ಮನೆ ಅಪರಾಧ ಗಂಡು ಮಗು ಜನಿಸಿದ ಖುಷಿಗೆ, ಯುವಕನ ಬಲಿ: ಆರೋಪಿ ಬಂಧನ

ಗಂಡು ಮಗು ಜನಿಸಿದ ಖುಷಿಗೆ, ಯುವಕನ ಬಲಿ: ಆರೋಪಿ ಬಂಧನ

0

ರೇವಾ(Reva): ಗಂಡು ಮಗು ಹುಟ್ಟಿದ ಖುಷಿಗೆ ವ್ಯಕ್ತಿಯೊಬ್ಬ 19 ವರ್ಷದ ಯುವಕನನ್ನೇ ಬಲಿ ನೀಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ರಾಮ್‌ಲಾಲ್‌(32) ಎಂಬಾತನೇ ಕೃತ್ಯವೆಸಗಿರುವ ಆರೋಪಿ. ಕಿಯೋತಿ ನಿವಾಸಿ ದಿವ್ಯಾಂಶು ಕೊಲ್(19) ಮೃತ ದುರ್ದೈವಿ.

ರಾಮ್‌ಲಾಲ್‌ಗೆ ಈಗಾಗಲೇ ಮೂವರು ಹೆಣ್ಣು ಮಕ್ಕಳಿದ್ದು, ನಾಲ್ಕನೇ ಮಗು ಗಂಡಾಗಿ ಜನಿಸಿದೆ. ಭೂತೋಚ್ಚಾಟಕರೊಬ್ಬರ ಹೇಳಿಕೆ ಮೇರೆಗೆ ಈತ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದರೆ ಯುವಕನನ್ನು ಬಲಿ ಕೊಡುತ್ತೇನೆ ಎಂದು ಗ್ರಾಮ ದೇವತೆಗೆ ಪ್ರಾರ್ಥನೆ ಸಲ್ಲಿಸಿದ್ದ. ಕಾಕಾತಾಳೀಯ ಎಂಬಂತೆ ಗಂಡು ಮಗುವಿಗೆ ಆತನ ಪತ್ನಿ ಜನ್ಮ ನೀಡಿದ್ದಾರೆ.

ಆರೋಪಿ ತನ್ನ ಪ್ರಾರ್ಥನೆಯಂತೆ ದೇವಿಗೆ ಬಲಿ ನೀಡಲು ಯುವಕನನ್ನು ಹುಡುಕುತ್ತಿದ್ದ. ಜುಲೈ 6 ರಂದು, ರಾಮ್‌ಲಾಲ್‌,  ತನ್ನ ತಮ್ಮ ಮೇಕೆಗಳನ್ನು ಮೇಯಿಸುತ್ತಿದ್ದ ದಿವ್ಯಾಂಶು ಅವರನ್ನು ನೋಡಿದ್ದಾನೆ. ನಂತರ ಸಹಾಯ ಮಾಡುವಂತೆ ದಿವ್ಯಾಂಶುವನ್ನು ಕರೆದ ರಾಮ್‌ಲಾಲ್‌ ಆತನನ್ನು ಉಪಾಯವಾಗಿ ಗ್ರಾಮದ ದೇವಿ ದೇವಸ್ಥಾನಕ್ಕೆ ಬರುವಂತೆ ಕೇಳಿಕೊಂಡಿದ್ದಾನೆ. ರಾಮಲಾಲ್ ಮಾತು ನಂಬಿ ಆತನಿಗೆ ಸಹಾಯ ಮಾಡಲು ದೇಗುಲಕ್ಕೆ ತೆರಳಿದ ದಿವ್ಯಾಂಶುವಿನ ತಲೆ ಕಡಿದು ಆತನ ಶವವನ್ನು ದೇವಸ್ಥಾನದಲ್ಲಿ ಬಿಟ್ಟು ಹೋಗಿದ್ದಾನೆ ಎಂದು ರೇವಾ ಸಿರ್ಮೌರ್‌ನ ಉಪವಿಭಾಗಾಧಿಕಾರಿ ನವೀನ್ ತಿವಾರಿ ಹೇಳಿದ್ದಾರೆ.

ಇತ್ತ ದಿವ್ಯಾಂಶು ನಾಪತ್ತೆಯಾದ ಬಗ್ಗೆ ಆತನ ಮನೆಯವರು ದೂರು ನೀಡಿದ್ದು, ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಜುಲೈ 6 ರಂದು ದೇಗುಲದಲ್ಲಿ ದಿವ್ಯಾಂಶು ಶವ ಪತ್ತೆ ಮಾಡಿದರು. ನಂತರ ತನಿಖೆ ಮಾಡಿದಾಗ ದಿವ್ಯಾಂಶು ಅವರು ಕೊನೆಯದಾಗಿ ರಾಮಲಾಲ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ನಂತರ ಪೊಲೀಸರು ರಾಮ್‌ಲಾಲ್‌ ಅವರನ್ನು ವಿಚಾರಣೆ ನಡೆಸಿದಾಗ, ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

ರಾಮಲಾಲ್ ಮಾಟಮಂತ್ರವನ್ನು ಕೂಡ ಮಾಡುತ್ತಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಭೂತೋಚ್ಚಾಟಕನ ಪಾತ್ರವೇನು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಹಿಂದಿನ ಲೇಖನಪ್ರತ್ಯೇಕ ಪ್ರಕರಣ: 1.50 ಲಕ್ಷ ನಗದು, ಗೂಡ್ಸ್ ವಾಹನ ಲ್ಯಾಪ್ ಟಾಪ್ ಕಳ್ಳತನ
ಮುಂದಿನ ಲೇಖನಗಾಳಿಗೆ ತತ್ತರಿಸಿದ ಕೊಡಗು ಜನತೆ: ಮರಗಳು, ವಿದ್ಯುತ್ ಕಂಬಗಳು ಧರಾಶಾಹಿ