ಹುಬ್ಬಳ್ಳಿ : ತಂತ್ರಜ್ಞಾನ ಬೆಳೆದಂತೆ, ಡಿಜಿಟಲ್ ವಹಿವಾಟು ಹೆಚ್ಚುತ್ತಿದ್ದಂತೆ ಆನ್ಲೈನ್ ವಂಚನೆಯೂ ಹೆಚ್ಚಾಗುತ್ತಿದೆ. ವಂಚಕರು ನೇರವಾಗಿ ಬ್ಯಾಂಕ್ ಖಾತೆಗೆ ಕನ್ನ ಇಡಲು ಶುರು ಮಾಡಿದ್ದಾರೆ. ಗಾಯಕರು, ಚಿತ್ರ ನಟರು, ಅಷ್ಟೇ ಯಾಕೆ ನಮ್ಮ ಪ್ರಧಾನಿ ಮೋದಿ ಹೆಸರಿನಲ್ಲೂ ವಂಚನೆ ಮಾಡೋದಕ್ಕೆ ಶುರು ಮಾಡಿದ್ದ ಖದೀಮರು ಸಾಮಾನ್ಯರನ್ನೂ ಟಾರ್ಗೆಟ್ ಮಾಡ್ತಿದ್ದಾರೆ.
ಮರ್ಯಾದೆಗೆ ಅಂಜುವವರು, ಕೋಟಿ ಕೋಟಿ ಬ್ಯಾಲೆನ್ಸ್ ಹೊಂದಿರೋರು ಹಾಗೂ ನಿವೃತ್ತರನ್ನ ಟಾರ್ಗೆಟ್ ಮಾಡಲು ಶುರು ಮಾಡಿದ್ದಾರೆ ಸೈಬರ್ ವಂಚಕರು. ಹುಬ್ಬಳ್ಳಿಯ ಪ್ರಕರಣ ಇದಕ್ಕೆ ತಾಜಾ ಉದಾಹರಣೆಯಾಗಿದೆ.
ಡಿಜಿಟಲ್ ಅರೆಸ್ಟ್ ಮೂಲಕ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 1 ಕೋಟಿ ಹಣ ದೋಚಿದ್ದಾರೆ ಡಿಜಿಟಲ್ ಖದೀಮರು. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇದೇ ಮೊದಲ ಬಾರಿಗೆ 1 ಕೋಟಿ ಡಿಜಿಟಲ್ ಅರೆಸ್ಟ್ ಪ್ರಕರಣ ದಾಖಲಾಗಿದೆ.
76 ವರ್ಷ ವ್ಯಕ್ತಿಗೆ ಒಂದು ಕೋಟಿ ಪಂಗನಾಮ ಹಾಕಲಾಗಿದೆ. ಕೇಶ್ವಾಪುರದ ವಿನಯ ಕಾಲನಿಯ ನಾಗೇಶ ಶರ್ಮಾ ವಂಚನೆಗೆ ಒಳಗಾದವರು. ವಾಟ್ಸಪ್ ಮೂಲಕ ವಿಡಿಯೋ ಕರೆ ಮಾಡಿ, ಮುಂಬೈ ಕೊಲಬಾ ಪೊಲೀಸ್ ಠಾಣೆ ಅಧಿಕಾರಿಗಳೆಂದು ನಂಬಿಸಿ, ಡಿಜಿಟಲ್ ಅರೆಸ್ಟ್ ಮಾಡಿರುವುದಾಗಿ ಹೆದರಿಸಿದ್ದಾರೆ.
ಆರ್ಟಿಜಿಎಸ್ ಮೂಲಕ 1.07 ಕೋಟಿ ರೂ. ವರ್ಗಾಯಿಸಿಕೊಂಡು ವಂಚನೆ ಮಾಡಲಾಗಿದೆ. ನೀವು ಮುಂಬೈನ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಖಾತೆ ತೆರೆದು ಅದರಲ್ಲಿ ನಿಷೇಧಿತ ಪಿಎಫ್ಐ ಮುಖಂಡ ಒ.ಎಂ ಅಬ್ದುಲ್ ಸಲಾಂ ಜೊತೆಗೆ ವ್ಯವಹಾರ ಮಾಡಿದ್ದೀರಿ, 2 ಕೋಟಿ ರೂ. ವ್ಯವಹಾರ ಮಾಡಲು 20 ಲಕ್ಷ ರೂ. ಅಬ್ದುಲ್ನಿಂದ ಕಮಿಷನ್ ಪಡೆದಿದ್ದೀರಿ.
ಈ ಬಗ್ಗೆ ಮುಂಬೈ ಕೊಲಬಾ ಪೊಲೀಸ್ ಠಾಣೆಯಲ್ಲಿ ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ. ಅದಕ್ಕಾಗಿ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಿರುವುದಾಗಿ ಹೆಸರಿಸಿದ್ದಾರೆ. ತನಿಖೆಯಿಂದ ಮುಕ್ತ ಮಾಡಬೇಕಾದ್ರೆ ಹಣ ನೀಡಬೇಕೆಂದು ನಾಗೇಶ್ ಅವರಿಗೆ ಬೇಡಿಕೆಯಿಟ್ಟಿದ್ದಾರೆ ಖದೀಮರು.
ಅವರ ಮಾತು ನಂಬಿದ ನಾಗೇಶ್ ವಿವಿಧ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಆರ್ಟಿಜಿಎಸ್ ಮೂಲಕ ಒಟ್ಟು 1,07,80,600 ರೂ. ವರ್ಗಾಯಿಸಿದ್ದಾರೆ. ಜಾಗೃತಿವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಹುಬ್ಬಳ್ಳಿ ಸಿಇಎಸ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಿರಾತಕರ ಜಾಡು ಹಿಡಿಯಲು ಮುಂದಾಗಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ನೀಡಿರು ಮಾಹಿತಿ ಇದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.















