ಚಿಕ್ಕಮಗಳೂರು (Chikmagalur)-ಜೆಡಿಎಸ್ (JDS) ಅನ್ನು ಅಧಿಕಾರಕ್ಕೆ ತಂದು ಕೊನೆ ಉಸಿರು ಬಿಡಬೇಕೆಂಬುದೇ ನನ್ನ ರಾಜಕೀಯ ಹಠ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Devegowda) ಅವರು ಹೇಳಿದ್ದಾರೆ.
ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಮುಖಂಡರು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜೀವನದ ಕೊನೆಘಟ್ಟದಲ್ಲಿ ದೇವೇಗೌಡರು ಒಂದು ಮತ ಕೇಳಿದರೂ ಕೊಡೋಣ ಎಂಬ ಉಪಕಾರದ ಭಾವನೆ ಜನರಲ್ಲಿ ಬಂದಲ್ಲಿ 2023ರ ಚುನಾವಣೆಯಲ್ಲಿ ನಮ್ಮ ಸರ್ಕಾರ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಿಂಗಳಿಗೆ 2 ವಿಧಾನಸಭಾ ಕ್ಷೇತ್ರಕ್ಕೆ ಭೇಟಿಯಾಗಿ ಪಕ್ಷ ಕಟ್ಟುತ್ತೇನೆ. ಒಂದು ಪ್ರಾದೇಶಿಕ ಪಕ್ಷ ಉಳಿಸಿ. ಇದು ನನ್ನ ಕೊನೆ ಹೋರಾಟ ಎಂದು ಮನೆ ಮನೆಗೆ ಹೋಗಿ ಕೇಳಿಕೊಳ್ಳುತ್ತೇನೆ. 90ರ ಜೀವನದ ಕೊನೆ ಹಂತದಲ್ಲಿ ರಾಜ್ಯದಲ್ಲಿಪ್ರಾದೇಶಿಕ ಪಕ್ಷ ಉಳಿಸಿ ಅಧಿಕಾರಕ್ಕೆ ತಂದು ಕೊನೆ ಉಸಿರು ಬಿಡಬೇಕು ಎಂಬ ರಾಜಕೀಯ ಹಠ ನನ್ನಲ್ಲಿದೆ ಎಂದು ಹೇಳಿದರು.
ಮಹದಾಯಿ, ಕೃಷ್ಣ, ಕಾವೇರಿ ಕೊಳ್ಳದ ನೀರಿನ ಹಕ್ಕು ಉಳಿಸಲು ಸರ್ವ ಪ್ರಯತ್ನ ಮಾಡುತ್ತೇನೆ. 19 ಸಣ್ಣ ನದಿಗಳು, 3 ದೊಡ್ಡ ನದಿಗಳು ರಾಜ್ಯದಲ್ಲಿ ಹರಿಯುತ್ತವೆ. ಅವುಗಳ ನೀರಿನ ಬಳಕೆಯಿಂದ ನಾವೆಷ್ಟು ವಂಚಿತರಾಗಿದ್ದೇವೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇನೆ. 13ನೇ ತಾರೀಖು ಬೆಂಗಳೂರಿನಲ್ಲಿ ನಡೆಯುವ ಜಲಧಾರೆ ಸಮಾರೋಪದ ಬಳಿಕ ನನ್ನ ಹೋರಾಟ ಆರಂಭಿಸುತ್ತೇನೆ ಎಂದರು.