ಬೆಂಗಳೂರು: ಕಳ್ಳನಿಗೊಂದು ಪಿಳ್ಳೆ ನೆವ ಎನ್ನುವಂತೆ ಕಾಂಗ್ರೆಸ್ ವರ್ತಿಸುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಸಿ ಎನ್ ಅಶ್ವತ್ಥ ನಾರಾಯಣ ಹೇಳಿದರು.
ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆಯುವ ಪ್ರಸ್ತಾವನೆಗೆ ಸಿದ್ದರಾಮಯ್ಯ ಸಂಪುಟ ಅನುಮೋದನೆ ನೀಡಿದ್ದನ್ನು ಅಶ್ವತ್ಥನಾರಾಯಣ ಟೀಕಿಸಿದರು.
ಕಲಬುರಗಿಯಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಅನುಮತಿ ನೀಡುವಾಗ ನಿಯಮ ಉಲ್ಲಂಘಿಸಿಲ್ಲ. ಬಿಜೆಪಿ ಸರ್ಕಾರದಿಂದ ಯಾವುದೇ ರೀತಿ ಕಾನೂನು ಉಲ್ಲಂಘನೆ ಆಗಿಲ್ಲ. ಆ ರೀತಿ ಏನಾದರು ಆಗಿದ್ದರೆ ಕೋರ್ಟ್ ನಲ್ಲಿ ಇದನ್ನು ಪ್ರಶ್ನಿಸಬೇಕಿತ್ತು. ಏಕೆ ನ್ಯಾಯಾಲಯಕ್ಕೆ ಹೋಗಿಲ್ಲ? ಈ ವಿಚಾರದಲ್ಲಿ ಕಾಂಗ್ರೆಸ್ ಕಳ್ಳನಿಗೊಂದು ಪಿಳ್ಳೆ ನೆವ ಎನ್ನುವಂತೆ ವರ್ತಿಸುತ್ತಿದೆ ಎಂದರು.
ನಾವು ಅಧಿಕಾರದಲ್ಲಿದ್ದಾಗ ಎಲ್ಲವೂ ಕಾನೂನು ಪ್ರಕಾರ ಮಾಡಿದ್ದೇವೆ. ನಿಯಮ ಉಲ್ಲಂಘಿಸಿದ್ದರೆ ಕೋರ್ಟ್ ಐದೇ ನಿಮಿಷದಲ್ಲಿ ತಿರಸ್ಕರಿಸುತ್ತಿತ್ತು. ಈ ಹಿಂದೆಯೂ ಬೇರೆಬೇರೆ ಸರ್ಕಾರಗಳು ಹಿಂಪಡೆಯಲು ಯತ್ನಿಸಿ ವಿಫಲವಾಗಿವೆ. ಹಾಗಾಗಿ ಈ ವಿಚಾರದಲ್ಲೂ ಸಿಬಿಐ ತನಿಖೆಯೇ ಮುಂದುವರಿಯುತ್ತದೆ. ಸತ್ಯಕ್ಕೆ, ನ್ಯಾಯಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂದರು.
ಆದಾಯಕ್ಕಿಂತ ಹೆಚ್ಚು ಆಸ್ತಿ ಎಲ್ಲಿಂದ ಗಳಿಕೆಯಾಗಿದೆ? ಎಲ್ಲಿಂದ ಬಂತು? ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಇದಕ್ಕೆ ಉತ್ತರ ಕೊಡಬೇಕು. ಏಕೆ ಹೆದರಿಕೊಳ್ಳುತ್ತಿದ್ದೀರಿ? ಏಕೆ ಓಡಿ ಹೋಗುತ್ತಿದ್ದೀರೆಂದು ಡಿಕೆ ಶಿವಕುಮಾರ್ ಅವರನ್ನು ಕೇಳಿದ ಅಶ್ವತ್ಥ ನಾರಾಯಣ, ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಅನ್ನೋ ರೀತಿಯಲ್ಲಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೀರಿ, ಇದು ಸರಿಯಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬರೀ ಭ್ರಷ್ಟಾಚಾರದಲ್ಲೇ ತೊಡಗಿದೆ. ಹಾಗಾಗಿ ಈ ಕೇಸನ್ನೂ ಸಿಬಿಐ ತನಿಖೆಯಿಂದ ಹಿಂಪಡೆಯಲು ಮುಂದಾಗಿದೆ ಎಂದರು.