ಮನೆ ಕ್ರೀಡೆ ನಾಯಕನಾಗಿ ಕೆ.ಎಲ್.ರಾಹುಲ್ ಉತ್ತಮ ಕಾರ್ಯ: ರಾಹುಲ್ ದ್ರಾವಿಡ್

ನಾಯಕನಾಗಿ ಕೆ.ಎಲ್.ರಾಹುಲ್ ಉತ್ತಮ ಕಾರ್ಯ: ರಾಹುಲ್ ದ್ರಾವಿಡ್

0

ಕೇಪ್‌ ಟೌನ್‌(ದಕ್ಷಿಣ ಅಫ್ರಿಕಾ): ದಕ್ಷಿಣ ಆಫ್ರಿಕಾದ ಮೂರು ಪಂದ್ಯಗಳ ಓಡಿಐನಲ್ಲಿ  ಸರಣಿಯಾಗಿ ಸೋತಿದ್ದರೂ  ತಂಡದ ನಾಯಕನಾಗಿ ಕೆ.ಎಲ್.ರಾಹುಲ್ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೆಡ್‌ ಕೋಚ್‌ ರಾಹುಲ್ ದ್ರಾವಿಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾನುವಾರ ಇಲ್ಲಿನ ನ್ಯೂಲೆಂಡ್ಸ್‌ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಶಿಖರ್‌ ಧವನ್‌(61), ವಿರಾಟ್‌ ಕೊಹ್ಲಿ(65) ಹಾಗೂ ದೀಪಕ್‌ ಚಹರ್‌(54) ಅವರ ಅರ್ಧಶತಕಗಳ ಹೊರತಾಗಿಯೂ ಭಾರತ ತಂಡ ಮೂರನೇ ಓಡಿಐ ಪಂದ್ಯದಲ್ಲಿ ಕೇವಲ 4 ರನ್‌ನಿಂದ ಸೋಲು ಅನುಭವಿಸಿತು. ಆ ಮೂಲಕ ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ ಟೀಮ್‌ ಇಂಡಿಯಾ 0-3 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಆಘಾತ ಅನುಭವಿಸಿತು.

ಪಂದ್ಯದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಹುಲ್‌ ದ್ರಾವಿಡ್, “ನನಗೆ ಅನಿಸಿದ ಹಾಗೆ ಕೆ.ಎಲ್.ರಾಹುಲ್ ನಾಯಕನಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅವರ ಪಾಲಿಗೆ ನಾಯಕತ್ವ ಸುಲಭವಾಗಿರಲಿಲ್ಲ. ಇದೇ ಮೊದಲ ಬಾರಿ ಅವರು ನಾಯಕತ್ವದ ಜವಾಬ್ದಾರಿ ನಿರ್ವಹಿಸಿದ್ದಾರೆ. ಆದ್ದರಿಂದ ತಮ್ಮ ಆಟಗಾರರಿಂದ ಕೌಶಲವನ್ನು ಬಳಿಸಿಕೊಂಡು ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಅವರು ಸ್ವಲ್ಪ ಎಡವಿದ್ದಾರೆ,” ಎಂದು ಹೇಳಿದರು.


“ಪ್ರವಾಸಿ ತಂಡದ ನಾಯಕನಾಗಿ ಕೆ.ಎಲ್‌ ರಾಹುಲ್ ಯೋಗ್ಯ ಕೆಲಸವನ್ನು ಮಾಡಿದ್ದಾರೆ. ಆದರೆ ಖಚಿತವಾಗಿಯೂ ಅವರು ಮುಂದೊಂದು ದಿನ ಉತ್ತಮ ನಾಯಕರಾಗಲಿದ್ದಾರೆ. ಸ್ಪಿನ್ನರ್‌ಗಳ ಕಡಗೆ ಬೆಟ್ಟು ತೋರಿಸುವ ಬದಲು ನಾವು ವಿಕೆಟ್‌ ಪಡೆಯಬೇಕಾದ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ. ಸ್ಪಿನ್ನರ್‌ಗಳು ಮಧ್ಯಮ ಓವರ್‌ಗಳಲ್ಲಿ ವಿಕೆಟ್‌ ಪಡೆಯುವ ಮೂಲಕ ಪಂದ್ಯದ ದಿಕ್ಕು ಬದಲಿಸಬೇಕು. ಇದು ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ. ಈ ಪ್ರವಾಸದಿಂದ ನಾವು ಸಾಕಷ್ಟು ಕಲಿತಿದ್ದೇವೆ,” ಎಂದರು.


ಆಟಗಾರರಿಗೆ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಹೆಚ್ಚು ಅವಕಾಶ ನೀಡಿದ ಬಗ್ಗೆ ಮಾತನಾಡಿದ ಅವರು, “ಆಟಗಾರರಿಗೆ ಸಾಧ್ಯವಾದಷ್ಟು ಹೆಚ್ಚಿನ ಅವಕಾಶಗಳನ್ನು ನೀಡುವುದು ನಮ್ಮ ಯೋಜನೆ. ಈ ಪ್ರವಾಸದಲ್ಲಿ ನಾವು ಪ್ರಯತ್ನಿಸಿದ ಸಂಗತಿ ಇದಾಗಿದೆ. ನಾವು ಮಧ್ಯಮ ಕ್ರಮಾಂಕದಲ್ಲಿ ಹೆಚ್ಚು ಬದಲಾವಣೆ ಮಾಡದೆ ಇರುವುದನ್ನು ನೀವು ನೋಡಿರಬಹುದು. ಕೊನೆಯ ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ಗೆ ಅವಕಾಶ ಸಿಕ್ಕಿದೆ. ಇದನ್ನು ಹೊರತುಪಡಿಸಿ ನಾವು ಬ್ಯಾಟಿಂಗ್‌ ಕ್ರಮಾಂಕದಲ್ಲಿ ಜಾಸ್ತಿ ಬದಲಾವಣೆ ಮಾಡಿಲ್ಲ,” ಎಂದು ತಿಳಿಸಿದರು.

ಹಿಂದಿನ ಲೇಖನನಿರ್ಮಾಪಕ ಉಮಾಪತಿ ಕೊಲೆಗೆ ಸಂಚು: ಆರೋಪಿಗಳ ಬಂಧನ
ಮುಂದಿನ ಲೇಖನವಕೀಲರು ಮೊಬೈಲ್ ಮೂಲಕ ಕೋರ್ಟ್ ಕಲಾಪಕ್ಕೆ ಹಾಜರಾಗಲು ಸುಪ್ರೀಂ ಸಮ್ಮತಿ