ನವದೆಹಲಿ: ಮಾಳವೀಯ ನಗರದಲ್ಲಿ ನಿನ್ನೆ (ಬುಧವಾರ) ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 21 ಮಂದಿ ಸಾವಿಗೀಡಾಗಿದ್ದರು. ಇನ್ನೂ ಹಲವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಕ್ಕಟ್ಟಾದ ಜಾಗದಲ್ಲಿ ಹೋಟೆಲ್ ನಡೆಸಿ ಜನರ ಜೀವ ಬಲಿ ಪಡೆದ ಹೋಟೆಲ್ ಮಾಲೀಕನನ್ನು ದೆಹಲಿ ಪೊಲೀಸರು ಇಂದು ಬಂಧಿಸಿದ್ದಾರೆ. ಹೋಟೆಲ್/ರೆಸ್ಟೋರೆಂಟ್ ಕಟ್ಟಡದ ಮಾಲೀಕ ಲವಕೇಶ್ ಬಜಾಜ್ ಬಂಧಿತ ವ್ಯಕ್ತಿ. ಈತ ಮತ್ತು ಪತ್ನಿಯ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಿದ್ದ ದೆಹಲಿ ಪೊಲೀಸರು, ಪತ್ತೆ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಯಿಂದ ಹೊತ್ತಿ ಉರಿದ ಫ್ಲರಿಶ್ ಸ್ಟೇ ಬಿ&ಬಿ ರೆಸ್ಟೋರೆಂಟ್ ಕಂ ಹೋಟೆಲ್ ಐದು ಅಂತಸ್ತಿನಿಂದ ಕೂಡಿದೆ. ಇದನ್ನು ಕಟ್ಟುವಾಗ ಪಾಲಿಸಬೇಕಾದ ಯಾವುದೇ ನಿಯಮಗಳನ್ನು ಇಲ್ಲಿ ಅಳವಡಿಸಿಕೊಂಡಿಲ್ಲದೇ ಇರುವುದು ಭೀಕರ ದುರಂತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಆದರೆ ಮೃತರ ಪೈಕಿ ವಿದೇಶಿಯರೂ ಬಲಿಯಾದ ಈ ಹೋಟೆಲ್ಗೆ ಕಡ್ಡಾಯವಾಗಿ ಬೇಕಾದ ಅಗ್ನಿಶಾಮಕ ಇಲಾಖೆಯ ನಿರಾಕ್ಷೇಪಣಾ ಪತ್ರ ಕೂಡ ಇರಲಿಲ್ಲ ಎಂಬ ಅಚ್ಚರಿಯ ಸಂಗತಿಯನ್ನು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಕಟ್ಟಡಕ್ಕೆ ಕೇವಲ ಒಂದೇ ಪ್ರವೇಶ ಮತ್ತು ನಿರ್ಗಮನ ದ್ವಾರವಿತ್ತು. ಕಿಟಕಿಗಳನ್ನು ಶಾಶ್ವತವಾಗಿ ಮುಚ್ಚಲಾಗಿತ್ತು. ಮುಖ್ಯ ದ್ವಾರ ಸೆನ್ಸಾರ್ ಮೂಲಕ ಕಾರ್ಯನಿರ್ವಹಿಸುತ್ತಿತ್ತು. ಇದು ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿಯ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿ ಉಂಟುಮಾಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೋಟೆಲ್ ತನ್ನ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ಸೇರಿಸಿಕೊಂಡಿತ್ತು. ಎಲ್ಲ ಸುರಕ್ಷತಾ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿತ್ತು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ದೆಹಲಿ ಸರ್ಕಾರದ ಬೆಡ್ ಆ್ಯಂಡ್ ಬ್ರೇಕ್ಫಾಸ್ಟ್ ನೀತಿಯಡಿ ಈ ಹೋಟೆಲ್ಗೆ ಕೇವಲ 6 ಕೊಠಡಿಗಳನ್ನು ನಡೆಸಲು ಮಾತ್ರ ಅನುಮತಿ ಇತ್ತು. ಆದರೆ, ನೆಲಮಾಳಿಗೆ ಸೇರಿದಂತೆ ಸುಮಾರು 25 ಕೊಠಡಿಗಳನ್ನು ಇಲ್ಲಿ ಅಕ್ರಮವಾಗಿ ಕಟ್ಟಲಾಗಿದೆ.

ಹಾಗೂ ಅಧಿಕಾರಿಗಳಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಿಸಲಾಗಿದೆ. ಅಂದರೆ, ಇದು ಸಂಪೂರ್ಣವಾಗಿ ಅಕ್ರಮ ಕಟ್ಟಡ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಕಟ್ಟಡದ ಮಾಲೀಕನನ್ನು ಬಂಧಿಸಿರುವ ಪೊಲೀಸರು, ಭಾರತೀಯ ನ್ಯಾಯ ಸಂಹಿತೆಯ ಅಪರಾಧ ಮುಕ್ತ ನರಹತ್ಯೆ ಸೇರಿದಂತೆ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಈ ಹೋಟೆಲ್ ವ್ಯವಹಾರದೊಂದಿಗೆ ಸಂಪರ್ಕ ಹೊಂದಿರುವ ಇತರ ವ್ಯಕ್ತಿಗಳ ಪಾತ್ರದ ಕುರಿತೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ದುರಂತಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮಕ್ಕೆ ಸೂಚಿಸಿರುವ ದೆಹಲಿ ಸಿಎಂ ಕಚೇರಿ ಘಟನೆಯ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದೆ. ಅಲ್ಲದೇ ನಗರದಲ್ಲಿನ ಅಕ್ರಮ ಆಸ್ತಿಗಳು, ಅನಧಿಕೃತ ಗೆಸ್ಟ್ ಹೌಸ್ಗಳು ಮತ್ತು ಅಗ್ನಿ ಸುರಕ್ಷತಾ ನಿಯಮಗಳು ಹಾಗೂ ಕಟ್ಟಡ ಬೈಲಾಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಕಟ್ಟಡಗಳ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸುವಂತೆ ಅಧಿಕಾರಿಗಳಿಗೆ ಸಿಎಂಒ ಸೂಚಿಸಿದೆ ಎಂದಿ ತಿಳಿದುಬಂದಿದೆ.













