ಮನೆ ರಾಜ್ಯ ವಿಧಾನಸೌಧ ಸಿಎಂಗೆ, ಸ್ಟೇಡಿಯಂ ಡಿಕೆಶಿಗೆ ಹಂಚಿಕೆಯಾಗಿದೆಯೇ? ಆರ್. ಅಶೋಕ್ ತೀವ್ರ ವ್ಯಂಗ್ಯ

ವಿಧಾನಸೌಧ ಸಿಎಂಗೆ, ಸ್ಟೇಡಿಯಂ ಡಿಕೆಶಿಗೆ ಹಂಚಿಕೆಯಾಗಿದೆಯೇ? ಆರ್. ಅಶೋಕ್ ತೀವ್ರ ವ್ಯಂಗ್ಯ

0

ಬೆಂಗಳೂರು: ವಿಧಾನಸೌಧವನ್ನು ಸಿಎಂ ಸಿದ್ದರಾಮಯ್ಯ, ಸ್ಟೇಡಿಯಂ ಅನ್ನು ಡಿಕೆ ಶಿವಕುಮಾರ್​​ ಹಂಚಿಕೊಂಡಂತೆ ಕಾಣುತ್ತಿದೆ. ಏಕೆಂದರೆ ಸ್ಟೇಡಿಯಂ ಘಟನೆ ಡಿಕೆ ಶಿವಕುಮಾರ್​ ತಲೆಗೆ ಕಟ್ಟಲು ಸಿಎಂ ಪ್ಲ್ಯಾನ್ ಮಾಡುತ್ತಿದ್ದರೆ, ಇತ್ತ ವಿಧಾನಸೌಧ ವಿಚಾರವನ್ನು ಸಿಎಂ ತಲೆಗೆ ಕಟ್ಟಲು ಡಿಸಿಎಂ ಪ್ಲ್ಯಾನ್​ ಇದೆ ಎಂದು ವಿಪಕ್ಷ ನಾಯಕ ಆರ್​. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತದ ಘಟನೆಗೆ ನಾನು ಸಂಬಂಧಪಟ್ಟಿಲ್ಲ ಎಂಬ ಸಿಎಂ ಹೇಳಿಕೆ ಅಸಂಗತ. ಡಿಕೆ ಶಿವಕುಮಾರ್ ಸರ್ಕಾರದ ಭಾಗವಲ್ಲವೇ?” ಎಂದು ತಿರುಗೇಟು ನೀಡಿದ್ದಾರೆ.

ಅವರು ತಿಳಿಸಿರುವ ಪ್ರಕಾರ, “ವಿಧಾನಸೌಧವನ್ನ ಸಿಎಂ ತೆಗೆದುಕೊಂಡಿದ್ದಾರೆ, ಸ್ಟೇಡಿಯಂನ್ನು ಡಿಕೆಶಿ, ಇಬ್ಬರೂ ತಮ್ಮ ತಮ್ಮ ಪ್ರಭಾವವನ್ನು ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ಅಧಿಕಾರದ ಜಗಳ, ಕುರ್ಚಿ ಕಿತ್ತಾಟ ಬೀದಿಗೆ ಬಂದಿದೆ” ಎಂದು ಕಿಡಿ ಕಾರಿದ್ದಾರೆ. “ಈ ಘಟನೆಗೆ ಡಿಕೆಶಿಗೆ ಸಂಬಂಧವಿಲ್ಲ ಅನ್ನೋದು ಸಿಎಂ ಹೇಳಿಕೆ ಎಡವಟ್ಟಾಗಿದೆ. ಸ್ಟೇಡಿಯಂಗೆ ಅನುಮತಿ ನೀಡಿದ್ದು ಪೊಲೀಸರು ಮತ್ತು ಡಿಪಿಎಆರ್ ಅಧಿಕಾರಿಗಳು. ಆದರೆ, ಪೊಲೀಸ್ ಇಲಾಖೆ ಹಾಗೂ ಇಂಟೆಲಿಜೆನ್ಸ್ ಎರಡೂ ಸಿಎಂ ಅಧೀನದಲ್ಲಿದೆ” ಎಂದು ಹೇಳಿದರು.

ಅಹಿತಕರ ಸತ್ಯವನ್ನು ಬಹಿರಂಗಪಡಿಸಲು ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂಬ ಬೇಡಿಕೆಯನ್ನು ಅಶೋಕ್ ಮುಂದಿಟ್ಟಿದ್ದಾರೆ. “ಈ ಘಟನೆಯಲ್ಲಿ 11 ಅಮಾಯಕರು ಸಾವನ್ನಪ್ಪಿದ್ದಾರೆ, ಆದ್ದರಿಂದ ಆರೋಪಿಗಳನ್ನು ಮೀರಿಸಿ ನಿಜ ಸತ್ಯ ಬೆಳಕಿಗೆ ಬರಬೇಕಾಗಿದೆ” ಎಂದರು.

ಮಂಗಳೂರಿನಲ್ಲಿ ಹಿಂದೂಪರ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್‌ಐಎಗೆ ವಹಿಸಿದ್ದನ್ನು ಅಶೋಕ್ ಸ್ವಾಗತಿಸಿ, “ಈ ಪ್ರಕರಣದ ಹಿಂದೆ ಹೊರ ರಾಜ್ಯದ ಸಂಘಟನೆಗಳ ಕೈವಾಡವಿದೆ. ಪಿಎಫ್‌ಐ ಪಂಥದವರು ಕರಾವಳಿಯಲ್ಲಿ ಗಲಭೆ ಸೃಷ್ಟಿಸುತ್ತಿದ್ದಾರೆ” ಎಂದು ಗಂಭೀರ ಆರೋಪ ಮಾಡಿದರು.

ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರುತ್ತಾ, “ಮುಸ್ಲಿಂ ಓಲೈಕೆಗಾಗಿ ಹಿಂದೂ ಕಾರ್ಯಕರ್ತರಿಗೆ ಟಾರ್ಚರ್ ಮಾಡಲಾಗುತ್ತಿದೆ. ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.