ಭಾರತದಲ್ಲಿ ಕುಟುಂಬವು ವಿಶೇಷವಾಗಿ ಮಹತ್ವವನ್ನು ಹೊಂದಿರುವ ಸಾಮಾಜಿಕ ಘಟಕವಾಗಿದೆ.
ಬದುಕಿನೊಂದಿಗಿನಎಲ್ಲ ಸಂಬಂಧಗಳೂ ವಿಕಾಸಗೊಳ್ಳಲು ಕೇಂದ್ರ ಅದು ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ನಮ್ಮ ವರ್ತನೆಗಳು ಹೇಗಿರಬೇಕು ಎನ್ನುವುದನ್ನು ಕಲಿಸುವ ವ್ಯವಸ್ಥಿತ ಪದ್ಧತಿ ಇಲ್ಲ. ಶೈಕ್ಷಣಿಕ ಸಂದರ್ಭದಲ್ಲಿ ಮಕ್ಕಳಿಗೆ ಹೇಳುವ ಕೆಲವು ಬುದ್ಧಿ ಮಾತುಗಳಿಗಾಗಿ ವರ್ತನೆಯನ್ನು ಕಲಿಸುವ ಶಿಕ್ಷಣವು ಕಲಿಸುತ್ತದೆ.ಆದರೆ ಬುದ್ಧಿ ಮಾತುಗಳನ್ನು ಸುಮ್ಮನೇ ಹೇಳಲಾಗುತ್ತದೆ ಹೊರತು ಅದರ ಹಿಂದೆ ವೈಜ್ಞಾನಿಕ ರೀತಿಯ ಅಭ್ಯಾಸ ಇರುವುದಿಲ್ಲ.ಅದರಿಂದ ಮಕ್ಕಳ ವರ್ತನೆಗಳ ಶಿಕ್ಷಣ ಪೂರ್ತಿಯಾಗಿ ಕುಟುಂಬದ್ದೇ ಜವಾಬ್ದಾರಿಯಾಗಿರುತ್ತದೆ.ಅದರಿಂದಲೇ ಕೌಟುಂಬಿಕ ಪರಿಸರದಲ್ಲಿರುವ ವ್ಯತ್ಯಾಸಗಳಿಗೆ ಅನುಗುಣವಾಗಿ ಮಕ್ಕಳ ವರ್ತನೆಗಳಲ್ಲಿಯೂ; ನಂತರ ವ್ಯಕ್ತಿಯು ಸಮಾಜ ಜೀವಿಯಾದಾಗ ಆತನ /ಆಕೆಯ ವರ್ತನೆಯಲ್ಲಿಯೂ ಅಜಗಜಾಂತರ ವ್ಯತ್ಯಾಸಗಳಿರುತ್ತವೆ. ಆದ್ದರಿಂದಲೇ ಕೌಟುಂಬಿಕ ಪರಿಸರವು ಚೆನ್ನಾಗಿರುವುದು ಮಕ್ಕಳ ಬೆಳವಣಿಗೆಯ ದೃಷ್ಟಿಯಿಂದ ತುಂಬಾ ಅಗತ್ಯವಾಗಿದೆ.
ಕುಟುಂಬದಲ್ಲಿ ಯಾರ್ಯಾರು ಇರುತ್ತಾರೆ ? ಈಗ ಹಳೆಯ ಕೊಡು ಕುಟುಂಬ ಬಹುತೇಕ ಕಣ್ಮರೆಯಾಗಿರುವುದರಿಂದ ಬಹುತೇಕವಾಗಿ ಇಂದಿನ ಕುಟುಂಬಗಳಲ್ಲಿ ತಂದೆ -ತಾಯಿ ಅಜ್ಜ – ಅಜ್ಜಿ ಸಹೋದರ ಅಥವಾ ಸಹೋದರಿ ಇರುತ್ತಾರೆ. ಇವರ ನಡುವೆ ರಕ್ತಸಂಬಂಧವೂ ಇರುತ್ತದೆ. ಭಾವನಾತ್ಮಕ ಸಂಬಂಧವೂ ಇರುತ್ತದೆ.ಪರಸ್ಪರ ಪ್ರೀತಿ- ವಿಶ್ವಾಸಗಳಂತೂ ಇದ್ದೇ ಇರುತ್ತವೆ.ಅದರೆ ಸಮಾನ ರೀತಿಯ ವರ್ತನೆಗಳನ್ನು ಕಲಿಸುವ ಪದ್ಧತಿ ನಮ್ಮಲ್ಲಿ ಇಲ್ಲದೆ ಇರುವುದರಿಂದ ಪ್ರೀತಿಯನ್ನು ವ್ಯಕ್ತಪಡಿಸುವ ಕ್ರಮವು ಕುಟುಂಬದಿಂದ ಕುಟುಂಬಕ್ಕೆ ವ್ಯತ್ಯಾಸ ಹೊಂದಿದ ರೂಪದಲ್ಲಿ ಇರುತ್ತದೆ. ಕೆಲವು ಕುಟುಂಬಗಳಲ್ಲಿ ಹಿರಿಯರು ಬೈಯುವ ಮೂಲಕವೇ ಮಕ್ಳಳ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
ಹದಿಹರೆಯದ ಹಂತದ ಮಕ್ಕಳಿಗೆ ಹಿರಿಯರ ವರ್ತನೆಗಳ ಹಿಂದೆ ಇರುವ ಮನೋಭಾವವನ್ನು ಅರ್ಥ ಮಾಡಿಕೊಳ್ಳುವಷ್ಟು ಮಾನಸಿಕ ಪಕ್ವತೆ ಬಂದಿರುವುದಿಲ್ಲ ಆದ್ದರಿಂದ ಅವರು ವರ್ತನೆಯಲ್ಲಿ ಕಂಡದ್ದನ್ನೇ ನಿಜವಾದ ಮನೋಭಾವ ಎಂದು ಅರ್ಥ ಮಾಡಿಕೊಳ್ಳುವ ಅಪಾಯ ಇರುತ್ತದೆ.ಆಗ ಅವರು ಹಿರಿಯರ ಬಗ್ಗೆ ತಪ್ಪಾದ ತೀರ್ಮಾನಗಳನ್ನು ತೆಗೆದುಕೊಳ್ಳಲು ಅವಕಾಶವಿರುತ್ತದೆ. ಇಂತಹ ತಪ್ಪು ತೀರ್ಮಾನಗಳು ಕುಟುಂಬದಿಂದ ಮಕ್ಕಳಿಗೆ ಆಗಬೇಕಾದ ಕಲಿಕೆ ಆಗದಂತೆಯೂ ಮಾಡಬಲ್ಲವು. ಮಕ್ಕಳ ವ್ಯಕ್ತಿತ್ವದ ವಿಕಾಸಕ್ಕೆ ತಡೆಯನ್ನೂ ಒಡ್ಡಬಲ್ಲವು. ಈ ಸತ್ಯವನ್ನು ಪ್ರತಿಯೊಂದು ಕುಟುಂಬದ ಪ್ರತಿಯೊಬ್ಬ ಸದಸ್ಯನೂ ಅರ್ಥ ಮಾಡಿಕೊಳ್ಳಬೇಕು. ಮುಖ್ಯವಾಗಿ ಇದು ಮಕ್ಕಳು ಅರ್ಥ ಮಾಡಿಕೊಳ್ಳಬೇಕಾದ. ಸಂಗತಿಯಾಗಿದೆ. ಯಾಕೆಂದರೆ ಭವಿಷ್ಯದ ನಿರ್ಮಾಪಕರು ಮಕ್ಕಳೇ ಆಗಿರುತ್ತಾರೆ ಹೊರತು ಹಿರಿಯರು ಆಗಿರುವುದಿಲ್ಲ.