ಮನೆ ರಾಷ್ಟ್ರೀಯ ಖನಿಜ ನಿಕ್ಷೇಪಗಳ ಶೋಧನೆಗೆ ಕೇಂದ್ರದ ಹೆಚ್ಚಿನ ಸಹಕಾರ ಅಗತ್ಯ: ಗಣಿ ಸಚಿವ ಹಾಲಪ್ಪ ಆಚಾರ್

ಖನಿಜ ನಿಕ್ಷೇಪಗಳ ಶೋಧನೆಗೆ ಕೇಂದ್ರದ ಹೆಚ್ಚಿನ ಸಹಕಾರ ಅಗತ್ಯ: ಗಣಿ ಸಚಿವ ಹಾಲಪ್ಪ ಆಚಾರ್

0

 ಬೆಂಗಳೂರು(Bengaluru): ರಾಜ್ಯದಲ್ಲಿ ವಿಫುಲ ಖನಿಜ ನಿಕ್ಷೇಪಗಳಿದ್ದು, ಇವುಗಳ ಶೋಧನೆಗೆ ರಾಜ್ಯ ಸರಕಾರ ಅಗತ್ಯ ಕ್ರಮಗಳನ್ನ ಕೈಗೊಂಡಿದೆ. ಆದರೆ, ಈ ಶೋಧನೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಕೇಂದ್ರ ಗಣಿ ಮಂತ್ರಾಲಯ ಸರಕಾರ ಹಾಗೂ ಕೇಂದ್ರ ಖನಿಜ ಶೋಧನಾ ಟ್ರಸ್ಟ್‌ನ ಸಹಕಾರ ಅಗತ್ಯವಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್‌ ಹೇಳಿದರು.

ಇಂದು ಹೈದರಬಾದ್‌ನಲ್ಲಿ ಪ್ರಾರಂಭವಾದ “ರಾಷ್ಟ್ರೀಯ ಗಣಿಗಾರಿಕೆ ಮಂತ್ರಿಗಳ ಸಮಾವೇಶ” ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯಾನಂತರ ಇದುವರೆಗೂ ಯಾವುದೇ ಸರಕಾರಗಳು ಗಣಿ ಕ್ಷೇತ್ರದಲ್ಲಿ ಇಂತಹ ಪಾರದರ್ಶಕ ಹಾಗೂ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಲು ಮುಂದಾಗಿರಲಿಲ್ಲ. ಈ ಸುಧಾರಣೆಗಳು ರಾಜ್ಯ ಸರಕಾರಗಳು ಹೆಚ್ಚು ಆದಾಯವನ್ನು ಪಡೆದುಕೊಳ್ಳಲು ಸಹಾಯ ಮಾಡಿವೆ. ವೈಜ್ಞಾನಿಕ ಹಾಗೂ ಪರಿಸರ ಸ್ನೇಹಿ ಕ್ರಮಗಳು ರಾಜ್ಯಗಳ ಗಣಿ ಕ್ಷೇತ್ರದ ಅಭಿವೃದ್ದಿಗೂ ಸಹಕಾರ ಮಾಡಿವೆ ಎಂದರು.

ಕರ್ನಾಟಕ ರಾಜ್ಯದಲ್ಲಿ ಗಣಿಗಾರಿಕೆಗೆ ವಿಫುಲ ಅವಕಾಶಗಳಿವೆ. ಲೈಮ್‌ಸ್ಟೋನ್‌ ಗಣಿಗಾರಿಕೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಹಾಗೂ ಕಬ್ಬಿಣದ ಅದಿರಿನ ಗಣಿಗಾರಿಕೆಯಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ. 2021-22 ರಲ್ಲಿ ರಾಜ್ಯ ಸರಕಾರ 6,308 ಕೋಟಿ ರೂಪಾಯಿಗಳ ಆದಾಯ ಸಂಗ್ರಹಿಸಿದೆ. ಪ್ರಸ್ತುತ ಸಾಲಿನಲ್ಲಿ ಜುಲೈ ವರೆಗೂ 1,425 ಕೋಟಿ ರೂಪಾಯಿ ಆದಾಯವನ್ನು ಸಂಗ್ರಹಿಸಲಾಗಿದ್ದು, ಈ ಬಾರಿ 6,500 ಕೋಟಿ ರೂಪಾಯಿಗಳ ಆದಾಯದ ನಿರೀಕ್ಷೆಯಲ್ಲಿದ್ದೇವೆ. 2015 ರಿಂದ ಗಣಿ ಕ್ಷೇತ್ರದಲ್ಲಿ ಆಗಿರುವ ಸುಧಾರಣೆಯ ಹಿನ್ನಲೆಯಲ್ಲಿ ನಮ್ಮ ರಾಜ್ಯದಲ್ಲೂ ಬಹಳಷ್ಟು ಅಭಿವೃದ್ದಿಯಾಗಿದೆ. ರಾಜ್ಯದಲ್ಲಿ ಇನ್ನೂ ಹೆಚ್ಚಿನ ಖನಿಜ ನಿಕ್ಷೇಪಗಳಿದ್ದು ಅವುಗಳ ಶೋಧನೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಈಗಾಗಲೇ 113 ಭೂವಿಜ್ಞಾನಿಗಳನ್ನ ನೇಮಕ ಮಾಡಿಕೊಂಡಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಕೇಂದ್ರ ಗಣಿ ಮಂತ್ರಾಲಯ ಸರಕಾರ ಹಾಗೂ ಕೇಂದ್ರ ಖನಿಜ ಶೋಧನಾ ಟ್ರಸ್ಟ್‌ ನ ಸಹಕಾರದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಕರ್ನಾಟಕ ರಾಜ್ಯ ಕಳೆದ ವರ್ಷ ರಾಷ್ಟ್ರೀಯ ಖನಿಜ ವಿಕಾಸ ಪುರಸ್ಕಾರದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದೇವೆ. ಗಣಿ ಇಲಾಖೆಯಲ್ಲಿ ನೂತನ ಅಂಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಮೊದಲ 2 ನೇ ಸ್ಥಾನಕ್ಕೆ ಅಭಿವೃದ್ದಿ ಹೊಂದುವ ಗುರಿಯನ್ನು ಹೊಂದಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಗಣಿ ಸಚಿವರಾದ ಪ್ರಹ್ಲಾದ್‌ ಜೋಷಿ, ದೇಶದ ಹಲವು ರಾಜ್ಯಗಳ ಗಣಿ ಇಲಾಖೆಯ ಸಚಿವರು, ಗಣಿ ಮಂತ್ರಾಲಯದ ಹಿರಿಯ ಅಧಿಕಾರಿಗಳು ರಾಜ್ಯದ ಗಣಿ ಇಲಾಖೆಯ ನಿರ್ದೇಶಕರಾದ ಡಿ ಎಸ್‌ ರಮೇಶ್‌ ಉಪಸ್ಥಿತರಿದ್ದರು.

ಹಿಂದಿನ ಲೇಖನಕಾಡಾನೆ ದಾಳಿಗೆ ಬಲಿಯಾದ ಕಾರ್ಮಿಕನ ಶವವಿಟ್ಟು ಪ್ರತಿಭಟನೆ: ಲಾಠಿ ಪ್ರಹಾರ
ಮುಂದಿನ ಲೇಖನಕನಕಪುರ ನಗರ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ನಿತಿನ್ ಗಡ್ಕರಿಗೆ ಡಿಕೆಶಿ ಮನವಿ