ಮನೆ ರಾಜ್ಯ ಶ್ರೀಗಳಿಗೆ ಬೇಸರ ಆಗಿದ್ದರೆ ಕ್ಷಮೆ ಕೇಳುತ್ತೇನೆ – ರಮೇಶ್ ಬಂಡಿಸಿದ್ದೇಗೌಡ

ಶ್ರೀಗಳಿಗೆ ಬೇಸರ ಆಗಿದ್ದರೆ ಕ್ಷಮೆ ಕೇಳುತ್ತೇನೆ – ರಮೇಶ್ ಬಂಡಿಸಿದ್ದೇಗೌಡ

0

ಮಂಡ್ಯ : ನಾನು ಚುಂಚನಗಿರಿ ಶ್ರೀಗಳ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ನನ್ನ ಮಾತಿಂದ ಶ್ರೀಗಳಿಗೆ ಬೇಸರ ಆಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿದ್ದಾರೆ. ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಬಿಜಿಎಸ್ ಕಾರ್ಯಕ್ರಮವೊಂದರಲ್ಲಿ ಚುಂಚನಗಿರಿ ಶ್ರೀಗಳು ದಾರಿ ತಪ್ಪುತ್ತಿದ್ದಾರೆ ಎಂದು ರಮೇಶ್ ಬಂಡಿಸಿದ್ದೇಗೌಡ ಹೇಳಿದ್ದರು. ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

ಈ ಬಗ್ಗೆ ಅವರು ಮಂಡ್ಯದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಟಿವಿ ವಾಹಿನಿಗಳ ಮುಖ್ಯಸ್ಥರು ಅತ್ಯಂತ ಗೌರವವಾಗಿ ಮಠವನ್ನು ಸ್ವಾಮೀಜಿಗಳು ನಡೆಸುಕೊಂಡು ಹೋಗ್ತಾ ಇದಾರೆ ಎಂದು ನನ್ನ ಬಳಿ ಹೇಳಿದ್ದಾರೆ. ನಾನು ವೇದಿಕೆಯಲ್ಲಿ ಬಾಲಗಂಗಾಧರ ಶ್ರೀಗಳು ಕಟ್ಟಿರುವ ಸಂಸ್ಥೆಗಳನ್ನು ಚೆನ್ನಾಗಿ ನಿರ್ವಹಣೆ ಮಾಡಿ ನಿರ್ಮಲಾನಂದ ಶ್ರೀಗಳು ಕಟ್ಟುತ್ತಿದ್ದಾರೆ ಎಂದು ಹೇಳಿದ್ದೇನೆ.

ಶ್ರೀಗಳು ಮಠವನ್ನು ಚನ್ನಾಗಿ ನಡೆಸುತ್ತಿಲ್ಲ ಎಂದು ಹೇಳಿಲ್ಲ. ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ. ಅವರ ಮನಸ್ಸಿಗೆ ನನ್ನಿಂದ ಬೇಸರ ಆಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಶ್ರೀಗಳು ನನ್ನ ಮಾತುಗಳನ್ನು ತಪ್ಪಾಗಿ ಭಾವಿಸಬಾರದು. ನನ್ನ ಮಾತುಗಳಿಂದ ಎಚ್ಚೆತ್ತುಕೊಂಡು ಕೆಲಸ ಮಾಡಲಿ ಎಂದು‌ ಹೇಳಿದ್ದೇನೆ ಅಷ್ಟೇ. ಒಂದು ವೇಳೆ ಅವರ ಮನಸ್ಸಿಗೆ ನೋವಾಗಿದ್ದರೆ ನಾನು ಅವರಲ್ಲಿ ಕ್ಷಮೆ ಕೇಳುತ್ತೇನೆ ಎಂದರು.

ಇದನ್ನು ಮುಂದುವರಿಸಿಕೊಂಡು ಹೋಗುವುದು ಬೇಡ, ಮಠದ ಭಕ್ತರು ಸಹ ಇದನ್ನು ಇಲ್ಲಿಗೆ ಬಿಡಬೇಕು. ನಮ್ಮ ಮಠ ಎಲ್ಲರ ಪರವಾಗಿ ಇರಬೇಕು. ಎಲ್ಲರನ್ನೂ ಒಂದೇ ಸದ್ಭಾವನೆಯಲ್ಲಿ ಕಾಣಬೇಕು, ನಾನು ಯಾವುದೇ ರೀತಿಯ ಧ್ವಂದ್ವ ರೀತಿ ಮಾತನಾಡಿಲ್ಲ. ನಾನು ಸ್ವಾಮೀಜಿಯವರ ಹೆಸರನ್ನು ಸೂಚಿಸಿಯೂ ಮಾತನಾಡಿಲ್ಲ. ನನ್ನ ಮಾತನ್ನು ನನ್ನ ಸ್ನೇಹಿತರು ತಿರುಚುವ ಕೆಲಸ ಮಾಡಿದ್ದಾರೆ. ಮುಂದೆ ಅದು ಯಾರು ಎಂದು ಗೊತ್ತಾಗಲಿದೆ ಎಂದಿದ್ದಾರೆ.