ಮನೆ ರಾಜ್ಯ ಕುಡಿಯುವ ನೀರಿಗೆ ಸಂಕಷ್ಟ: ಮಾರ್ಗಸೂಚಿ ಬಿಡುಗಡೆ ಮಾಡಿದ ಚಿಕ್ಕಮಗಳೂರು ಜಿಲ್ಲಾಡಳಿತ

ಕುಡಿಯುವ ನೀರಿಗೆ ಸಂಕಷ್ಟ: ಮಾರ್ಗಸೂಚಿ ಬಿಡುಗಡೆ ಮಾಡಿದ ಚಿಕ್ಕಮಗಳೂರು ಜಿಲ್ಲಾಡಳಿತ

0

ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ವರುಣ ಕೈ ಕೊಟ್ಟ ಪರಿಣಾಮ ಜಲಕ್ಷಾಮದ ಆತಂಕ ಎದುರಾಗಿದೆ. ಕುಡಿಯುವ ನೀರಿಗೆ ಸಂಕಷ್ಟದ ಮುನ್ಸೂಚನೆ ಸಿಕ್ಕ ಬೆನ್ನಲ್ಲೇ ಎಚ್ಚೆತ್ತ ಚಿಕ್ಕಮಗಳೂರು ಜಿಲ್ಲಾಡಳಿತ, ಮಾರ್ಗಸೂಚಿ ಬಿಡುಗಡೆ ಮಾಡಿದೆ. ಜಲ ಮೂಲಗಳಿಂದ ಕೃಷಿಗೆ ನೀರನ್ನ ಉಪಯೋಗಿಸದಂತೆ ಸೂಚನೆ ನೀಡಲಾಗಿದೆ.

ಜಲ ಮೂಲಗಳಿಂದ ಕೃಷಿಗೆ ನೀರನ್ನ ಉಪಯೋಗಿಸದಂತೆ ಸೂಚನೆ ನೀಡಿದ ಜಿಲ್ಲಾಡಳಿತವು ಕೆರೆ, ಹಳ್ಳ ಬಾವಿಗಳಿಂದ ಕೃಷಿಗೆ ನೀರನ್ನ ಬಳಸದಂತೆ ಎಚ್ಚರಿಕೆ ನೀಡಿದೆ. ಪಾಂಪ್‌ ಸೆಟ್ ಮೂಲಕ ಕೃಷಿ ಚಟುವಟಿಕೆಗಳಿಗೆ ನೀರು ಬಳಸದಂತೆ ಆದೇಶಿಸಿದೆ.

ಸಹಾಯವಾಣಿ ಆರಂಭ

ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಹಿನ್ನೆಲೆ ಜಿಲ್ಲಾಡಳಿತವು ಚಿಕ್ಕಮಗಳೂರು ತಾಲೂಕು ಕಚೇರಿಯಲ್ಲಿ ಸಹಾಯವಾಣಿ ತೆರೆದಿದೆ. ನೀರಿನ ಸಮಸ್ಯೆ ಇದ್ದರೆ 08262_228181 ನಂಬರ್ ​ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಈ ಸೇವೆ ಲಭ್ಯವಿರಲಿದೆ.

ಇದೆ ಮೊದಲ ಬಾರಿಗೆ ಚಿಕ್ಕಮಗಳೂರು ತಾಲೂಕಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಚಿಕ್ಕಮಗಳೂರು ನಗರ ಸೇರಿದಂತೆ ತಾಲೂಕಿನಲ್ಲಿ ಜಲಕ್ಷಾಮ ಉಂಟಾಗಿದೆ. ನಗರದ ಪ್ರಮುಖ ಕೆರೆಗಳು ಸಂಪೂರ್ಣವಾಗಿ ಬರಿದಾಗಿದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುವ ಆತಂಕ ಹಿನ್ನೆಲೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಟ್ಯಾಂಕರ್ ಮಾಲೀಕರಿಗೆ ‘ನೊಂದಣಿ’ ಸೂಚನೆ

ಟ್ಯಾಂಕರ್ ಮಾಲೀಕರಿಗೆ ನೊಂದಣಿ ಮಾಡಲು ಸೂಚನೆ ನೀಡಲಾಗಿದ್ದು, ನೋಂದಣಿಗೆ ಮಾರ್ಚ್ 11 ಕೊನೆಯ ದಿನವಾಗಿದೆ. ಮಳೆ ಕೈ ಕೊಟ್ಟ ಹಿನ್ನೆಲೆ ಮಲೆನಾಡಿನಲ್ಲಿ ಹನಿಹನಿ ನೀರಿಗೂ ಸಂಕಷ್ಟ ಎದುರಾಗಿದ್ದು, ಯಗಚಿ ಜಲಾಶಯದಲ್ಲಿ ನೀರಿನ ಮಟ್ಟದಲ್ಲಿ ಭಾರೀ ಇಳಿಕೆಯಾಗಿದೆ. ಚಿಕ್ಕಮಗಳೂರು ನಗರದಲ್ಲಿ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಲಿರುವ ಹಿನ್ನೆಲೆ ಬೇಲೂರಿನ ಯಗಚಿ ಜಲಾಶಯದಿಂದ ನಗರಕ್ಕೆ ನೀರು ಸರಬರಾಜು ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.

ಹಿಂದಿನ ಲೇಖನಮೈಸೂರು: ಹಿರಿಯ ವೈದ್ಯಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ
ಮುಂದಿನ ಲೇಖನಪೋಕ್ಸೊ  ಪ್ರಕರಣ: ವಿದ್ಯಾಚೌಡೇಶ್ವರಿ ಮಠದ ಪೀಠಾಧ್ಯಕ್ಷ, ಆಪ್ತ ಸಹಾಯಕನ ಬಂಧನ