ಗುಂಡ್ಲುಪೇಟೆ (Gundlupete): ಎಲ್ಕೆಜಿ ಮಕ್ಕಳನ್ನು ದರ್ಗಾ, ಮಸೀದಿಗೆ ಕರೆದುಕೊಂಡು ಹೋಗಿದ್ದಕ್ಕೆ ಹಿಂದೂ ಜಾಗರಣ ವೇದಿಕೆ ಆಕ್ಷೇಪ ವ್ಯಕ್ತಪಡಿಸಿದೆ.
ಪಟ್ಟಣದ ಯಂಗ್ ಸ್ಕಾಲರ್ ಶಾಲೆಯು ಕ್ಷೇತ್ರ ಭೇಟಿಯ ಅಂಗವಾಗಿ ಎಲ್ಕೆಜಿ ಮಕ್ಕಳನ್ನು ದರ್ಗಾ, ಮಸೀದಿಗೆ ಕರೆದುಕೊಂಡು ಹೋಗಿದ್ದಾರೆ. ಇದು ಆಕ್ಷೇಪಕ್ಕೆ ಗುರಿಯಾಗಿದೆ.
ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್ ಮಾಲೀಕತ್ವದ ಶಾಲೆಯ ಶಿಕ್ಷಕರು ಎಲ್ಕೆಜಿ ಮಕ್ಕಳನ್ನು ಕಳೆದ ಶುಕ್ರವಾರ (ಜುಲೈ 8) ತೆರಕಣಾಂಬಿ ಬಳಿ ಇರುವ ದರ್ಗಾ ಹಾಗೂ ಮಸೀದಿಗೆ ಕರೆದುಕೊಂಡು ಹೋಗಿದ್ದರು. ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗುತ್ತಿದ್ದಂತೆಯೇ ಹಿಂದೂ ಜಾಗರಣ ವೇದಿಕೆಯವರು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ ಅವರಿಗೆ ದೂರು ನೀಡಿದ್ದಾರೆ.
ಶಾಲೆಗೆ ಶಿಕ್ಷಣಾಧಿಕಾರಿ ಶಿವಮೂರ್ತಿ ಭೇಟಿ ನೀಡಿ ಶಾಲೆಯ ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದಾರೆ. ಕ್ಷೇತ್ರ ಭೇಟಿಗೂ ಮುನ್ನ ಇಲಾಖೆಯ ಅನುಮತಿ ಪಡೆಯಬೇಕು ಎಂದು ಸೂಚಿಸಿದ್ದಾರೆ.