ಮನೆ ಸ್ಥಳೀಯ ಭ್ರೂಣದಲ್ಲೆ ಲಿಂಗಪತ್ತೆ ಅಪರಾಧ : ವೈದ್ಯರು ನೈತಿಕತೆಯಿಂದ ಕಾರ್ಯನಿರ್ವಹಿಸಿ –  ನ್ಯಾ. ಶೈಮಾ ಖಮ್ರೋಜ್

ಭ್ರೂಣದಲ್ಲೆ ಲಿಂಗಪತ್ತೆ ಅಪರಾಧ : ವೈದ್ಯರು ನೈತಿಕತೆಯಿಂದ ಕಾರ್ಯನಿರ್ವಹಿಸಿ –  ನ್ಯಾ. ಶೈಮಾ ಖಮ್ರೋಜ್

0

ಮೈಸೂರು: ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಮಾಡುವುದು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಯಾವುದೇ ಆಸ್ಪತ್ರೆಗಳಲ್ಲಿ ಈ ಕೃತ್ಯಗಳು ಜರುಗದಂತೆ ತಮ್ಮ ಕರ್ತವ್ಯ ಅರಿತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಎಫ್.ಟಿ.ಎಸ್.ಸಿ-1( ಪೋಕ್ಸೋ ಕಾಯ್ದೆ ಅಡಿ ದಾಖಲಾಗಿರುವ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ) ನ  ನ್ಯಾಯಾಧೀಶರಾದ ಶೈಮಾ ಖಮ್ರೋಜ್ ಅವರು ಆರೋಗ್ಯ ಸಿಬ್ಬಂದಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ತಂತ್ರಗಳ ಕುರಿತು ಹಮ್ಮಿಕೊಂಡಿದ್ದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

90 ರ ಇಸವಿಯಲ್ಲಿ ಪ್ರತಿಯೊಂದು ಮನೆಯಲ್ಲೂ 8 ರಿಂದ 10 ಮಕ್ಕಳು ಇರುತ್ತಿದ್ದರು. ಗಂಡು ಮಗುವನ್ನು ಪಡೆಯಬೇಕೆಂಬುದೇ ಇದಕ್ಕೆ ಮೂಲ ಕಾರಣವಾಗಿತ್ತು. ಅದಕ್ಕಾಗಿ ಅವರು ಪೂಜೆ, ಹರಕೆ ಸೇರಿದಂತೆ ಮೂಢನಂಬಿಕೆಗಳ ಮೊರೆಯೂ ಸಹ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಗಂಡು ಮಕ್ಕಳಿಗೆ ಮಾತ್ರ ವಿಶೇಷವಾದ ವಿದ್ಯಾಭ್ಯಾಸ ಹಾಗೂ ಸೌಲಭ್ಯಗಳು ಮತ್ತು ಹೆಣ್ಣು ಮಕ್ಕಳು ಇದರಿಂದ ವಂಚಿತರಾಗಿರುತ್ತಿದ್ದರು.  ಕಾಲಕ್ರಮೇಣ ಶಿಕ್ಷಣದಿಂದ ಹಾಗೂ ಸಮಾಜದಲ್ಲಿನ ಪ್ರಬುದ್ಧತೆಯಿಂದ ಇಂದಿನ ದಿನಗಳಲ್ಲಿ ಇದರ ಪ್ರಮಾಣ ಕಡಿಮೆಯಾಗಿದೆ ಎಂದರು.

ಮಾನವನ ಎಲ್ಲಾ ಹೊಸ ಸಂಶೋಧನೆಗಳು ಸದ್ಬಳಕೆಗಾಗಿ ಆವಿಷ್ಕಾರಗೊಂಡಿದ್ದರೂ ಸಹ ಅವುಗಳನ್ನು ನಕಾರಾತ್ಮಕವಾಗಿ ಬಳಸುವುದು ತಪ್ಪಲಿಲ್ಲ. ಗ್ಯಾಸ್ ಅನ್ವೇಷಣೆಯು ಒಂದಷ್ಟು ಡೌರಿ ಡೆತ್ ಗಳಿಗೆ ಕಾರಣವಾದರೇ, ದೂರದರ್ಶನದಂಥ ಆವಿಷ್ಕಾರಗಳು ಮಕ್ಕಳ ಮೇಲೆ ಅನೇಕ ದುಷ್ಪರಿಣಾಮಗಳನ್ನು ಬೀರುತ್ತಿವೆ. ಇವುಗಳು ಮಾನವನ ಆರೋಗ್ಯ ಸಂಬಂಧ ಶಿಕ್ಷಣ ಹಾಗೂ ಸಮಾಜದ ಸ್ವಾಸ್ಥ್ಯದ ಮೇಲು ಪರಿಣಾಮ ಬೀರುತ್ತಿವೆ. ಆಗಿಯೇ ಸ್ಕ್ಯಾನಿಂಗ್ ಉಪಕರಣದ ಅನ್ವೇಷಣೆಯು ಸಹ ಮಗುವಿನ ಆರೋಗ್ಯ ಹಾಗೂ ಹಾರೈಕೆ ದೃಷ್ಟಿಯಿಂದ ಪರಿಚಯಿಸಲ್ಪಟ್ಟಿತು. ಅದನ್ನು ಭ್ರೂಣ ಹತ್ಯೆಗೆ ಕಾರಣವಾಗುವಂತೆ ಬಳಸಲಾಗುತ್ತಿರುವುದು ವಿಷಾಧನೀಯ ಎಂದು ತಿಳಿಸಿದರು.

ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಸಂದರ್ಭದಲ್ಲಿ ಮಗುವಿನ ಲಿಂಗ ಸೂಚಿಸುವಂತೆ ಮಾತನಾಡುವುದು, ಸನ್ನೆ ಮಾಡುವುದು ಅಥವಾ ಮಗುವಿನ ಲಿಂಗವನ್ನು ಪರೋಕ್ಷವಾಗಿ ಬಿಂಬಿಸುವಂತೆ ಸಿಹಿ, ಹಬ್ಬ, ಆಚರಣೆಗಳ ಹೆಸರಿನಲ್ಲಿ ಮಾತನಾಡುವುದು ಕೂಡ ಅಪರಾಧ. ವೈದ್ಯರನ್ನು ದೇವರಂತೆ ಕಾಣಲಾಗುತ್ತದೆ. ನಿಮ್ಮ ನಿಮ್ಮ ಆತ್ಮ ಸಾಕ್ಷಿಗೆ ನೀವು ಹೆದರಬೇಕು. ಎಲ್ಲಾ ದಾಖಲೆಗಳನ್ನು ಸರಿಯಾಗಿ ನಿರ್ವಹಿಸುವುದರಿಂದ ಯಾರಿಗೂ ಉತ್ತರಿಸಲು ಹೆದರುವ ಪರಿಸ್ಥಿತಿ ಬರುವುದಿಲ್ಲ. ಕಾನೂನಾತ್ಮಕವಾಗಿ ನೋಂದಾಯಿಸಿದ ಸ್ಕ್ಯಾನಿಂಗ್ ಉಪಕರಣಗಳನ್ನು ಬಳಸಿ. ಪ್ರತಿಯೊಂದಕ್ಕೂ ದಾಖಲೆಗಳನ್ನು ನಿರ್ವಹಿಸಿ ಎಂದು ಆರೋಗ್ಯ ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು.

PCPNDT ಕಾಯ್ದೆಯಡಿ ಭ್ರೂಣದಲ್ಲೇ ಲಿಂಗಪತ್ತೆ ಮಾಡುವುದು ಕಾನೂನುಬಾಹಿರವಾಗಿದ್ದು, ಇದಕ್ಕೆ ಕಾನೂನಿನ ಅಡಿಯಲ್ಲಿ ದಂಡ ಹಾಗೂ ಶಿಕ್ಷೆಗಳಿವೆ. ಪ್ರತಿಯೊಂದು ಆಸ್ಪತ್ರೆಗಳಲ್ಲಿ ಇಲ್ಲಿ ಭ್ರೂಣಪತ್ತೆ ಮಾಡಲಾಗುವುದಿಲ್ಲ ಎಂಬ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಕಾಯ್ದೆ ಬಂದ ಮೇಲೆ ಈ ರೀತಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರೂ ಕೂಡ ಸಂಪೂರ್ಣವಾಗಿ ನಿಂತಿಲ್ಲ. ಇದನ್ನು ಸಂಪೂರ್ಣವಾಗಿ ತಡೆಗಟ್ಟುವಲ್ಲಿ ನಿಮ್ಮ ಪಾತ್ರ ಮಹತ್ವದ್ದು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಪಿ ಸಿ ಕುಮಾರಸ್ವಾಮಿ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ಹಾಗೂ ಕಾರ್ಯಗಾರಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಮಾಜದಲ್ಲಿ PCPNDT ಕಾಯ್ದೆ ಕುರಿತು ಅರಿವು ಮೂಡಿಸಲಾಗುವುದು. ಸಮಾಜದಲ್ಲಿ ಹೆಚ್ಚುತ್ತಿರುವ ಭ್ರೂಣಹತ್ಯೆಗಳನ್ನು ತಡೆಯುವಲ್ಲಿ ಹಾಗೂ ಲಿಂಗ ಸಮಾನತೆ ಕಾಯ್ದುಕೊಳ್ಳುವಲ್ಲಿ ಆಸ್ಪತ್ರೆಗಳ  ಜವಾಬ್ದಾರಿ ಹೆಚ್ಚಿದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಅಮರನಾಥ್, ಕಾರ್ಯಕ್ರಮ ಅನುಷ್ಠಾಧಿಕಾರಿ ಡಾ. ಗೋಪಿನಾಥ್ ಸೇರಿದಂತೆ ತಾಲೂಕು ಆರೋಗ್ಯಾಧಿಕಾರಿಗಳು ಭಾಗವಹಿಸಿದ್ದರು.

  • ಟ್ಯಾಗ್ಗಳು
  • Mysore
ಹಿಂದಿನ ಲೇಖನಜಿಲ್ಲಾಧಿಕಾರಿಗಳಿಂದ ಛೀಮಾರಿ: ಕೋವಿಡ್ ಕಡತಗಳನ್ನು ಈಗ ತಯಾರಿಸುತ್ತಿರುವ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಅಧಿಕಾರಿಗಳು
ಮುಂದಿನ ಲೇಖನಪಿಯು ಉಪನ್ಯಾಸಕರ ಹುದ್ದೆಗೆ ಬಡ್ತಿ: ಪ್ರೌಢಶಾಲಾ ಸಹ ಶಿಕ್ಷಕರಿಗೆ ತಾರತಮ್ಯ ನಿವಾರಣೆಗೆ ಕ್ರಮ: ಸಚಿವ ಎಸ್ ಮಧು ಬಂಗಾರಪ್ಪ