರಿ ಮುಖ್ಯಮಂತ್ರಿಯಾದವರು ಸತ್ಯ ಮರೆಮಾಚಿ ಸುಳ್ಳು ಹೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವವರೊಂದಿಗೆ ಮಾತನಾಡಿದರು.
ವಿದ್ಯುತ್ ಕ್ಷಾಮ ನೀಗಿಸಲು ಹೊರಗಿನಿಂದ ವಿದ್ಯುತ್ ಕೊಳ್ಳುವುದು, ಎಲ್ಲಾ ಸಕ್ಕರೆ ಕಾರ್ಖಾನೆ ಗಳು ಪ್ರಾರಂಭವಾಗುತ್ತಿದ್ದು, ಅಲ್ಲಿ ಕೋಜನರೇಷನ್ ಆಗುತ್ತದೆ. ಅದರಿಂದ ಕೊಂಡುಕೊಳ್ಳುತ್ತೇವೆ. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಖಾಸಗಿ ಸಂಸ್ಥೆಗಳು ರಾಜ್ಯಕ್ಕೆ ನೀಡಬೇಕೆಂದು ಆದೇಶ ಹೊರಡಿಸಿದ್ದೇವೆ ಎಂದರು.
ಚುನಾವಣೆ ಪ್ರಯುಕ್ತ ಯಾವ ರಾಜ್ಯಗಳಿಗೂ ಹಣ ಕೊಟ್ಟಿಲ್ಲ
ಹೈ ಕಮಾಂಡಿಗೆ ದೂರು ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿ ಪಂಚ ರಾಜ್ಯಗಳ ಚುನಾವಣೆ ಬಂದಿರುವುದರಿಂದ ನೆಪಮಾಡಿಕೊಂಡು ಸುಳ್ಳು ಹೇಳುತ್ತಾರೆ. ಇಂದಿನವರೆಗೆ ನಾವು ಯಾವ ರಾಜ್ಯಗಳಿಗೂ ಹಣ ಕೊಟ್ಟಿಲ್ಲ. ಅದಕ್ಕಾಗಿ ಯಾರ ಬಳಿಯೂ ಹಣ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿಗೆ ರಾಮನಗರ ಸೇರ್ಪಡೆ ಹೇಳಿಕೆ: ಡಿಸಿಎಂ ಜೊತೆ ಚರ್ಚೆ
ರಾಮನಗರವನ್ನು ಬೆಂಗಳೂರಿಗೆ ಸೇ ರ್ಪಡೆ ಮಾಡುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಮುಖ್ಯಮಂತ್ರಿಗಳು ಈ ಪ್ರಶ್ನೆಯನ್ನು ಅವರನ್ನೇ ಕೇಳಿ ಎಂದರು.ಈ ಬಗ್ಗೆ ನನಗೆ ಗೊತ್ತಿಲ್ಲ. ನಾನು ಈ ಬಗ್ಗೆ ಅವರ ಬಳಿ ಚರ್ಚೆ ಮಾಡುತ್ತೇನೆ ಎಂದರು.
ಬಿಜೆಪಿಗೆ ಮಾನ , ಮರ್ಯಾದೆ ಇದೆಯೇ
ಬಿಜೆಪಿ ಎಟಿಎಂ ಸರ್ಕಾರ ಎಂದು ಟ್ವೀಟ್ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅದು ಸುಳ್ಳು ಆರೋಪ. ಆಪರೇಷನ್ ಕಮಲ ಕೈಗೊಂಡು 25 ಕೋಟಿ ಹಣ ನೀಡಿ, 25.ಕೋಟಿ ಚುನಾವಣೆ ಗೆ ಖರ್ಚು ಮಾಡಲು ಹಣ ಎಲ್ಲಿಂದ ಬಂತು. ಇವರಿಗೆ ಏನಾದರೂ ಮಾನ , ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದರು.
ಕರ್ನಾಟಕ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿರುವುದಕ್ಕೆ ಯಾರು ಜವಾಬ್ದಾರರು. 5 ವರ್ಷಗಳಿಂದ ಒಂದು ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಿಲ್ಲ. . ಬರದ ಸಂದರ್ಭದಲ್ಲಿ ವಿದ್ಯುತ್ ತೊಂದರೆಯಾಗಿರುವುದಕ್ಕೆ ಬಿಜೆಪಿ ಕಾರಣ. 16000 ಮೆಗಾ ವ್ಯಾಟ್ ಸೌರ ವಿದ್ಯುತ್ ನಾವು ಉತ್ಪಾದನೆ ಮಾಡಿದ್ದೆವು. ಬಿಜೆಪಿ ಯವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ಯಾವ ನೈತಿಕತೆಯೂ ಇಲ್ಲ. ಏನೂ ಮಾಡಿದ್ದಾರೆ 3 ವರ್ಷ 10 ತಿಂಗಳಲ್ಲಿ ಎಂದು ಪ್ರಶ್ನಿಸಿದರು.
30,000 ಕೋಟಿ ರೂ.ಗಳಷ್ಟು ಬಾಕಿ ಬಿಲ್ಲುಗಳು
ಹಣವಿಲ್ಲದಿದ್ದರೂ ಕೆಲಸ ಮಂಜೂರು ಮಾಡಿ, ಟೆಂಡರ್ ಕರೆದು ಬಿಲ್ಲುಗಳನ್ನು ಬಾಕಿ ಇಟ್ಟು ಹೋಗಿದ್ದಾರೆ. 30,000 ಕೋಟಿ ರೂ.ಗಳಷ್ಟು ಬಾಕಿ ಬಿಲ್ಲುಗಳಿವೆ. ಇದಕ್ಕೆ ಯಾರು ಹೊಣೆ. ನಮ್ಮ ಕಾಲದ ಹಾಗೂ ಬಿಜೆಪಿ ಕಾಲದ ಆರ್ಥಿಕಸ್ಥಿತಿ ಕುರಿತು ಶ್ವೇತಪತ್ರವನ್ನು ವಿಧಾನಮಂಡಲದಲ್ಲಿ ಮಂಡಿಸುತ್ತೇನೆ. ರಾಜ್ಯ ಹಾಳು ಮಾಡಿದ್ದಕ್ಕೆ ಜನ ತಿರಸ್ಕಾರ ಮಾಡಿದ್ದಾರೆ. ಈಗ ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡುತ್ತಾರೆ ಹೊರತು ಅದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.
ಮಂತ್ರಿಮಂಡಲ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ
ಸಂಪುಟ ಪುನರ್ ರಚನೆ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು ಸಚಿವರಾಗಬೇಕೆಂದು ಬಯಸುವುದರಲ್ಲಿ ತಪ್ಪಿಲ್ಲ.ಮಂತ್ರಿಮಂಡಲ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದರು.
ಖಾಲಿ ಡಬ್ಬಗಳು ಹೆಚ್ಚು ಶಬ್ದ ಮಾಡುತ್ತವೆ
ಜಾತಿಜನಗಣತಿ ವರದಿ ಬಿಡುಗಡೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಹೇಳಿಕೆಯ ನಂತರ ಅವರ ಮೇಲಿನ ವಿಪಕ್ಷಗಳ ಆರೋಪಗಳು ಹೆಚ್ಚಾಗಿದೆ ಎಂಬ ಬಗ್ಗೆ ಉತ್ತರಿಸಿ ರಾಜಕೀಯ ವಾಗಿ ಹತಾಶರಾಗಿಮಾತನಾಡುತ್ತಾರೆ. ಖಾಲಿ ಡಬ್ಬಗಳು ಹೆಚ್ಚು ಶಬ್ದ ಮಾಡುತ್ತವೆ ಎಂದರು.














