ಪಶ್ಚಿಮ ಬಂಗಾಳ: ಮುರ್ಷಿದಾಬಾದ್ನಲ್ಲಿ ವಕ್ಫ್ ಕಾಯ್ದೆಗೆ ಸಂಬಂಧಿಸಿದ ಹಿಂಸಾಚಾರದಿಂದ ವಾತಾವರಣ ಉದ್ವಿಗ್ನವಾಗಿದೆ. ಶಾಂತಿ ಕಾಪಾಡಲು ಸ್ಥಳೀಯ ಪೊಲೀಸರು ಮತ್ತು ಕೇಂದ್ರ ಭದ್ರತಾ ಪಡೆಗಳು ಕಾರ್ಯನಿರ್ವಹಿಸುತ್ತಿವೆ. ಈ ನಡುವೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹಿಂಸಾಚಾರಕ್ಕೆ ಬಿಜೆಪಿಯನ್ನು ಜವಾಬ್ದಾರರನ್ನಾಗಿ ಮಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯಿಂದ ಅಶಾಂತಿ:
ನಾವು ಎಲ್ಲಾ ಧರ್ಮಗಳ ಸಮಾನತೆಯನ್ನು ನಂಬುತ್ತೇವೆ. ಬಿಜೆಪಿಯವರ ಹೇಳಿಕೆಗಳಿಂದದ ಉದ್ರೇಕಗೊಂಡು ಬಂಗಾಳದಲ್ಲಿ ಅಶಾಂತಿ ಸೃಷ್ಟಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ದುರ್ಗಾ ಪೂಜೆ, ಸರಸ್ವತಿ ಪೂಜೆಯಂತಹ ಆಚರಣೆಗಳನ್ನು ನಾವು ಮಾಡದಂತೆ ಅಡ್ಡಿಪಡಿಸುವ ಆರೋಪಗಳನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.
!ವಕ್ಫ್ ಕಾಯ್ದೆಯ ಸುತ್ತಲಿನ ವಿವಾದವನ್ನು ಉತ್ಪ್ರೇಕ್ಷಿಸಿ, ಹಿಂದೂ-ಮುಸ್ಲಿಂ ಉದ್ವಿಗ್ನತೆ ಹರಡಲು ಬಿಜೆಪಿ ಉದ್ದೇಶಪೂರ್ವಕವಾಗಿ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು. ‘ಟಿಎಂಸಿ ಸಂಸತ್ತಿನಲ್ಲಿ ವಕ್ಫ್ ಕಾಯ್ದೆ ವಿರುದ್ಧ ಧ್ವನಿಯೆತ್ತಿತು, ಆದರೆ ಬಿಜೆಪಿಯವರ ಸುಳ್ಳು ವದಂತಿಗಳಿಂದ ನಮ್ಮ ವರ್ಚಸ್ಸಿಗೆ ಕಳಂಕ ತರಲಾಗುತ್ತಿದೆ’ ಎಂದು ಮಮತಾ ಆಕ್ರೋಶ ವ್ಯಕ್ತಪಡಿಸಿದರು.
ಇತರ ರಾಜ್ಯಗಳ ಹಳೆಯ ವೀಡಿಯೊಗಳನ್ನು ಬಂಗಾಳದ ಘಟನೆ ಎಂದು ತೋರಿಸಿ ಅಪಪ್ರಚಾರ ಮಾಡುತ್ತಿದ್ದಾರೆ. ಕೆಲವು ಮಾಧ್ಯಮಗಳು ಬಿಜೆಪಿಯ ಜೊತೆಗೆ ಒಪ್ಪಂದ ಮಾಡಿಕೊಂಡಿವೆ ಎಂದು ಆರೋಪಿಸಿದ ಮಮತಾ ಬ್ಯಾನರ್ಜಿ ಅವರು, “ಜನರನ್ನು ಒಡೆಯುವ ಕೇಂದ್ರದ ಕುತಂತ್ರವನ್ನು ನಾವು ಸಹಿಸುವುದಿಲ್ಲ. ಸಂವಿಧಾನವನ್ನು ಗೌರವಿಸಿ, ಎಲ್ಲಾ ಧರ್ಮಗಳನ್ನು ಒಗ್ಗಟ್ಟಿನಿಂದ ಪಾಲಿಸೋಣ ಎಂದು ಮನವಿ ಮಾಡಿದರು.
ಹಿಂದೂಗಳೇ ಅನೇಕ ವಕ್ಫ್ ಆಸ್ತಿಯಲ್ಲಿ ವಾಸಿಸುತ್ತಿದ್ದಾರೆ:
ಬಿಜೆಪಿಗರೇ ಮುಸ್ಲಿಮರು ಮಾತ್ರವಲ್ಲದೆ ಹಿಂದೂಗಳು ಸಹ ವಕ್ಫ್ ಆಸ್ತಿಗಳಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ನೀವು ರಾಜ್ಯ ವಕ್ಫ್ ಮಂಡಳಿಯ ಅಧಿಕಾರವನ್ನು ಕೊನೆಗೊಳಿಸಲು ಬಯಸುತ್ತೀರಿ. ನಿಮಗೆ ಈಗ ಬಹುಮತವಿದೆ, ಹೀಗಾಗಿ ನೀವು ಅಂತಹ ಕೆಲಸಗಳನ್ನು ಮಾಡುತ್ತಿದ್ದೀರಿ. ಜನರೇ ನೀವೇ ನೋಡಿ, ಚಂದ್ರಬಾಬು ನಾಯ್ಡು ಸುಮ್ಮನೆ ಕುಳಿತಿದ್ದಾರೆ, ನಿತೀಶ್ ಕುಮಾರ್ ಕೂಡ ಘಟನೆ ಬಗ್ಗೆ ಏನನ್ನೂ ಹೇಳುತ್ತಿಲ್ಲ, ಅವರು ಅಧಿಕಾರಕ್ಕಾಗಿ ಎಲ್ಲರನ್ನೂ ಬೆಂಬಲಿಸುತ್ತಿದ್ದಾರೆ. ಯೋಚಿಸಿ, ನೀವು ಅವರಿಗೆ ಮತ ಹಾಕಬೇಕೇ ಅಥವಾ ಬೇಡವೇ? ಇಂಥವರಿಗೆ ಮುಂದಿನ ಚುನಾವಣೆಗಳಲ್ಲಿ ಮತ ನೀಡುವ ಮುನ್ನ ಎಚ್ಚರಿಕೆ ವಹಿಸಿ ಎಂದು ಹೇಳಿದರು.
ವಕ್ಫ್ ಕಾಯ್ದೆಯನ್ನು ಬದಲಾಯಿಸಬೇಕಾದರೆ, ಸಂವಿಧಾನವನ್ನು ಏಕೆ ತಿದ್ದುಪಡಿ ಮಾಡಲಾಗಿಲ್ಲ? ಕೇವಲ ಬಹುಮತ ಸಾಕಾಗುವುದಿಲ್ಲ. ಸಂವಿಧಾನವನ್ನು ಬದಲಾಯಿಸಿದಾಗ, ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ನೀವು ಸಂವಿಧಾನವನ್ನು ಬದಲಾಯಿಸದೆ ಮಸೂದೆಯನ್ನು ತಂದಿದ್ದೀರಿ. ನಾನು ಅಧಿಕಾರದಲ್ಲಿರುವವರೆಗೆ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಘರ್ಷಣೆಯಾಗಲು ಬಿಡೋಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಪ್ರತಿಯೊಂದು ಧರ್ಮದ ಜನರು ಪರಸ್ಪರರ ಧರ್ಮವನ್ನು ಗೌರವಿಸಬೇಕು. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಮುಂಚೂಣಿಯಲ್ಲಿದ್ದರು. ಇಲ್ಲಿಯವರೆಗೆ ಅವರಿಗೆ ನಿಖರವಾಗಿ ಏನಾಯಿತು ಎಂದು ಯಾರಿಗೂ ತಿಳಿದಿಲ್ಲ. ಶಹನಾಜ್ ಖಾನ್ ಕೂಡ ಅವರ ಆಪ್ತ ಸಹಚರರಲ್ಲಿ ಒಬ್ಬರಾಗಿದ್ದರು ಎಂದು ಮಮತಾ ಬ್ಯಾನರ್ಜಿ ಸ್ಮರಿಸಿದರು.