ಬೆಂಗಳೂರು: ಪೊಲೀಸರು ವಶಪಡಿಸಿಕೊಂಡ ಮತ್ತಿತರ ಹಳೆಯ ವಾಹನಗಳ ಪಾರ್ಕಿಂಗ್ ಸ್ಥಳದಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜಕ್ಕರಾಯನಕೆರೆ ಮೈದಾನದಲ್ಲಿ ನಡೆದಿದೆ.
ಇಂದು ಬೆಳಗ್ಗೆ 11:30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಸುಮಾರು 130ಕ್ಕೂ ಅಧಿಕ ವಿವಿಧ ವಾಹನಗಳು ಅಗ್ನಿಗಾಹುತಿಯಾಗಿವೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಪೊಲೀಸರಿಂದ ಜಪ್ತಿಯಾದ ಹಾಗೂ ಮತ್ತಿತರ ಹಳೆಯ ದ್ವಿಚಕ್ರ ವಾಹನ, ಕಾರು ಸೇರಿದಂತೆ ಸುಮಾರು 500ಕ್ಕೂ ಅಧಿಕ ವಾಹನಗಳನ್ನ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಬೆಳಗ್ಗೆ ಸ್ಥಳದಲ್ಲಿ ಕಾಣಿಸಿಕೊಂಡ ಬೆಂಕಿ ನೋಡ ನೋಡುತ್ತಿದ್ದಂತೆ ವ್ಯಾಪಿಸಿದ ಪರಿಣಾಮ 130ಕ್ಕೂ ಅಧಿಕ ವಾಹನಗಳು ಸುಟ್ಟು ಕರಕಲಾಗಿವೆ. ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಹತೋಟಿಗೆ ತರುವುದರಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
“ಸುಮಾರು 70 ಪೊಲೀಸ್ ಠಾಣೆಗಳ ವಾಹನಗಳನ್ನು ಸ್ಥಳದಲ್ಲಿ ಪಾರ್ಕಿಂಗ್ ಮಾಡಲಾಗಿತ್ತು. ಅವಘಡದಲ್ಲಿ 130 ದ್ವಿಚಕ್ರ ವಾಹನಗಳು, 17 ನಾಲ್ಕು ಚಕ್ರದ ವಾಹನಗಳು ಅಗ್ನಿಗಾಹುತಿಯಾಗಿವೆ. ಮೈದಾನದಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿವೆ ಎಂದು ಸ್ಥಳೀಯರು ದೂರು ನೀಡುತ್ತಿದ್ದುದರಿಂದ ಆಗಾಗ್ಗೆ ಕ್ಲೀನ್ ಮಾಡಿಸುತ್ತಿದ್ದೆವು. ಸದ್ಯ ಬೆಂಕಿ ನಂದಿಸುವ ಕೆಲಸ ಆಗಿದೆ. ಘಟನೆಗೆ ಕಾರಣವೇನು ಎಂದು ಪರಿಶೀಲನೆ ನಡೆಸುತ್ತಿದ್ದೇವೆ” ಎಂದು ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ರಾಜಾಜಿನಗರದ ಪೊಲೀಸ್ ಠಾಣಾ ವ್ಯಾಪ್ತಿಯ ಡಾ.ರಾಜ್ಕುಮಾರ್ ರಸ್ತೆಯಲ್ಲಿರುವ ಒಕಿನೋವಾ ಎಲೆಕ್ಟ್ರಿಕಲ್ ಬೈಕ್ ಶೂ ರೂಮ್ನಲ್ಲಿ ಬೆಂಕಿ ಕಾಣಿಸಿಕೊಂಡು, ಸುಮಾರು 30ಕ್ಕೂ ಹೆಚ್ಚು ದ್ವಿಚಕ್ರವಾಹನಗಳು ಅಗ್ನಿಗೆ ಆಹುತಿಯಾಗಿರುವ ಘಟನೆ ನಡೆದಿತ್ತು. ಶೋ ರೂಮ್ನಲ್ಲಿ 74 ದ್ವಿಚಕ್ರವಾಹನಗಳಿದ್ದು, ಈ ಪೈಕಿ 9 ಇವಿ ಬೈಕ್ ಭಾಗಶಃ ಸುಟ್ಟಿದ್ದರೆ, ಹಲವು ವಾಹನಗಳು ಸಂಪೂರ್ಣ ಹಾನಿಯಾಗಿದ್ದವು.