ಹೈದರಾಬಾದ್: ಸರ್ಕಾರದ ಕ್ರಮಗಳಿಂದ ದೇಶದಲ್ಲಿ ಅಭಿವೃದ್ಧಿಯಾಗುತ್ತಿರುವ ಅಂತರರಾಷ್ಟ್ರೀಯ ಮಟ್ಟ ಸ್ಪರ್ಧಾತ್ಮಕ ಮೂಲಸೌಕರ್ಯಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಯುವಜನರು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಮತ್ತು ತಂತ್ರಜ್ಞಾನಗಳಲ್ಲಿ ಉತ್ಕೃಷ್ಟರಾಗಬೇಕು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಹೈದರಾಬಾದ್ ನಲ್ಲಿ ಆಯೋಜಿಸಿದ್ದ ವಿಜ್ಞಾನ ವೈಭವ ಎಂಬ ಎರಡು ದಿನಗಳ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ರಾಜನಾಥ್ ಸಿಂಗ್, ಯುದ್ಧವು ಹಾರ್ಡ್ವೇರ್ನಿಂದ ಸಾಫ್ಟ್ವೇರ್ಗೆ ಬದಲಾಗುತ್ತಿದೆ. AI,ಕ್ವಾಂಟಮ್ ಕಂಪ್ಯೂಟಿಂಗ್, ಮೆಷಿನ್ ಲರ್ನಿಂಗ್ ಮತ್ತು ಕ್ಲೀನ್-ಟೆಕ್ ಪ್ರಗತಿಯೊಂದಿಗೆ, ಪ್ರತಿಕೂಲ ಸಂದರ್ಭಗಳಲ್ಲಿ ಸದೃಢವಾಗಿ ಉಳಿಯಲು ಭಾರತ ಪರಿವರ್ತಕ ತಂತ್ರಜ್ಞಾನಗಳಲ್ಲಿ ಮುಂಚೂಣಿಯಲ್ಲಿರಬೇಕು. ನಮ್ಮ ಯುವಕರು ವೈಜ್ಞಾನಿಕ ದೃಷ್ಟಿಕೋನ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿಜ್ಞಾನವು ಮಾನವೀಯತೆಗೆ ಒಂದು ಸುಂದರವಾದ ಕೊಡುಗೆಯಾಗಿದೆ; ನಾವು ಅದನ್ನು ವಿರೂಪಗೊಳಿಸದೆ ಸಮಾಜದ ಒಳಿತಿಗಾಗಿ ಬಳಸಬೇಕು ಎಂಬ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಮಾತುಗಳನ್ನು ನೆನಪಿಸಿಕೊಂಡ ರಾಜನಾಥ್ ಸಿಂಗ್, ದೇಶದ ಭವಿಷ್ಯಕ್ಕಾಗಿ ವಿಜ್ಞಾನ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದರು.
ರಾಷ್ಟ್ರೀಯ ಭದ್ರತೆಗಾಗಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಕೇಂದ್ರ ಸರ್ಕಾರದ ಬದ್ಧತೆಯನ್ನು ಸಿಂಗ್ ಪುನರುಚ್ಚರಿಸಿದರು. ಭಾರತದ ಯುವಕರ ಸಾಮರ್ಥ್ಯವನ್ನು ಮತ್ತು 2047 ರ ವೇಳೆಗೆ ವಿಕಸಿತ ಭಾರತ ಪರಿಕಲ್ಪನೆ ಸಾಕಾರಗೊಳಿಸಲು ಯುವ ಜನತೆಯ ಸಾಮರ್ಥ್ಯವನ್ನು ಬಳಸಿಕೊಳ್ಳುವ ಸರ್ಕಾರದ ಪ್ರಯತ್ನಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ, ಯುವಜನತೆ ದೊಡ್ಡ ಕನಸುಗಳನ್ನು ಕಾಣಲು ಮತ್ತು ಹೊಸತನವನ್ನು ಅಳವಡಿಸಿಕೊಳ್ಳಲು ಒತ್ತಾಯಿಸಿದರು. ದೇಶದ ರಕ್ಷಣೆಗಾಗಿ ಉನ್ನತ ಎಂಜಿನಿಯರ್ಗಳನ್ನು ಪೂರೈಸಲು ಬದ್ಧರಾಗಿದ್ದು, ಹೈದರಾಬಾದ್ ಮತ್ತು ಬೆಂಗಳೂರು ಪ್ರಮುಖ ರಕ್ಷಣಾ ಕೇಂದ್ರಗಳಾಗಿದ್ದು, ಹೂಡಿಕೆಯನ್ನು ಆಕರ್ಷಿಸಲು ಮತ್ತು ಸ್ಕೈರೂಟ್ ಏರೋಸ್ಪೇಸ್ನಂತಹ ಸ್ಟಾರ್ಟ್ಅಪ್ಗಳನ್ನು ಹೆಚ್ಚಿಸಲು ಹೈದರಾಬಾದ್-ಬೆಂಗಳೂರು ರಕ್ಷಣಾ ಇಂಡಸ್ಟ್ರಿಯಲ್ ಕಾರಿಡಾರ್ ಪ್ರಸ್ತಾಪಿಸಿರುವುದಾಗಿ ತಿಳಿಸಿದರು.
DRDO ಗೆ ರಾಜನಾಥ್ ಸಿಂಗ್ ಭೇಟಿ: ಬಳಿಕ ರಾಜನಾಥ್ ಸಿಂಗ್ ಅವರು DRDO ನ ಡಾ ಕಲಾಂ ಅವರ ಕ್ಷಿಪಣಿ ಸಂಕೀರ್ಣಕ್ಕೆ ಭೇಟಿ ನೀಡಿ, ಕ್ಷಿಪಣಿ ಯೋಜನೆಗಳನ್ನು ಪರಿಶೀಲಿಸಿದರು. ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿ, ಅವರ ಕೊಡುಗೆಗಳನ್ನು ಶ್ಲಾಘಿಸಿದರು ಮತ್ತು 2027 ರ ವೇಳೆಗೆ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ವಿಶ್ವಾಸ ವ್ಯಕ್ತಪಡಿಸಿದರು.