ಮನೆ ಸ್ಥಳೀಯ ಶಿಕ್ಷಣದ ಮೂಲಕ ಎಲ್ಲವನ್ನೂ ಸಾಧಿಸಲು ಸಾಧ್ಯ: ಡಾ. ಹೆಚ್ ಸಿ ಮಹದೇವಪ್ಪ

ಶಿಕ್ಷಣದ ಮೂಲಕ ಎಲ್ಲವನ್ನೂ ಸಾಧಿಸಲು ಸಾಧ್ಯ: ಡಾ. ಹೆಚ್ ಸಿ ಮಹದೇವಪ್ಪ

0

ಮೈಸೂರು: ಶಿಕ್ಷಣದ ಮೂಲಕ ಎಲ್ಲವನ್ನು ಸಾಧಿಸಲು ಸಾಧ್ಯ. ಆದ್ದರಿಂದಲೇ ಇಂದು ನಾವು ಚಂದ್ರನನ್ನು ಸಹ ಮುಟ್ಟಿದ್ದೇವೆ ಎಂದು ಸಮಾಜ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್ ಸಿ ಮಹದೇವಪ್ಪನವರು ತಿಳಿಸಿದರು.

ನಗರದ ಕರ್ನಾಟಕ ಕಲಾಮಂದಿರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದು ದೇಶದಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.

ಸ್ವತಂತ್ರ ಪೂರ್ವದಲ್ಲಿ ಭಾರತದ ಜನಸಂಖ್ಯೆಯಲ್ಲಿ ಶೇ. ಹತ್ತಕ್ಕಿಂತಲೂ ಕಡಿಮೆ ಸಾಕ್ಷರತೆ ಇತ್ತು. ಸ್ವಾತಂತ್ರ್ಯ ಪಡೆದುಕೊಂಡ ಪೂರ್ವದಲ್ಲಿ ನಮ್ಮದೇ ಆದ ವ್ಯವಸ್ಥೆಗಳನ್ನು ರೂಪಿಸಿಕೊಳ್ಳುವ ಸ್ಥಿತಿ ಬಂದಾಗ ನಮ್ಮಲ್ಲಿನ ಸಾಕ್ಷರತೆಯ ಮಟ್ಟ ಬಹಳ ಕಡಿಮೆ ಇತ್ತು. ಭಾರತದ ಚರಿತ್ರಿಯು ಕತ್ತಲಲ್ಲಿ ವಾಸಿಸುವ ಪರಿಸ್ಥಿತಿಯನ್ನು ಹೊಂದಿತ್ತು. ಆಗ ಬೆಳಕು ಹುಡುಕಲು ಶಿಕ್ಷಣವಿರಲಿಲ್ಲ. ಸನಾತನ ವಾದಗಳು ನಮ್ಮನ್ನು ಕತ್ತಲಲ್ಲಿ ಇಟ್ಟಿದ್ದವು. ಶಿಕ್ಷಣ ಪಡೆದುಕೊಂಡರೆ ಕಾದ ಬಿಸಿ ಎಣ್ಣೆ ಸುರಿವ ದುಸ್ಥಿತಿ ಇತ್ತು.  ಲಾರ್ಡ್ ಮೆಕಾಲೆ ಇಂಗ್ಲೀಷ್ ಶಿಕ್ಷಣವನ್ನು ಉದಾರಿಕರಣಗೊಳಿಸದ್ದಿದ್ದರೆ ನಾವು ಎಲ್ಲಾದರೂ ಜೀತ ಮಾಡುತ್ತಿರಬೇಕಿತ್ತು ಎಂದು ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ರಾಷ್ಟ್ರಕವಿ ಕುವೆಂಪುರವರು ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿಸಿದರು.

1964 ರಲ್ಲಿ ಬಂದ ಸುಬ್ರಹ್ಮಣ್ಯ ಕಮಿಷನ್ ನಲ್ಲಿ ಬಂದ ಹೊಸ ಶಿಕ್ಷಣ ನೀತಿ ಹಾಗೂ 1984 ರ ಕೊತಾರಿ ಕಮಿಷನ್ ಬಂದ ಮೇಲೆ ಶಿಕ್ಷಣದ ಸ್ಥಿತಿಗತಿ ಸುಧಾರಣೆಗೊಂಡಿದೆ. ಪ್ರಸ್ತುತ ಶೇ. 75ರಷ್ಟು ಸಾಕ್ಷರತೆಯನ್ನು ನಾವು ಸಾಧಿಸಿದ್ದೇವೆ. ಆದರೆ ನೂರಕ್ಕೆ ನೂರರಷ್ಟು ಸಾಕ್ಷರತೆ ಸಾಧಿಸಲು ಸಾಧ್ಯವಾಗಿಲ್ಲ. ಮುಕ್ತವಾದ ಶಿಕ್ಷಣ ವ್ಯವಸ್ಥೆ ಇದ್ದರೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಇರಬಹುದಿತ್ತು. ರಾಜಕೀಯ ಮುತ್ಸದಿ ಹಾಗೂ ಶಿಕ್ಷಣ ತಜ್ಞರಾದ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಾ ಎಲ್ಲಾ ಶಿಕ್ಷಕರಿಗೂ ಗೌರವವನ್ನು ಸಲ್ಲಿಸಲು ಇದು ಉತ್ತಮ ಕಾರ್ಯಕ್ರಮವಾಗಿದೆ ಎಂದರು.

ಕೇವಲ ಶಾಲೆಗಳಲ್ಲಿ ಪಾಠ ಮಾಡಿದವರು ಮಾತ್ರ ಶಿಕ್ಷಕರಲ್ಲ ನಮ್ಮ ಜೀವನದಲ್ಲಿ ಜೀವನ ಪಾಠ ಹೇಳಿ ಕೊಟ್ಟವರು ಶಿಕ್ಷಕರೇ.  ಶಿಕ್ಷಣದ ಮೂಲಕ ಮಾನವೀಯ ಮೌಲ್ಯಗಳನ್ನು ತಿಳಿಸುತ್ತಾ, ಮಗುವನ್ನು ಸಮಾಜದ ಜವಾಬ್ದಾರಿಯುತ ಪ್ರಜೆಯಾಗಿ ನಿರ್ಮಿಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಶಿಕ್ಷಣ ಕೇವಲ ಪಾಠಕ್ಕೆ ಮಾತ್ರ ಸೀಮಿತವಾಗಿರದೆ ರಾಷ್ಟ್ರದ ಪುನರ್ ನಿರ್ಮಾಣಕ್ಕೆ ಪೂರಕವಾಗುವಂತಿರಲಿ.  ಭಾರತದ 140 ಕೋಟಿ ಜನರ ಯೋಗ ಕ್ಷೇಮ ಶಿಕ್ಷಣವನ್ನು ಅವಲಂಬಿಸಿದೆ. ಸಿದ್ಧಾಂತಗಳ ಮೂಲಕ ದೇಶವನ್ನು ಎಚ್ಚರಿಸುವುದು. ವೈಚಾರಿಕ ಹಾಗೂ ವೈಜ್ಞಾನಿಕ ಶಿಕ್ಷಣವನ್ನು ನೀಡಬೇಕೆಂಬುದು ಡಾ. ಬಿಆರ್ ಅಂಬೇಡ್ಕರ್ ರವರ ಸಂದೇಶ ಎಂದು ತಿಳಿಸಿದರು.

ಪ್ರಸ್ತುತ ಸರ್ಕಾರ ವಿದ್ಯಾರ್ಥಿಗಳಿಗೆ ಹಾಗೂ ಅವರ ಶಿಕ್ಷಣಕ್ಕೆ ಪೂರಕವಾದ ಎಲ್ಲಾ ಯೋಜನೆಗಳನ್ನು ವಿಸ್ತರಿಸಿದೆ ಆದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ  ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವುದಲ್ಲದೆ ಪ್ರಥಮ ದರ್ಜೆಯ ನಾಗರಿಕರಾಗಿಯೂ ಹೊರಹೊಮ್ಮಬೇಕು. ನಮ್ಮ ಜಿಲ್ಲೆಯಲ್ಲಿ  ಸುಮಾರು 19,000 ಶಿಕ್ಷಕರಿದ್ದಾರೆ. 4,20,000ಕ್ಕೂ ಹೆಚ್ಚು ಮಕ್ಕಳಿದ್ದಾರೆ. 33 ಶಿಕ್ಷಕರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಭಾಜನರಾಗಿದ್ದು, ಇಬ್ಬರು ಶಿಕ್ಷಕರು ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆ ಮತ್ತಷ್ಟು ಸಾಧನೆ ಮಾಡಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ 33 ಶಿಕ್ಷಕರನ್ನು, ನಿವೃತ್ತ ಶಿಕ್ಷಕರನ್ನು ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ಪಡೆದ ಶಾಲಾ ಮುಖ್ಯ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು.

ಶಿಕ್ಷಕರು ‘ನಮ್ಮ ದಿನದಂದು  ನಮ್ಮ ಹಕ್ಕೋತಾಯಗಳು’  ಎಂಬ ಶಿಕ್ಷಕರ ಸಮಸ್ಯೆಗಳನ್ನು ಒಳಗೊಂಡ ಮನವಿ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಸಭಾ ಶಾಸಕರಾದ ತನ್ವೀರ್ ಸೇಟ್, ಕೆ ಹರೀಶ್ ಗೌಡ, ಟಿ ಎಸ್ ಶ್ರೀವತ್ಸ, ವಿಧಾನಪರಿಷತ್ ನ  ಶಾಸಕರಾದ ಸಿಎನ್ ಮಂಜೇಗೌಡ, ಮರಿತಿಬ್ಬೇಗೌಡ ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್, ಉಪ ಮಹಾಪೌರರಾದ ಡಾ ಜಿ ರೂಪ, ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಗಾಯತ್ರಿ ಕೆ ಎಂ, ಪ್ರಧಾನ ಭಾಷಣಕಾರರಾದ ಶಿವಪ್ರಕಾಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಜೆ. ಗೋವಿಂದರಾಜು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪಾಂಡು ಹೆಚ್ ಕೆ ಅವರು ಸೇರಿದಂತೆ ಇತರರು ಭಾಗವಹಿಸಿದ್ದರು.

  • ಟ್ಯಾಗ್ಗಳು
  • Mysore
ಹಿಂದಿನ ಲೇಖನವಿಶ್ವಕಪ್ ಕ್ರಿಕೆಟ್: ಭಾರತ ತಂಡ ಪ್ರಕಟ
ಮುಂದಿನ ಲೇಖನಚಿತ್ರನಟ ಗಣೇಶ್ ಗೆ ತಾತ್ಕಾಲಿಕ ಶೆಡ್ ನಿರ್ಮಿಸಲು  ನೀಡಿದ್ದ ಅನುಮತಿ ರದ್ದು – ಈಶ್ವರ ಖಂಡ್ರೆ