ಮನೆ ಕಾನೂನು ಚಾಮುಂಡೇಶ್ವರಿ ದೇವಸ್ಥಾನದ ಚರ-ಸ್ಥಿರ ಆಸ್ತಿ ವಿಲೇವಾರಿ ಮಾಡದಂತೆ ಪ್ರಾಧಿಕಾರಕ್ಕೆ ಹೈಕೋರ್ಟ್‌ ಮಧ್ಯಂತರ ಆದೇಶ

ಚಾಮುಂಡೇಶ್ವರಿ ದೇವಸ್ಥಾನದ ಚರ-ಸ್ಥಿರ ಆಸ್ತಿ ವಿಲೇವಾರಿ ಮಾಡದಂತೆ ಪ್ರಾಧಿಕಾರಕ್ಕೆ ಹೈಕೋರ್ಟ್‌ ಮಧ್ಯಂತರ ಆದೇಶ

0

“ಸುಪ್ರಸಿದ್ಧ ಶ್ರೀ ಚಾಮುಂಡೇಶ್ವರಿ ದೇವಾಲಯದ ನಿರ್ವಹಣೆಗಾಗಿ ರೂಪಿಸಲಾಗಿರುವ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ ಸೆಕ್ಷನ್‌ 16 ಅಥವಾ 17ರ ಅಡಿ ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ನ್ಯಾಯಾಲಯದ ಅನುಮತಿ ಪಡೆಯಬೇಕು” ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಮಧ್ಯಂತರ ಆದೇಶ ಮಾಡಿದೆ.

Join Our Whatsapp Group

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ 2024 ಅನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಕೋರಿ ದಿವಂಗತ ಶ್ರೀಕಂಠ ದತ್ತ ಒಡೆಯರ್‌ ಪತ್ನಿ ಪ್ರಮೋದಾ ದೇವಿ ಒಡೆಯರ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನ್‌ಗೌಡರ್‌ ಅವರ ಏಕಸದಸ್ಯ ಪೀಠ ನಡೆಸಿತು.

“ವಿಧಾನಸಭೆ ನಿಯಮಗಳಿಗೆ ವಿರುದ್ಧವಾಗಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ ಜಾರಿಗೊಳಿಸಲಾಗಿದೆಯೇ ಎಂಬುದನ್ನು ಪರಿಗಣಿಸಬೇಕಿದೆ. ಅರ್ಜಿ ಇತ್ಯರ್ಥವಾಗುವವರೆಗೆ ಚಾಮುಂಡೇಶ್ವರಿ ದೇವಾಲಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಪ್ರಾಧಿಕಾರವು ವಿಲೇವಾರಿ ಮಾಡುವಂತಿಲ್ಲ. ಹಾಲಿ ದೇವಾಲಯದಲ್ಲಿ ಜಾರಿಯಲ್ಲಿರುವ ಸಂಪ್ರದಾಯದಲ್ಲಿ ಬದಲಾವಣೆ ಅಥವಾ ಹಸ್ತಕ್ಷೇಪ ಮಾಡಬಾರದು. ಪ್ರಾಧಿಕಾರ ಕಾಯಿದೆ ಸೆಕ್ಷನ್‌ 16 ಅಥವಾ 17ನೇ ಅಡಿ ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ನ್ಯಾಯಾಲಯದ ಅನುಮತಿ ಪಡೆಯಬೇಕು. ಅರ್ಜಿ ವಿಲೇವಾರಿ ಬಾಕಿ ಇರುವಾಗ ರಾಜ್ಯ ಸರ್ಕಾರ ನಿಯಮ ರೂಪಿಸುವುದಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ. ಸಭೆಯಲ್ಲಿ ಭಾಗವಹಿಸುವಂತೆ ಪ್ರಮೋದಾ ದೇವಿ ಅವರಿಗೆ ಪ್ರಾಧಿಕಾರವು ನೋಟಿಸ್‌ ನೀಡಬೇಕು. ಅವರು ಸಭೆಯಲ್ಲಿ ಭಾಗವಹಿಸದಿದ್ದರೆ ಪ್ರಾಧಿಕಾರ ಸೂಕ್ತ ನಿರ್ಧಾರ ಕೈಗೊಳ್ಳಲು ಸ್ವತಂತ್ರವಾಗಿರುತ್ತದೆ” ಎಂದು ನ್ಯಾಯಾಲಯ ವಿಸ್ತೃತ ಮಧ್ಯಂತರ ಆದೇಶ ಮಾಡಿದೆ.

ಇದಕ್ಕೂ ಮುನ್ನ, ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ದೇವದಾಸ್ ಮತ್ತು ಅರ್ಜಿದಾರರ ಪರ ವಕೀಲರ ನಡುವೆ ಪರ-ವಿರೋಧ ವಾದ ವ್ಯಕ್ತವಾಯಿತು.

ದೇವದಾಸ್‌ ಅವರು “ಪ್ರಾಧಿಕಾರದ ಸೆಕ್ಷನ್‌ 17ರ ಅನ್ವಯ ಯಾವುದೇ ರೀತಿಯಲ್ಲೂ ಅರ್ಜಿದಾರರ ಹಕ್ಕುಗಳಿಗೆ ಅಡ್ಡಿ ಮಾಡುವುದಿಲ್ಲ. ಸೆಕ್ಷನ್‌ 16ರ ಅನ್ವಯ ಎಲ್ಲರಿಗೂ ಸಭೆಯಲ್ಲಿ ಪಾಲ್ಗೊಳ್ಳಲು ನೋಟಿಸ್‌ ನೀಡಲಾಗುತ್ತದೆ. ಇಲ್ಲಿ ಪ್ರಾಧಿಕಾರದ ಅಧ್ಯಕ್ಷರು (ಮುಖ್ಯಮಂತ್ರಿ) ನಿರ್ಣಯ ಕೈಗೊಂಡರೂ ಅದು ಸಚಿವ ಸಂಪುಟದ ತೀರ್ಮಾನಕ್ಕೆ ಒಳಪಡುತ್ತದೆ. ಅರ್ಜಿದಾರರಿಗೆ ಈ ಆತಂಕವೇಕೆ? ಪ್ರಾಧಿಕಾರ ಅಥವಾ ಸಿಎಂ ಸೆಕ್ಷನ್‌ 17ರ ಅನ್ವಯ ಯಾವುದೇ ಅಧಿಕಾರ ಚಲಾಯಿಸಿಲ್ಲ. ಹೀಗಿರುವಾಗ ಅರ್ಜಿದಾರರಿಗೆ ಸಮಸ್ಯೆಯಾದರೆ ಅವರು ಅರ್ಜಿ ಸಲ್ಲಿಸಬಹುದು” ಎಂದರು.

ಆಗ ಅರ್ಜಿದಾರರ ಪರ ವಕೀಲರು “ಪ್ರಾಧಿಕಾರದ ಅಧ್ಯಕ್ಷರು ಮುಖ್ಯಮಂತ್ರಿ. ಅಲ್ಲಿ ಯಾವುದೇ ಅಭಿಪ್ರಾಯ ಭೇದವಿದ್ದರೆ ಅದು ಸಂಪುಟಕ್ಕೆ ಹೋಗುತ್ತದೆ. ಇದೊಂದು ರೀತಿಯಲ್ಲಿ ಸೀಸರ್‌ನಿಂದ ಆತನ ಪತ್ನಿ ಬಳಿ ಕಳುಹಿಸಿದಂತೆ. ಒಂದೊಮ್ಮೆ ಪ್ರಾಧಿಕಾರದ ಸದಸ್ಯರ ನಡುವೆ ಅಭಿಪ್ರಾಯ ಭೇದ ಉಂಟಾದರೆ ಅದನ್ನು ಮುಖ್ಯಮಂತ್ರಿ ನಿರ್ಧರಿಸಬಾರದು. ನ್ಯಾಯಾಲಯ ನಿರ್ಧರಿಸಲಿ” ಎಂದು ಕೋರಿದರು.

ಆಗ ಪೀಠವು “ಹಾಗಾದರೆ ಮುಖ್ಯಮಂತ್ರಿಯವರು ಸಂಪುಟದ ಪ್ರಕ್ರಿಯೆಯಲ್ಲಿ ಭಾಗವಹಿಸಬಾರದು. ನ್ಯಾಯಾಲಯದ ಅನುಮತಿ ಇಲ್ಲದೇ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ಆದೇಶಿಸಲಾಗುವುದು” ಎಂದಿತು.

ಇದಕ್ಕೆ ಒಪ್ಪಿದ ಅರ್ಜಿದಾರರ ಪರ ವಕೀಲರು “ದೇವಸ್ಥಾನದ ರಚನೆ ಮತ್ತು ಬೆಟ್ಟಕ್ಕೆ ಯಾವುದೇ ಪ್ರಮುಖವಾದ ರಚನಾತ್ಮಕ ಬದಲಾವಣೆ ಮಾಡಬಾರದು. ಏಕೆಂದರೆ ಈಗಾಗಲೇ ಸಾಕಷ್ಟು ಸಮಸ್ಯೆಯಾಗಿದೆ. ನೀತಿಯ ಬದಲಾವಣೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ಬರಲು ನಮಗೆ ಅನುಮತಿಸಬೇಕು. ಹಣಕಾಸಿನ ಹೊಣೆಗಾರಿಕೆಯ ಬಗ್ಗೆ ನಿಗದಿತವಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಪ್ರಾಧಿಕಾರಕ್ಕೆ ಆದೇಶಿಸಬೇಕು” ಎಂದರು.

ಇದಕ್ಕೆ ಅಸಮ್ಮತಿ ಸೂಚಿಸಿದ ಪೀಠವು “ಹಣಕಾಸನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ವಿಚಾರಕ್ಕೆ ಈ ನ್ಯಾಯಾಲಯ ಹೋಗಲಾಗದು. ಕಾಯಿದೆ ಅನ್ವಯ ಹಣಕಾಸು ನಿರ್ವಹಿಸಬೇಕು” ಎಂದರು.

ಆಗ ಮತ್ತೆ ಅರ್ಜಿದಾರರ ಪರ ವಕೀಲರು “ಅರ್ಜಿ ಇತ್ಯರ್ಥವಾಗುವವರೆಗೆ ಪ್ರಾಧಿಕಾರವನ್ನು ವಿಸರ್ಜಿಸಬಾರದು. ಒಮ್ಮೆ ಪ್ರಾಧಿಕಾರ ವಿಸರ್ಜನೆಯಾದರೆ ನಮ್ಮ ಸ್ಥಾನ ಹೋಗುತ್ತದೆ. ಸೆಕ್ಷನ್‌ 16ರ ಅನ್ವಯ ಪ್ರಾಧಿಕಾರದ ಸದಸ್ಯರ ನಡುವೆ ಒಮ್ಮತ ಮೂಡದಿದ್ದರೆ ನ್ಯಾಯಾಲಯದ ಅನುಮತಿ ಇಲ್ಲದೇ ನಿರ್ಧಾರ ಕೈಗೊಳ್ಳುವಂತಿಲ್ಲ. ದೇವಸ್ಥಾನ ಮತ್ತು ಬೆಟ್ಟದ ಸ್ಥಿರ ಮತ್ತು ಚರಾಸ್ತಿಯನ್ನು ಬದಲಾಯಿಸಬಾರದು. ಸೆಕ್ಷನ್‌ 40ರ ಅನ್ವಯ ಸಂಪ್ರದಾಯ ಮತ್ತು ವಿಧಿ ವಿಧಾನಗಳಿಗೆ ಬದಲಾವಣೆ ಮಾಡಬಾರದು. ದೇವಸ್ಥಾನದ ಖರ್ಚು-ವೆಚ್ಚದ ದಾಖಲೆ ಪರಿಶೀಲಿಸಲು ಪ್ರಾಧಿಕಾರದ ಕಾಯಂ ಸದಸ್ಯರಿಗೆ ಅನುಮತಿಸಬೇಕು” ಎಂದು ಮನವಿ ಮಾಡಿದರು.

ಇದಕ್ಕೆ ತೀವ್ರ ಆಕ್ಷೇಪ ದಾಖಲಿಸಿದ ದೇವದಾಸ್‌ ಅವರು “ಪ್ರಮೋದಾ ದೇವಿ ಒಡೆಯರ್‌ ಅವರು ಪ್ರಾಧಿಕಾರದ ಕಾಯಂ ಸದಸ್ಯರಾಗಿದ್ದಾರೆ. ಸತತವಾಗಿ ಮೂರು ಸಭೆಗಳಿಗೆ ಅವರು ಬಾರದಿದ್ದರೆ ಅವರನ್ನು ಕೈಬಿಡಲು ಪ್ರಾಧಿಕಾರ ನಿರ್ಧಾರ ಕೈಗೊಳ್ಳಬಹುದು. ಈ ಸಂಬಂಧ ನಾವು ಕಾಯಿದೆಗೆ ತಿದ್ದುಪಡಿ ತರಬಹುದು. ಅರ್ಜಿದಾರರು ಇಷ್ಟೆಲ್ಲಾ ಬಯಸಿದರೆ ಅವರು ಸಭೆಯಲ್ಲಿ ಭಾಗವಹಿಸದಿದ್ದರೆ ಪ್ರಾಧಿಕಾರ ಹೇಗೆ ಕೆಲಸ ಮಾಡುತ್ತದೆ ಎಂಬುದು ಅವರಿಗೆ ಹೇಗೆ ತಿಳಿಯುತ್ತದೆ? ಮೇಲ್ಮನವಿ 23 ವರ್ಷದಿಂದ ಬಾಕಿ ಇದೆ. ಈಗ ಪ್ರಕರಣ ನ್ಯಾಯಾಲಯದಲ್ಲಿದೆ ಎನ್ನುತ್ತಿದ್ದಾರೆ” ಎಂದರು.

ಅಂತಿಮವಾಗಿ ಪೀಠವು ಅರ್ಜಿಯ ವಿಚಾರಣೆಯನ್ನು ನವೆಂಬರ್‌ 22ಕ್ಕೆ ಮುಂದೂಡಿತು.