ಹೊಸಪೇಟೆ (ವಿಜಯನಗರ): ಹೂಡಿಕೆ ಮಾಡಿದರೆ ಅಧಿಕ ಬಡ್ಡಿಯೊಂದಿಗೆ ಹಣ ಹಿಂದಿರುಗಿಸುವ ಭರವಸೆ ನೀಡಿದ ನಾಲ್ವರು ಮಹಿಳೆಯರ ಸಹಿತ ಒಟ್ಟು ಎಂಟು ಮಂದಿ ಹಲವರಿಗೆ ವಂಚಿಸಿರುವ ಕುರಿತಂತೆ ಇಲ್ಲಿನ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಇಬ್ಬರ ಸಹಿತ ಇತರ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಇತರ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್.ತಿಳಿಸಿದ್ದಾರೆ.
ನಗರದ ಮುಮ್ತಾಜ್ ಬೇಗಂ ಹಾಗೂ ಇತರ ಏಳು ಮಂದಿ ಸುಮಾರು ಒಂದು ವರ್ಷದಿಂದ ಈ ದಂಧೆ ನಡೆಸುತ್ತಿದ್ದಾರೆ.
ತನಗೆ ₹1.20 ಕೋಟಿ, ತನ್ನ ಸ್ನೇಹಿತ ರಾಘವೇಂದ್ರ ಎಂಬುವವರಿಗೆ ₹30 ಲಕ್ಷ ವಂಚಿಸಲಾಗಿದೆ. ಇನ್ನೂ ಅನೇಕ ಮಂದಿ ವಂಚನೆಗೆ ಒಳಗಾಗಿರುವ ಸಾಧ್ಯತೆ ಇದೆ ಎಂದು ನಗರದ ಎಂ.ಅನೀಷ ಎಂಬುವವರು ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ನಗರದ ಮುಮ್ತಾಜ್ ಬೇಗಂ, ನಸ್ರೀನ್, ಅರೀಫಾ ಬೇಗಂ, ಎಂ.ಜಾವೀದ್, ಆರ್.ನಭಿರಸೂಲ್ಬೆಂಗಳೂರಿನ ತಸ್ಲೀಂ ಬಾನು, ಸೈಯದ್ ಜುಬೇರ ಮತ್ತು ಕೇರಳ ಕೋಯಿಕ್ಕೋಡ್ನ ಜಬೀರ್ ಜೇನಶೇರಿ ವಿರುದ್ಧ ದೂರು ನೀಡಲಾಗಿದೆ.
ಮುಮ್ತಾಜ್ ಬೇಗಂ ನನ್ನ ಸಂಬಂಧಿಯಾಗಿದ್ದು, ನಗರದ ಜೆ.ಪಿ.ನಗರದಲ್ಲಿರುವ ಅವರ ಮನೆಗೆ ನನ್ನನ್ನು ಕರೆಸಿಕೊಂಡು ಹೂಡಿಕೆ ಮಾಡಿದರೆ ಅಧಿಕ ಬಡ್ಡಿ ನೀಡುವ ಭರವಸೆ ನೀಡಿದರು. ನನಗೆ ನಂಬಿಕೆ ಬರಿಸುವುದಕ್ಕಾಗಿ ತನ್ನ ಅಳಿಯ ಸೈಯದ್ ಜುಬೇರ್ ಕೇರಳದಲ್ಲಿ ಷೇರು ವ್ಯವಹಾರ, ಪೆಟ್ರೋಲ್ ಬಂಕ್, ಚಿನ್ನದ ವಹಿವಾಟು, ರಿಯಲ್ ಎಸ್ಟೇಟ್, ಬೆಂಗಳೂರಿನಲ್ಲಿ ಪೈಪ್ ಫ್ಯಾಕ್ಟರಿ ಹಾಕಿದ್ದಾನೆ. ಆತನ ವ್ಯವಹಾರದಲ್ಲಿ ಶೇ 50ರಷ್ಟು ಲಾಭಾಂಶ ಇದ್ದು, ಹಣ ಹೂಡಿದವರಿಗೆ ಈಗಾಗಲೇ ಶೇ 16ರಷ್ಟು ಬಡ್ಡಿ ನೀಡಲಾಗುತ್ತಿದೆ ಎಂದು ನಂಬಿಸಿದ್ದರು. ಅವರ ಮಾತಿಗೆ ಮರುಳಾಗಿ ನಾನು ₹1.20 ಕೋಟಿ ನೀಡಿದ್ದಲ್ಲದೆ, ನನ್ನ ಸ್ನೇಹಿತ ಎಸ್.ರಾಘವೇಂದ್ರ ಅವರಿಂದ ₹30 ಲಕ್ಷ ಹೂಡಿಕೆ ಮಾಡಿಸಿದ್ದೆ. ಆದರೆ ಈಗ ಅವರೆಲ್ಲ ಸೇರಿಕೊಂಡು ವಂಚನೆ ಮಾಡಿದ್ದು ಗೊತ್ತಾಗಿದೆ’ ಎಂದು ಅನೀಷ ಅವರು ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.














