ಮೈಸೂರು : ದಿನ ಬೆಳಗಾದರೆ ಸಚಿವರಾದ ಝಮೀರ್ ಅಹಮದ್ ಖಾನ್ ಅವರ ಮನೆ ಮುಂದೆ ನೂರಾರು ಜನರು ಸಹಾಯ ಕೋರಿ ನಿಂತಿರುತ್ತಾರೆ.
ಅಂತಹದರಲ್ಲಿ ಬಡವರಿಗೆ ನೀಡುವ ಮನೆಗಳನ್ನು ಮಂಜೂರು ಮಾಡಲು ಸಚಿವರಾದ ಝಮೀರ್ ಅವರು ಲಂಚ ಪಡೆಯುತ್ತಾರೆ ಎಂಬ ಶಾಸಕ ಬಿ.ಆರ್.ಪಾಟೀಲ್ ಆರೋಪ ಶುದ್ಧ ಸುಳ್ಳು. ಕೂಡಲೇ ಪಾಟೀಲ್ ಝಮೀರ್ ಅವರ ಕ್ಷಮೆ ಯಾಚಿಸಬೇಕು ಇಲ್ಲದಿದ್ದಲ್ಲಿ ಬಿ.ಆರ್.ಪಾಟೀಲ್ ಮನೆ ಮುಂದೆ ಧರಣಿ ನಡೆಸಿ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತಸಂಘ(ರೈತಬಣ)ದ ಅಧ್ಯಕ್ಷರಾದ ಇಂಗಲಗುಪ್ಪೆ ಕೃಷ್ಣೇಗೌಡ ಎಚ್ಚರಿಕೆ ನೀಡಿದರು.
ಮೈಸೂರಿನ ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಇದು ಒಬ್ಬ ಪ್ರಾಮಾಣಿಕ ಅಲ್ಪಸಂಖ್ಯಾತ ಸಚಿವರಿಗೆ ಕೆಟ್ಟ ಹೆಸರು ತರಲು ನಡೆಸಿರುವ ಷಡ್ಯಂತ್ರವಾಗಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಮಾತ್ರವಲ್ಲದೇ, ಝಮೀರ್ ಅವರು ಎಲ್ಲ ಸಮುದಾಯಕ್ಕೂ ಯಾವುದೇ ಧರ್ಮ, ಜಾತಿ ಬೇಧ ಇಲ್ಲದೆ. ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಅಪರೂಪದ ಅನುವಂಶಿಕ ಖಾಯಿಲೆಯಿಂದ ಬಳಲುತ್ತಿರುವ ಮೈಸೂರಿನ ನಾಗಶ್ರೀ-ಕಿಶೋರ್ ದಂಪತಿಯ ಪುತ್ರಿ, ಎರಡು ವರ್ಷದ ಕೀರ್ತನ ಅವರ ಚಿಕಿತ್ಸೆಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರಾದ ಬಿ.ಝೆಡ್. ಝಮೀರ್ ಅಹಮದ್ ಖಾನ್ ಅವರು ತಮ್ಮ ವೈಯಕ್ತಿಕವಾಗಿ ೨೫ ಲಕ್ಷ ರೂ. ನೆರವಿನ ಚೆಕ್ ನೀಡಿ, ಮಗುವಿನ ಚೇತರಿಕೆಗೆ ಶುಭ ಹಾರೈಸಿರುವ ಘಟನೆ ನಮ್ಮ ಕಣ್ಣ ಮುಂದಿದೆ.
ಇಲ್ಲಿ ಅವರು ಮಗು ಹಿಂದೂ ಅಥವಾ ಮುಸ್ಲಿಂ ಎಂದು ನೋಡಿಲ್ಲ. ಅವರು ಮಗು ಮತ್ತು ಆಕೆಯ ಆರೋಗ್ಯದ ಸ್ಥಿತಿ ಮತ್ತು ಮಗುವಿನ ಕುಟುಂಬದ ಆರ್ಥಿಕ ಪರಿಸ್ಥಿತಿ ನೋಡಿ ಸಹಾಯ ಮಾಡಿದ್ದಾರೆ. ಇಂತಹ ದಾನಿಯ ಬಗ್ಗೆ
ಇಡೀ ರಾಜ್ಯದ ಜನತೆ ಝಮೀರ್ ಅವರನ್ನು ಕೊಂಡಾಡುತ್ತಾರೆ. ಅಂತಹದರಲ್ಲಿ ಬಿ.ಆರ್.ಪಾಟೀಲ್ ಈ ರೀತಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಅಲ್ಪಸಂಖ್ಯಾತ ನಾಯಕನ ತೇಜೋವಧೆ ಮಾಡುವುದು ಸರಿಯಲ್ಲ.
ಗಾಂಧಿ ಟೋಪಿ ಹಾಕಿದಾಕ್ಷಣ ಬಿ.ಆರ್.ಪಾಟೀಲ್ ಗಾಂಧಿ ಅನುಯಾಯಿ ಅಥವಾ ಸತ್ಯವಂತ ಆಗಲ್ಲ, ಝಮೀರ್ ವಿರುದ್ಧ ಸುಳ್ಳು ಹೇಳುವ ಮೂಲಕ ಅವರು ಗಾಂಧಿ ತತ್ವಕ್ಕೆ ಮಸಿ ಬಳಿಸಿದ್ದಾರೆ. ತೀವ್ರ ಬಡತನದಿಂದ ಬಂದ ಝಮೀರ್ ಅಹಮದ್ ಖಾನ್ ಯಾವುದೇ ನಾಯಕರ ಬೆಂಬಲ ಇಲ್ಲದೆ ತಮ್ಮ ಸ್ವಯಂ ಶಕ್ತಿಯಿಂದ ರಾಜಕೀಯದಲ್ಲಿ ಬೆಳೆದು ಬಂದ ನಾಯಕರು. ಇದುವರೆಗೂ ತಮ್ಮ ಕ್ಷೇತ್ರದಲ್ಲಿ ಯಾವುದೇ ಜಾತಿ ತಾರತಮ್ಯ ಮಾಡದೆ ಅಪಾರ ಜನಪ್ರಿಯತೆ ಗಳಿಸಿರುವ ಅಜಾತಶತೃ ಇಂತಹದರಲ್ಲಿ ಅವರು ಮನೆ ಮಂಜೂರಾತಿಗೆ ಲಂಚ ಪಡೆದಿದ್ದಾರೆ ಎನ್ನುವುದು ಹಾಸ್ಯಾಸ್ಪದ ಎಂದರು.
ಶಾಸಕ ಬಿ.ಆರ್.ಪಾಟೀಲ್ ಸರ್ಕಾರವನ್ನು ಬ್ಲಾಕ್ ಮೇಲ್ ಮಾಡಲು ಹೊರಟಿದ್ದಾರೆ. ಆದರೇ ತಮ್ಮ ಕಾರ್ಯ ಸಾಧನೆಗಾಗಿ ಅಲ್ಪಸಂಖ್ಯಾತ ನಾಯಕನನ್ನು ತುಳಿಯಲು ಹೊರಟರೆ ಮುಂದಿನ ಚುನಾವಣೆಯಲ್ಲಿ ಸಚಿವರಾದ ಝಮೀರ್ ಅಹಮದ್ ಖಾನ್ ಅವರ ಜಾತ್ಯತೀತ ಅಭಿಮಾನಿಗಳು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೃಷ್ಣೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿಗೆ ಬರುವ ಯಾವುದೇ ಮನೆ ಅಥವಾ ನಿವೇಶನ ಹಂಚಿಕೆಗಳ ಪರಮಾಧಿಕಾರ ಆಯಾ ಗ್ರಾಮ ಪಂಚಾಯಿತು ಆಡಳಿತಕ್ಕೆ ಇರುತ್ತದೆ. ಇಲ್ಲಿ ಶಾಸಕರು ಅಧಿಕೃತವಾಗಿ ಮೂಗು ತೂರಿಸುವಂತಿಲ್ಲ. ಗ್ರಾಮ ಸಭೆಯಲ್ಲಿ ಆಯ್ಕೆಯದ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆಮಾಡಲಾಗುತ್ತದೆ. ಬಹುಶಃ ಶಾಸಕ ಬಿ.ಆರ್.ಪಾಟೀಲ್ ಲಂಚ ಪಡೆದು ಮನೆ ಹಂಚಿಕೆಗೆ ಪಟ್ಟಿ ನೀಡಿರಬಹುದು ಅದು ತಿರಸ್ಕೃತವಾಗಿರಬಹುದು. ಈ ಕಾರಣಕ್ಕಾಗಿ ಅವರು ಝಮೀರ್ ಅಹಮದ್ ಖಾನ್ ಅವರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಬೇಳೂರು ಗೋಪಾಲಕೃಷ್ಣ ವಿರುದ್ಧ ಕಿಡಿ: ಬಂಗಾರಪ್ಪ ಅವರ ಕಾಲದಲ್ಲಿ ೨೦ ರಿಂದ ೩೦ ವೈನ್ಸ್ಟೋರ್ ಮಾಡಿಕೊಂಡು ಸಾಕಷ್ಟು ಹಣ ಮಾಡಿಕೊಂಡಿದ್ದು, ಇದೀಗ ಬಂಗಾರಪ್ಪ ಅವರ ಕುಟುಂಬದ ವಿರುದ್ಧ ಸೆಡ್ಡು ಹೊಡೆದು ನಿಂತಿರುವ ಶಾಸಕ ಬೇಳೂರು ಗೋಪಾಲ ಕೃಷ್ಣ ಅವರ ಮಾತಿಗೆ ಈ ಸರ್ಕಾರದಲ್ಲಿ ಯಾವುದೇ ಕಿಮ್ಮತ್ತಿಲ್ಲ. ಇವರೆಲ್ಲರೂಂದು ದುಷ್ಟಕೂಟ ರಚಿಸಿಕೊಂಡು ಒಬ್ಬ ಅಲ್ಪ ಸಂಖ್ಯಾತ ನಾಯಕನನ್ನು ಮುಗಿಸಲು ನಡೆಸುತ್ತಿರುವ ಹುನ್ನಾರ. ಇದರಲ್ಲಿ ಇವರು ವಿಫಲರಾಗುತ್ತಾರೆ. ಮತದಾರರೇ ಇವರಿಗೆ ಬುದ್ಧಿ ಕಲಿಸುತ್ತಾರೆ.
ಇಂಗಲಗುಪ್ಪೆ ಕೃಷ್ಣೇಗೌಡ, ರಾಜ್ಯಾಧ್ಯಕ್ಷರು. ಕರಾರೈಸಂ(ರೈತಬಣ)














