ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ವಿವಾದಾತ್ಮಕ ಹೇಳಿಕೆಯು ರಾಜಕೀಯ ಹಿನ್ನಲೆಯಲ್ಲಿ ಭಾರೀ ಸಂಚಲನ ಉಂಟುಮಾಡಿದೆ. ಮಂಗಳೂರು ಜನರು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಪಡೆಯಲು ಸಾಲಿನಲ್ಲಿ ನಿಂತಿದ್ದರು ಆದರೆ ಮತ ಚಲಾಯಿಸಲು ಕಾಂಗ್ರೆಸ್ ಬೇಕೆನಿಸಲಿಲ್ಲ ಎಂಬ ಹೇಳಿಕೆಗೆ ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ವಿ. ಸುನಿಲ್ ಕುಮಾರ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ನವರ ಗ್ಯಾರಂಟಿಗಾಗಿ ಹೊಟ್ಟೆಬಟ್ಟೆ ಕಟ್ಟಿಕೊಳ್ಳುವ ದಯನೀಯ ಸ್ಥಿತಿ ಮಂಗಳೂರಿನ ಜನರಿಗೆ ಬಂದಿಲ್ಲ. ಗ್ಯಾರಂಟಿ ಘೋಷಣೆಯ ಬಳಿಕವೂ ಉಡುಪಿ-ದಕ್ಷಿಣ ಕನ್ನಡದಲ್ಲಿ ಮಖಾಡೆ ಮಲಗಿರುವ ಕಾಂಗ್ರೆಸ್ ಅನ್ನು ಎಬ್ಬಿಸುವುದಕ್ಕೆ ವಿಶೇಷ ಯೋಜನೆ ರೂಪಿಸಿ ಎಂದು ಮಾಜಿ ಸಚಿವ ವಿ ಸುನಿಲ್ ಕುಮಾರ್ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಂಗಳೂರು ಜನರ ಬಗ್ಗೆ ಮಾತನಾಡುವಾಗ, ಡಿಸಿಎಂ ಡಿಕೆ ಶಿವಕುಮಾರ್, ಡ್ಯಾಮೇಜಿಂಗ್ ಹೇಳಿಕೆ ಕೊಟ್ಟಿದ್ದರು. ಮಂಗಳೂರು ಜನ ಗ್ಯಾರಂಟಿ ಬೇಡ ಅಂದಿದ್ದರು. ಅವರೇ ಮೊದಲು ಕ್ಯೂನಲ್ಲಿ ನಿಂತಿದ್ದರು. ಮಂಗಳೂರು ಜನಕ್ಕೆ ಹೊಟ್ಟೆಬಟ್ಟೆಗೆ ಕಾಂಗ್ರೆಸ್ ಬೇಕು. ವೋಟ್ಗೆ ಬೇರೆಯವರು ಬೇಕು ಅಂತ ಹೇಳುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಈ ಸಂಬಂಧ ಸುನಿಲ್ ಕುಮಾರ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ, “ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಜನರು ಕಾಂಗ್ರೆಸ್ ನೀಡುವ ಗ್ಯಾರಂಟಿಗಳಿಂದ ಹೊಟ್ಟೆಬಟ್ಟೆ ಕಟ್ಟಿಕೊಳ್ಳುವ ಸ್ಥಿತಿಯಲ್ಲಿಲ್ಲ. ಅವರು ಪರಿಶ್ರಮದಿಂದ ದುಡಿದು ಜೀವನ ನಡೆಸುವ ಜನ. ಈ ಪ್ರದೇಶದ ಜನರು ನಿಮ್ಮ ದಯೆ ಭಿಕ್ಷೆ ಬೇಕೆಂದು ಕಾಯುವವರು ಅಲ್ಲ” ಎಂದು ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ. ಈ ಹಿಂದೆ ಬೆಂಗಳೂರು ನಗರದ ಜನತೆಯ ಬಗ್ಗೆಯೂ ಹೀಗೆ ಮಾತನಾಡಿದ್ದರು. ಮಂಗಳೂರು ಸೇರಿದಂತೆ ಕರಾವಳಿಯ ಜನರು ಸ್ವಾಭಿಮಾನಿಗಳು. ಬೆಂಗಳೂರಿನ ನಂತರ ಅತಿಹೆಚ್ಚು ತೆರಿಗೆ ಸಂಗ್ರಹವಾಗುವುದು ಇಲ್ಲಿಂದಲೇ ಎಂದು ಹೇಳಿದರು.
ನೀವು ಗ್ಯಾರಂಟಿ ಘೋಷಣೆ ಮಾಡುವಾಗ ಇದು ಮಂಗಳೂರಿಗೆ ಅನ್ವಯವಾಗುವುದಿಲ್ಲ ಎಂಬ ನಿಬಂಧನೆ ವಿಧಿಸಿದ್ದಿರೇ? ಗ್ಯಾರಂಟಿ ಜಾರಿಯಾದ ಮೇಲೆ ಮಂಗಳೂರಿನವರು ಅರ್ಜಿ ಸಲ್ಲಿಸಬಾರದು ಎಂದು ಕರಾರು ಹೇರಿದ್ದಿರೇ? ಮಂಗಳೂರು ಕರ್ನಾಟಕದ ಭಾಗವಾಗಿರುವುದರಿಂದ ಇಲ್ಲಿನ ಜನ ಅರ್ಜಿ ಸಲ್ಲಿಸಿದ್ದಾರೆ. ಅಷ್ಟಕ್ಕೂ ನಿಮ್ಮ ಗ್ಯಾರಂಟಿ ಯೋಜನೆ ಕನಕಪುರದವರಿಗೆ ಮಾತ್ರ ಸೀಮಿತವಲ್ಲ. ರಾಜ್ಯದ ಕರದಾತರ ಹಣದಲ್ಲಿ ಅನುಷ್ಠಾನ ಮಾಡುತ್ತಿದ್ದೀರಿ. ಹೊಟ್ಟೆಬಟ್ಟೆ ಕಟ್ಟಿಯಾದರೂ ನೀವು ಇದನ್ನು ಅನುಷ್ಠಾನ ಮಾಡಬೇಕೆ ವಿನಾ ನಿಲ್ಲಿಸುವುದಕ್ಕೆ ಕಳ್ಳಮಾರ್ಗ ಹುಡುಕಬೇಡಿ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕರಾವಳಿ ಜಿಲ್ಲೆಗಳಲ್ಲಿ ಕೋಮು ಶಾಂತಿ ಹದಗೆಡುತ್ತಿರುವುದಕ್ಕೆ ಅವರ ರಾಜಕೀಯವೇ ಕಾರಣ ಎಂದು ಅವರು ಆರೋಪಿಸಿದರು. “ಇದೇ ಕಾರಣಕ್ಕೆ ಮಂಗಳೂರಿನ ಜನರು ಕಾಂಗ್ರೆಸ್ ಪಕ್ಷವನ್ನು ನಿರಾಕರಿಸುತ್ತಿದ್ದಾರೆ” ಎಂದರು. ನಾವು ಬೇಕಿದ್ದರೆ ಹೊಟ್ಟೆಬಟ್ಟೆ ಕಟ್ಟಿಯಾದರೂ ದುಡಿಯುತ್ತೇವೆ. ಆದರೆ ಕಾಂಗ್ರೆಸಿಗರ ಹಂಗು, ದಯಾ ಭಿಕ್ಷೆ ಬೇಕಿಲ್ಲ. ಇಂಥ ಕೀಳು ಅಭಿರುಚಿಯ ಹೇಳಿಕೆ ನೀಡಿ ಮಂಗಳೂರಿನವರ ಆತ್ಮಾಭಿಮಾನ ಕೆಣಕಬೇಡಿ ಎಂದು ಕಿಡಿಕಾರಿದರು.














