ಬೆಂಗಳೂರು(Bengaluru): ಕೇಂದ್ರದ ಗೃಹ ಸಚಿವರು ದೇಶದಲ್ಲಿ ಹಲವಾರು ಭಾಷೆಗಳನ್ನು ನಾಶ ಮಾಡುವ ನಿಟ್ಟಿನಲ್ಲಿ ಆರಂಭಿಕ ಹೆಜ್ಜೆಗಳನ್ನು ಇಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಸ್ಥಳೀಯ ಭಾಷೆಗಳನ್ನು ಉದ್ಧಾರ ಮಾಡುತ್ತೇವೆ ಎಂದು ಕೇಂದ್ರ ಸಚಿವರು ಹಿಂದಿಯನ್ನು ಹೇರಿಕೆ ಮಾಡಲು ಹೊರಟಿದ್ದಾರೆ. ಇದು ಸರಿಯಲ್ಲ, ನಾವು ಒಪ್ಪುವುದಿಲ್ಲ ಎಂದರು.
ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶ ಮಾಡಬೇಕು, ಗೃಹ ಸಚಿವರಿಗೆ ತಿಳಿವಳಿಕೆ ಮೂಡಿಸಬೇಕು. ಪದೇಪದೆ ಭಾಷೆಗಳ ವಿಷಯವನ್ನೇ ಕೆದಕುತ್ತಾ ಕೂರುವುದು ಸರಿಯಲ್ಲ. ಇದನ್ನೇ ಹೀಗೆಯೇ ಕೆದಕುತ್ತಾ ಹೋದರೆ ದೇಶದ ಸಮಗ್ರತೆ, ಏಕತೆಗೆ ಧಕ್ಕೆ ಆಗುತ್ತದೆ. ಈ ಬಗ್ಗೆ ಗೃಹ ಸಚಿವರ ನೇತೃತ್ವದ ಸಮಿತಿ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ವರದಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ನೇರ ಮಾತುಗಳಲ್ಲಿ ಹೇಳಿದರು.
ಈಗಾಗಲೇ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರು ಪ್ರತಿಭಟನೆ ಮಾಡಿದ್ದಾರೆ. ಪಶ್ಚಿಮ ಬಂಗಾಳ, ಕೇರಳದಲ್ಲಿ ಪ್ರತಿಭಟನೆಗಳು ಆರಂಭವಾಗಿವೆ. ಒಂದು ರಾಷ್ಟ್ರ – ಒಂದು ಭಾಷೆ ಎನ್ನುವ ನೀತಿಯನ್ನು ತಂದು ಬಿಜೆಪಿ ನಾಯಕರು ಇತರೆ ಭಾಷೆಗಳನ್ನು ಹತ್ತಿಕ್ಕಲು ಹೊರಟಿದ್ದಾರೆ. ಆದರೆ, ಇತರೆ ಭಾಷೆಗಳನ್ನು ನಾಶ ಮಾಡಿ ಒಂದು ರಾಷ್ಟ್ರ ಕಟ್ಟೋಕೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಕೇಂದ್ರದ ಧೋರಣೆಯನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ. ಹಿಂದಿ ಹೇರಿಕೆ ಮಾಡುವುದಕ್ಕಿಂತ ಬೇರೆ ಸಮಸ್ಯೆಗಳ ಕಡೆ ಕೇಂದ್ರ ಸರಕಾರ ಗಮನ ಹರಿಸುವುದು ಉತ್ತಮ. 120 ದೇಶಗಳಲ್ಲಿ ಬಡತನದಲ್ಲಿ ಮಿತಿ ಮೀರುತ್ತಿದೆ, ಹಸಿವಿನ ಸೂಚ್ಯಂಕದಲ್ಲಿ ನಮ್ಮ ದೇಶ 104ನೇ ಸ್ಥಾನದಲ್ಲಿದೆ. ಮೊದಲು ದೇಶದಲ್ಲಿ ಇರುವ ಇಂಥ ಸಮಸ್ಯೆಗಳನ್ನೂ ಬಗೆಹರಿಸಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಭಾಷೆ ವಿಷಯದಲ್ಲಿ ಸಮಸ್ಯೆ ಆದರೆ ನಮ್ಮಲ್ಲಿರುವ ಕನ್ನಡ ಸಂಘ ಸಂಸ್ಥೆ ಜತೆ ಸೇರಿ ನಮ್ಮ ಪ್ರತಿಭಟನೆ ಮಾಡಬೇಕಾಗುತ್ತದೆ. ಕನ್ನಡಕ್ಕೆ ಧಕ್ಕೆ ಬಂದರೆ ಸಹಿಸುವ ಪ್ರಶ್ನೆ ಇಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಎರಡೂ ರಾಷ್ಟ್ರೀಯ ಪಕ್ಷಗಳು ರಾಷ್ಟ್ರ ಕ್ಕೆ ಮಾರಕ. ಇವೆರಡೂ ಒಂದೇ ನಾಣ್ಯದ ಎರಡು ಮುಖ. ಒಂದೆಡೆ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ, ಮತ್ತೊಂದೆಡೆ ಜನ ಸಂಕಲ್ಪ ಯಾತ್ರೆ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಈಗ ಭಾಷೆ ಇಟ್ಟುಕೊಂಡು ದಬ್ಬಾಳಿಕೆ ಪ್ರಾರಂಭ ಮಾಡಿವೆ. ದಕ್ಷಿಣ ಭಾರತದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಜನ ಬಾಗಿಲು ಹಾಕಿದ್ದಾರೆ. ಕರ್ನಾಟಕದಲ್ಲೂ ಆ ದಿನ ಬರುವುದು ಬಹಳ ದೂರ ಇಲ್ಲ ಎಂದು ಅವರು ಟೀಕಾ ಪ್ರಹಾರ ನಡೆಸಿದರು.
ದೇವೇಗೌಡರು ಕೊಟ್ಟ ಕೊಡುಗೆ ಬಗ್ಗೆ ಹೇಳಲಿ:
ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ ಅವರು, ಸಮ್ಮಿಶ್ರ ಸರ್ಕಾರದಲ್ಲಿ ನಾವು ನ್ಯಾ. ನಾಗಮೋಹನ್ ದಾಸ್ ಸಮಿತಿ ರಚನೆ ಮಾಡಿದೆವು ಎಂದು ಕಾಂಗ್ರೆಸ್ ನಾಯಕರು ಈಗ ಹೇಳುತ್ತಾರೆ. ಬಿಜೆಪಿಯವರು ನಾವು ವರದಿಯನ್ನು ಜಾರಿ ಮಾಡಿದ್ದೇವೆ ಎನ್ನುತ್ತಿದ್ದಾರೆ. ಇನ್ನು ಸಚಿವ ಶ್ರೀರಾಮುಲು ಬೇರೆ ಎದೆ ಬಡಿದುಕೊಂಡು ಮಾತನಾಡುತ್ತಿದ್ದರು. ಒಬ್ಬ ಶಾಸಕರಂತೂ ನಾವು ಬದುಕಿರುವವರೆಗೂ ಬಿಜೆಪಿಗೆ ಗುಲಾಮರಾಗಿ ಇರುತ್ತೇವೆ ಎಂದು ಘೋಷಣೆ ಮಾಡಿದರು. ಇದರಿಂದ ಆ ಸಮಾಜವನ್ನು ಇನ್ನೂ ಗುಲಾಮಗಿರಿಯಲ್ಲೇ ಇಡುವ ಅವರ ಮನಃಸ್ಥಿತಿಯನ್ನು ತೋರಿಸುತ್ತದೆ ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.
ಶಾಸಕರಾಗಲು ಮೀಸಲಾತಿ ಕೊಟ್ಟಿದ್ದು ದೇವೇಗೌಡರು ಎಂದು ಹೇಳಿದ ಕುಮಾರಸ್ವಾಮಿ ಅವರು; ನಾಗಮೊಹನ್ ದಾಸ್ ಅವರ ವರದಿ ಯಾವ ವರ್ಷದಲ್ಲಿ ಸರಕಾರಕ್ಕೆ ಸಲ್ಲಿಕೆ ಮಾಡಲಾಯಿತು? ಸಲ್ಲಿಕೆ ಮಾಡಿದ್ದಾಗಿನಿಂದ ಆ ವರದಿಯನ್ನು ಏನು ಮಾಡಿದ್ದರು? ಒಂದೂವರೆ ವರ್ಷ ಯಾಕೆ ವರದಿಯನ್ನು ಜಾರಿ ಕೊಡದೆ ಸ್ಟೊರೇಜ್ ನಲ್ಲಿ ಇಟ್ಟಿದ್ದರು. ಆಗಲೇ ವರದಿ ಕೊಡಬಹುದಿತ್ತಲ್ಲವೇ? ಈಗ ಚುನಾವಣೆ ಹತ್ತಿರದಲ್ಲಿದೆ. ಈಗ ಚುನಾವಣೆಗೆ ಗಿಮಿಕ್ ಮಾಡಿಕೊಂಡು ಹೋಗ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿ ಕಾರಿದರು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹೆಚ್.ವಿಶ್ವನಾಥ್ ಹೇಳಿಕೆ ಗಮನಿಸಿದ್ದೇನೆ. ದೇವೇಗೌಡರ ಕೊಡುಗೆ ಬಗ್ಗೆ, ನಿರಂತರವಾಗಿ ಮೀಸಲು ಸೌಲಭ್ಯ ಪಡೆದವರು ಯಾರು ಎಂಬ ಬಗ್ಗೆ ಅವರು ಹೇಳಿರುವುದು ಸರಿ ಇದೆ. ಆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಿ.ಆರ್. ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದಲ್ಲಿ ಎಷ್ಟೋ ಜನರಿಗೆ ಮೀಸಲಾತಿ ತಲುಪುತ್ತಿಲ್ಲ. ಅವರಿಗೆ ಮೀಸಲಾತಿ ತಲುಪಬೇಕು. ಮೀಸಲಾತಿಯಿಂದ ಹೊರಗಡೆ ಇರುವವರಿಗೆ ಮೀಸಲಾತಿ ತಲುಪಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಸ್ಟೀಲ್ ಬ್ರಿಡ್ಜ್ ಗೆ ಬಿಜೆಪಿ ವಿರೋಧ ಮಾಡಿತ್ತು:
ಹೆಬ್ಬಾಳ ಸ್ಟೀಲ್ ಬ್ರಿಡ್ಜ್ ಮಾಡುವ ವಿಚಾರದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಅವರು, ಈ ಸ್ಟೀಲ್ ಬ್ರಿಡ್ಜ್ ಮಾರ್ಗದಲ್ಲಿ ಸುರಂಗ ಮಾಡುವ ಬಗ್ಗೆ ನನ್ನ ಸರಕಾರ ನಿರ್ಧಾರ ಮಾಡಿತ್ತು. ಕೊರಿಯಾ ಕಂಪನಿ ಒಂದು ಮುಂದೆ ಬಂದಿತ್ತು. ಆಗ ಬಿಜೆಪಿಯವರು ವಿರೋಧ ಮಾಡಿದ್ದರು. ಈಗ ಅವರೇ ಮಾಡೋಕೆ ಹೊರಟಿದ್ದಾರೆ. ಇದು ಎಂತಹ ವಿಪರ್ಯಾಸ ನೋಡಿ. ಬಿಜೆಪಿ ಬರೀ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಪಂಚರತ್ನ ಯಾತ್ರೆ ಸಿದ್ಧತೆ ಪೂರ್ಣ:
ಪಂಚರತ್ನ ಕಾರ್ಯಕ್ರಮಕ್ಕೆ ಸಿದ್ದತೆ ಅಂತಿಮವಾಗಿದೆ. ಐದು ವರ್ಷ ಅಧಿಕಾರ ಕೊಟ್ಟರೆ ಈ ಐದು ಕಾರ್ಯಕ್ರಮಗಳನ್ನು ಹೇಗೆ ಕೊಡಬೇಕು ಎಂಬುವುದರ ಬಗ್ಗೆ ತಯಾರಿ ಮಾಡುತ್ತಿದ್ದೇವೆ. ನವಂಬರ್ 1ರಂದು ಯಾತ್ರೆಗೆ ಚಾಲನೆ ಕೊಡಲಾಗುವುದು. ಇದೇ ಅಕ್ಟೋಬರ್ 18 ಹಾಗೂ 19ರಂದು ಶಾಸಕರ ಹಾಗೂ ಸದಸ್ಯರ ಸಭೆ ಕರೆದಿದ್ದೇವೆ. ನವಂಬರ್ 1ರಂದು ವಿಶೇಷವಾಗಿ ಕನ್ನಡ ಬಾವುಟವನ್ನು ಮನೆ ಮನೆಗೆ ಹಾರಿಸುವ ವಿಚಾರ ಚರ್ಚೆ ನಡೆಸಲು ಸಭೆ ಕರೆದಿದ್ದೇನೆ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ಜತೆ ಚರ್ಚೆ ಮಾಡಿಲ್ಲ:
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ನನ್ನ ಜತೆ ಚರ್ಚೆ ಮಾಡಿದ್ದಾರೆ ಎಂದು ಸುದ್ದಿಗಳು ಹಬ್ಬಿವೆ. ನಾನು ಅವರ ಜತೆ ಚರ್ಚೆ ಮಾಡಿಲ್ಲ. ಇದೆಲ್ಲ ಕೇವಲ ಊಹಾಪೋಹ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಅಮಾನವೀಯ:
ಮಳವಳ್ಳಿಯಲ್ಲಿ ಶಾಲಾ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ ಅವರು, ಇದು ಅತ್ಯಂತ ಹೇಯ ಘಟನೆ. ಆ ಮಗುವಿನ ಸಾವು ನನಗೆ ಬಹಳ ದುಃಖ ಉಂಟು ಮಾಡಿದೆ. ನಮ್ಮ ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಹಾಗೆಯೇ 50 ಸಾವಿರ ಪರಿಹಾರ ಕೂಡ ನೀಡಿದ್ದಾರೆ ಎಂದರು.
ನಾವು ಹೋದ ಮೇಲೆ ಇಬ್ಬರು ಸಚಿವರು ಕಾಟಚಾರಕ್ಕೆ ಹೋಗಿದ್ದಾರೆ. ಕಣ್ಣು ಒರೆಸುವ ತಂತ್ರ ಮಾಡಿದ್ದಾರೆ. ಇಂತಹ ಘಟನೆಗಳನ್ನು ತಡೆಯಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಮಂಜುನಾಥ್ ಅವರು ಹಾಜರಿದ್ದರು.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.