ಮನೆ ರಾಜ್ಯ ಬನ್ನೇರುಘಟ್ಟ ಗಂಧದ ಚೋರರ ಮೇಲೆ ಫೈರಿಂಗ್: ಓರ್ವ ಸಾವು

ಬನ್ನೇರುಘಟ್ಟ ಗಂಧದ ಚೋರರ ಮೇಲೆ ಫೈರಿಂಗ್: ಓರ್ವ ಸಾವು

0

ಬನ್ನೇರುಘಟ್ಟ(ಬೆಂಗಳೂರು): ಶ್ರೀಂಗಧದ ಮರ ಕಳ್ಳತನ ಮಾಡುತ್ತಿದ್ದವರ ಮೇಲೆ ಫಾರೆಸ್ಟ್​ ಗಾರ್ಡ್​​ ಫೈರಿಂಗ್​ ಮಾಡಿದ್ದು ಒಬ್ಬ ಸಾವನ್ನಪ್ಪಿದ್ದು, ಮತ್ತೋರ್ವ ಪರಾರಿಯಾಗಿರುವ ಘಟನೆ ಮಂಗಳವಾರ ತಡರಾತ್ರಿ 1.15ರ ಸುಮಾರಿಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಕಲ್ಕೆರೆ ಅರಣ್ಯ ವಲಯದಲ್ಲಿ ನಡೆದಿದೆ.

ತಿಮ್ಮರಾಯಪ್ಪ(40) ಮೃತ ವ್ಯಕ್ತಿ ಎಂದು ತಿಳಿದುಬಂದಿದೆ.

ಈತ ಮಾಲೂರು ತಾಲ್ಲೂಕಿನ ಮಾಸ್ತಿ ಸಮೀಪದ ನಟ್ಟೂರಹಳ್ಳಿ ವಾಸಿ ಎಂದು ತಿಳಿದುಬಂದಿದೆ.

ಬನ್ನೇರುಘಟ್ಟ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ಗಸ್ತು ತಿರುಗುತ್ತಿದ್ದಾಗ ಶ್ರೀಗಂಧದ ಮರ ಕಡಿಯುತ್ತಿರುವ ಬಗ್ಗೆ ಶಬ್ದ ಕೇಳಿಸಿದ್ದು, ಸ್ಥಳಕ್ಕೆ ತೆರಳಿದ್ದಾರೆ. ಆಗ ಅರಣ್ಯ ಕಾವಲುಗಾರರ ಮೇಲೆ ಶ್ರೀಗಂಧ ಕಳ್ಳತನದ ಇಬ್ಬರು ಆರೋಪಿಗಳು ಮಚ್ಚಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಸಿಬ್ಬಂದಿ ಎಚ್ಚರಿಕೆ ನೀಡಿ ಒಮ್ಮೆ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಆಗಲೂ ಸಹ ಮಾತು ಕೇಳದ ಕಾರಣ ಒಬ್ಬನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಇದರಿಂದಾಗಿ ಆತ ಗಾಯಗೊಂಡು ಸ್ಥಳದಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದು, ಮತ್ತೋರ್ವ ಕಾಡಿನ ಕತ್ತಲಲ್ಲಿ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಬೆಂಗಳೂರು ಗ್ರಾಮಾಂತರ ಎಸ್ ​​ಪಿ ಮಲ್ಲಿಕಾರ್ಜುನ‌ ಬಾಲದಂಡಿ, ಬನ್ನೇರುಘಟ್ಟ ಸಂರಕ್ಷಿತ ಅರಣ್ಯದಲ್ಲಿ ವನ್ಯ ಜೀವಿಗಳೊಂದಿಗೆ ಯಥೇಚ್ಛವಾಗಿ ಶ್ರೀಗಂಧದ ಮರಗಳಿವೆ. ಸಲಕರಣೆ ಸಮೇತ ಇಬ್ಬರು ಕಾಡಿಗಿಳಿದು ಶ್ರೀಗಂಧದ ಮರ ಕಡಿಯುತ್ತಿದ್ದರು. ಆಗ ಕಾಡಿನ ಗಸ್ತಿನಲ್ಲಿದ್ದ ಇಬ್ಬರು ಕಾವಲುಗಾರರಿಗೆ ಮರ ಕಡಿಯುವ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದಾಗ ಇಬ್ಬರು ಆರೋಪಿಗಳು ಕಂಡು ಬಂದಿದ್ದಾರೆ. ಶರಣಾಗುವಂತೆ ಆರೋಪಿಗಳಿಗೆ ಎಚ್ಚರಿಸಿದರೂ ಅರಣ್ಯ ಸಿಬ್ಬಂದಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದಾರೆ. ಆಗ ಎಚ್ಚರಿಕೆ ನೀಡಿ ಗಾಳಿಯಲ್ಲಿ ಫೈರಿಂಗ್​ ಮಾಡಿದ್ದು, ಆಗಲೂ ಮಾತು ಕೇಳದಾಗ ಆರೋಪಿಗಳ ಮೇಲೆ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಇದರಿಂದ ಓರ್ವ ಸ್ಥಳದಲ್ಲೇ ಮೃತನಾಗಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ಹಿಂದಿನ ಲೇಖನಕೊಡಗು: ಯುವ ಮಹಿಳಾ ಅರಣ್ಯಾಧಿಕಾರಿ ನೇಣಿಗೆ ಶರಣು
ಮುಂದಿನ ಲೇಖನಮಂಗಳೂರು; ಬಸ್ ನಿಂದ‌ ಬಿದ್ದು ಕಂಡಕ್ಟರ್ ಸಾವು