ಬೆಂಗಳೂರು : ರಾಮಮೂರ್ತಿನಗರ ನಿವಾಸಿಯಾಗಿರೋ ಸಂಜನಾ ಅಲಿಯಾಸ್ ವನಜಾ ರಾಮಮೂರ್ತಿನಗರ ಪೊಲೀಸ್ ಇನ್ಸ್ಪೆಕ್ಟರ್ಗೆ ಲವ್ ಮಾಡುವಂತೆ ಲವ್ ಲೇಟರ್ ಬರೆದು ಪ್ರೀತಿಸುವಂತೆ ಇನ್ನಿಲ್ಲದಂತೆ ಕಾಡಿದ್ಲು. ಇನ್ಸ್ಪೆಕ್ಟರ್ ಇವಳ ಪ್ರೀತಿ ಒಪ್ಪಿಕೊಳ್ಳದೇ ಇದ್ದಾಗ, ಆತ್ಮಹತ್ಯೆ ಬೆದರಿಕೆ ಹಾಕಿದ್ಲು. ಇದರಿಂದ ಕರ್ತವ್ಯಕ್ಕೆ ಅಡ್ಡಿ, ಆತ್ಮಹತ್ಯೆ ಬೆದರಿಕೆ ಆರೋಪದ ಅಡಿ ಕೇಸ್ ದಾಖಲಿಸಿ ಸಂಜನಾಳನ್ನು ಜೈಲಿಗೆ ಕಳುಹಿಸಲಾಗಿದೆ.
ಈ ಬೆನ್ನಲ್ಲೇ ಆರೋಪಿತೆ ಸಂಜನಾ ಹಿನ್ನೆಲೆಯನ್ನು ಪರಿಶೀಲಿಸಿದಾಗ ಪೊಲೀಸರನ್ನೇ ಚಕಿತಗೊಳಿಸುವ ಮಾಹಿತಿಗಳು ಬೆಳಕಿಗೆ ಬಂದಿದೆ. ಚೆಕ್ ಮಾಡಿದ ಪೊಲೀಸರಿಗೆ ಹಲವು ವಿಚಾರಗಳು ಗೊತ್ತಾಗಿವೆ. ಇದೇ ಸಂಜನಾ 2 ವರ್ಷಗಳ ಹಿಂದೆ ಕಂಟ್ರ್ಯಾಕ್ಟರ್ ಸತೀಶ್ ರೆಡ್ಡಿ ಅನ್ನೋರನ್ನ ಪರಿಚಯ ಮಾಡ್ಕೊಂಡು, ಅವರನ್ನ ಮನೆಗೆ ಊಟಕ್ಕೆ ಕರೆದ ಸಂಜನಾ ಅವರ ಜೊತೆ ದೈಹಿಕ ಸಂಪರ್ಕ ಬೆಳಸಿ ಅದರ ಫೋಟೋಗಳನ್ನು ಇಟ್ಕೊಂಡು ಬ್ಲ್ಯಾಕ್ ಮಾಡಿದ್ರಂತೆ. ಸತೀಶ್ ರೆಡ್ಡಿ ಬಳಿಯಿದ್ದ ಚಿನ್ನದ ಉಂಗುರ, ಸರ, ಮೂರು ಲಕ್ಷ ನಗದು ಕಸಿದುಕೊಂಡಿದ್ದಾಳೆ ಅಂತಾ ಇದೇ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅದರ ಜೊತೆಗೆ ಸತೀಶ್ ರೆಡ್ಡಿಗೆ ಸೇರಿದ 2 ಅಂತಸ್ತಿನ ಕಟ್ಟಡವನ್ನು ನನ್ನ ಹೆಸರಿಗೆ ಬರೆದುಕೊಡು ಅಂತಾ ಕಿರುಕುಳ ನೀಡಿದ ಆರೋಪದಲ್ಲಿ ಕೆ.ಆರ್ ಪುರ ಪೊಲೀಸ್ ಠಾಣೆಯಲ್ಲೂ ಸಂಜನಾ ವಿರುದ್ಧ ಎಫ್ಐಆರ್ ದಾಖಲಾಗಿದೆ. 2018 ರಲ್ಲಿ ಹೆಡ್ ಕಾನ್ಸ್ಟೇಬಲ್ ಜಗದೀಶ್ ಅನ್ನೋರು ನನ್ನ ಮದುವೆ ಮಾಡ್ಕೋತಿನಿ ಅಂತಾ ನಂಬಿಸಿ ದೈಹಿಕ ಸಂಪರ್ಕ ಬೆಳಸಿ ಮೋಸ ಮಾಡಿದ್ದಾರೆ ಅಂತಾ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ವಿರುದ್ಧ ದೂರು ನೀಡಿದ್ದಾಳೆ.
ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಸುಳ್ಳು ಆರೋಪ ಅಂತಾ ಕೇಸ್ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ತನಿಖೆ ವೇಳೆ ಇದೇ ರೀತಿ ಹಲವರಿಗೆ ಹನಿಟ್ರ್ಯಾಪ್ ಮಾಡಿರೋದು, ಅಧಿಕಾರಿಗಳ ಪರಿಚಯ ಮಾಡ್ಕೊಂಡು ಅವರ ಹೆಸರಿನಲ್ಲಿ ಹಲವರಿಗೆ ಮೋಸ ಮಾಡಿರೋದು ಕೂಡ ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.














