ಬೆಂಗಳೂರು : ಬೆಂಗಳೂರಿನ ಉದ್ಯಮಿಯ ಮೇಲೆ ಏರ್ಗನ್ನಿಂದ ಫೈರಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವನಗುಡಿ ಪೊಲೀಸರು ಆರೋಪಿಯನ್ನು ಬಂಧಿಸಲಾಗಿದೆ. ಅಫ್ಜಲ್ ಬಂಧಿತ ಆರೋಪಿ. ಪೊಲೀಸರು ಈಗ ಅಫ್ಜಲ್ನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಡಿಸೆಂಬರ್10ರ ರಾತ್ರಿ 8:30ರ ಸುಮಾರಿಗೆ ಕೃಷ್ಣರಾವ್ ಪಾರ್ಕ್ನಲ್ಲಿ ವಾಕಿಂಗ್ ಮಾಡುತ್ತಿದ್ದ ರಾಜ್ಗೋಪಾಲ್ ಅವರ ಮೇಲೆ ಫೈರಿಂಗ್ ನಡೆದಿತ್ತು. ತನಿಖೆಗೆ ಇಳಿದ ಪೊಲೀಸರಿಗೆ ನರ್ತಕಿ ಹಾಗೂ ಕಾರ್ಗಿಲ್ ಬಾರ್ ಮಾಲೀಕ ರಾಜಗೋಪಾಲ್ ಅವರಿಗೆ ಯಾವುದೇ ಬೆದರಿಕೆ ಇಲ್ಲದ ವಿಚಾರ ಗೊತ್ತಾಗಿದೆ.
ಬೆದರಿಕೆ ಇಲ್ಲದೇ ಇದ್ದರೂ ಏರ್ಗನ್ನಿಂದ ಶೂಟ್ ಹೇಗಾಯ್ತು? ಯಾರಾದ್ರೂ ಹತ್ಯೆಗೆ ಸಂಚು ರೂಪಿಸಿದ್ರಾ? ಟಾರ್ಗೆಟ್ ಮಾಡಿ ಹೊಡೆಯಲು ಯಾರಾದರೂ ಮುಂದಾದ್ರಾ ಎಂಬ ಪ್ರಶ್ನೆ ಎದ್ದಿತ್ತು. ಈ ಎಲ್ಲಾ ಆಯಮಗಳ ತನಿಖೆಗೆ ಇಳಿದರೂ ಯಾವುದೇ ಖಚಿತತೆ ಇರಲಿಲ್ಲ. ಹೀಗಾಗಿ ಬುಲೆಟ್ ಎಲ್ಲಿಂದ ಹಾರಿ ಬಂದಿದೆ ಎಂಬುದರ ಜಾಡು ಹಿಡಿದು ಪೊಲೀಸರು ತನಿಖೆ ಆರಂಭಿಸಿದರು. ಈ ವೇಳೆ ಹೊರಗಿನಿಂದ ಗುಂಡು ಬಂದಿರಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಗುಂಡು ಬಂದ ಕಡೆಯ ಫ್ಲ್ಯಾಟ್ಗಳ ಪರಿಶೀಲನೆಗೆ ಮುಂದಾದರು. ಪರಿಶೀಲನೆ ವೇಳೆ ಅಫ್ಜಲ್ ಇರುವ ಫ್ಲ್ಯಾಟ್ನಿಂದ ಫೈರ್ ಆಗಿರುವುದು ಪತ್ತೆಯಾಗಿದೆ.
ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಾನು ಕಾನೂನು ಪದವಿ ಓದುತ್ತಿದ್ದೇನೆ. ಮನೆಯಲ್ಲಿ ಏರ್ಗನ್ನಿಂದ ಶೂಟಿಂಗ್ ಅಭ್ಯಾಸ ಮಾಡುತ್ತಿದ್ದೇನೆ. ಅಭ್ಯಾಸ ಮಾಡುತ್ತಿದ್ದಾಗ ಗುರಿ ತಪ್ಪಿ ಕಿಟಕಿಯಿಂದ ಹೊರ ಹೋಗಿದೆ ಎಂದು ಅಫ್ಜಲ್ ಹೇಳಿದ್ದಾನೆ. ರಾಜ್ಗೋಪಾಲ್ ಅವರು ಸ್ನೇಹಿತರನ್ನು ಭೇಟಿಯಾಗಲು ಪಾರ್ಕ್ಗೆ ಬಂದು ವಾಕಿಂಗ್ ಮಾಡುತ್ತಿದ್ದರು. ಗುಂಡೇಟಿನಿಂದ ಕತ್ತಿನ ಭಾಗಕ್ಕೆ ಗಾಯವಾಗಿದ್ದು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.















