ಬೆಂಗಳೂರು(Bengaluru): ಸಿಗರೇಟ್ ಹಣ ಕೇಳಿದ್ದಕ್ಕೆ ಕೋಪಗೊಂಡ ಮದ್ಯದ ಅಮಲಿನಲ್ಲಿದ್ದ ಯುವಕರ ತಂಡ ಕಾಂಡಿಮೆಂಟ್ಸ್ ಮಾಲೀಕನ ಮೇಲೆ ಮನಬಂದಂತೆ ಹಲ್ಲೆ ಮಾಡಿ ಅಂಗಡಿ ಪೀಠೋಪಕರಣ ಧ್ವಂಸಗೊಳಿಸಿದ್ದಾರೆ.
ಬೈಂದೂರು ಮೂಲದ ಮಂಜುನಾಥ್ ಶೆಟ್ಟಿ ಹಲ್ಲೆಗೊಳಗಾದವರು. ಇವರು ನೀಡಿದ ದೂರು ಆಧರಿಸಿ ಪುಟ್ಟೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಲ್ಲೆಕೋರರನ್ನು ಬಂಧಿಸಿದ್ದಾರೆ.
ಕಳೆದ 13 ವರ್ಷಗಳಿಂದ ಜೆ.ಪಿ.ನಗರದ 24ನೇ ಮುಖ್ಯರಸ್ತೆಯಲ್ಲಿ ಮಂಜುನಾಥ್ ಕಾಂಡಿಮೆಟ್ಸ್ ನಡೆಸುತ್ತಿದ್ದಾರಂತೆ. ಸೋಮವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಇವರ ಅಂಗಡಿಗೆ ಬಂದಿದ್ದ ಆರೇಳು ಮಂದಿ ಸಿಗರೇಟ್ ಕೇಳಿದ್ದಾರೆ. ಸಿಗರೇಟ್ ಹಣ ಕೊಡುವಂತೆ ತಿಳಿಸಿದಾಗ ಸಿಟ್ಟಾದ ಕಿಡಿಗೇಡಿಗಳು ಮಂಜುನಾಥ್ ಮೇಲೆ ಮುಷ್ಠಿ ಹಾಗೂ ರಾಡ್’ನಿಂದ ಹೊಡೆದಿದ್ದಾರೆ. ರಸ್ತೆಗೆಳೆದು ತಂದು ಕಾಲಿನಿಂದ ತುಳಿದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.