ಚಾಮರಾಜನಗರ : ಮಲೆ ಮಹದೇಶ್ವರ ವನ್ಯಧಾಮದಲ್ಲಿ ನಡೆದ ಹುಲಿ ಹತ್ಯೆ ಕೇಸ್ಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಪ್ರೀತಿಯ ಹಸುವನ್ನು ಹುಲಿ ಬೇಟೆಯಾಡಿದ್ದಕ್ಕೆ ಹುಲಿಯನ್ನು ಕೊಂದಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಹಸುವಿನ ಮಾಲೀಕ ತಲೆಮರೆಸಿಕೊಂಡಿದ್ದಾನೆ. ಆತನನ್ನು ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಬಲೆ ಬೀಸಿದ್ದಾರೆ. ಆತನ ಪತ್ತೆಗೆ ನಾಲ್ಕೂ ತಂಡ ರಚನೆ ಮಾಡಲಾಗಿದೆ. ತಮಿಳುನಾಡು ಸೇರಿದಂತೆ ನಾಲ್ಕು ಕಡೆ ಹುಡುಕಾಟ ನಡೆಯುತ್ತಿದೆ.
ಬಂಧಿತರನ್ನು ಪಚ್ಚೆದೊಡ್ಡಿ ಹಾಗೂ ಕಾಂಚಳ್ಳಿ ಗ್ರಾಮಕ್ಕೆ ಸೇರಿರುವ ಪಚ್ಚಮಲ್ಲು, ಗೋವಿಂದರಾಜು, ಗಣೇಶ ಹಾಗೂ ಶಂಪು ಎಂದು ಗುರುತಿಸಲಾಗಿದೆ. ಹಸುವಿನ ಮಾಲೀಕ ಚಂದು ಅರಣ್ಯ ಸಿಬ್ಬಂದಿಗೆ ಚಳ್ಳೆ ಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದಾನೆ.
ಈ ಪ್ರಕರಣದಲ್ಲಿ ಕುರಿಗಾಹಿಗಳ ಮೇಲೆಯೂ ಕೂಡ ಶಂಕೆ ವ್ಯಕ್ತವಾಗಿತ್ತು. ಆ ಹಿನ್ನಲೆ ಮಂಜುನಾಥ್ ಹಾಗೂ ಕಂಬಣ್ಣ ಎಂಬುವವರನ್ನು ಕೂಡ ಕರೆಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ಸಾವಿನ ಪ್ರಕರಣದಲ್ಲಿ ಅವರ ಪಾತ್ರವಿಲ್ಲ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಆ ಹಿನ್ನಲೆ ಅವರಿಬ್ಬರನ್ನೂ ಕೂಡ ಪ್ರಕರಣದಿಂದ ಕೈ ಬಿಡುವ ಬಗ್ಗೆ ಅರಣ್ಯಾಧಿಕಾರಿಗಳು ಚಿಂತಿಸಿದ್ದಾರೆ ಎಂದು ತಿಳಿದುಬಂದಿದೆ.















