ಯಾದಗಿರಿ : ಜಿಲ್ಲೆಯ ಎರಡು ರೈಸ್ ಮಿಲ್ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಒಟ್ಟು 1.17 ಕೋಟಿ ಮೌಲ್ಯದ 4,108 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಿದ್ದಾರೆ.
ಆಹಾರ ಇಲಾಖೆ ಉಪನಿರ್ದೇಶಕ ಅನೀಲಕುಮಾರ್ ಅವರು ಗುರಮಠಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅನ್ನಭಾಗ್ಯ ಅಕ್ಕಿಯನ್ನು ಪಾಲಿಶ್ ಮಾಡಿಸಿ, ವಿವಿಧ ಬ್ರ್ಯಾಂಡ್ ಹೆಸರಿನಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ನೀಡಿದ್ದ ದೂರಿನ ಆಧಾರದ ಪೊಲೀಸರು ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು.
ಆಹಾರ ಪೊರೈಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಆಹಾಯ ಇಲಾಖೆಯ ಖಚಿತ ಮಾಹಿತಿ ಮೇರೆಗೆ ಯಾದಗಿರಿ ಜಿಲ್ಲೆಯ ಗುರಮಠಕಲ್ ಪಟ್ಟಣದ ಹೊರವಲಯದ ಉದ್ಯಮಿ ನರೇಂದ್ರ ರಾಠೋಡ ಹಾಗೂ ಅವರ ಪುತ್ರ ಅಯ್ಯಪ್ಪ ರಾಠೋಡಗೆ ಸೇರಿದ ಲಕ್ಷ್ಮೀ ವೆಂಕಟೇಶ್ವರ ಹಾಗೂ ಲಕ್ಷ್ಮೀ ಬಾಲಾಜಿ ರೈಸ್ ಮಿಲ್ ಮೇಲೆ ದಾಳಿ ನಡೆಸಿದ್ದಾರೆ.
ಈ ವೇಳೆ ಗೋದಾಮಿನಲ್ಲಿ ಸಾವಿರಾರು ಅಕ್ಕಿ ಚೀಲಗಳ ಸಂಗ್ರಹ ಪತ್ತೆಯಾಗಿದ್ದು, ಸತತ ಮೂರು ದಿನಗಳ ಬಳಿಕ ಲೆಕ್ಕ ಕಾರ್ಯ ಮುಕ್ತಾಯವಾಗಿದ್ದು, ಸುಮಾರು 1.17 ಕೋಟಿ ರೂ.ಗೂ ಅಧಿಕ ಮೌಲ್ಯದ 4,108 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಿಕೊಂಡಿದ್ದಾರೆ.
ರೈಸ್ ಮಿಲ್ಗೆ ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ನಕಲಿ ಬ್ರ್ಯಾಂಡ್ನಡಿ ರೈಸ್ ಪಾಲಿಶ್ ಮಾಡಿ ಮಾರಾಟ ಮಾಡಿರುವುದು ತಿಳಿದುಬಂದಿದೆ. ಡೈನೆಸ್ಟಿ, ದಾರಾ ಡಬಲ್, ವೋಲ್ಗಾ ಸೇರಿದಂತೆ ವಿವಿಧ ಬ್ರ್ಯಾಂಡ್ ಚೀಲದಲ್ಲಿ ಮಾರಾಟ ಮಾಡಿರುವುದು ಪತ್ತೆಯಾಗಿದೆ.
ಜೊತೆಗೆ ಕಡಿಮೆ ದರಕ್ಕೆ ಅಕ್ಕಿ ಖರೀದಿ ಮಾಡಿ, ದುಬಾರಿ ಬೆಲೆಗೆ ಅಕ್ಕಿ ಮಾರಾಟ ಮಾಡಿ ಅಕ್ರಮ ದಂಧೆ ನಡೆಸಿರುವುದಲ್ಲದೇ ಸಿಂಗಾಪುರ, ದುಬೈ ಸೇರಿದಂತೆ ವಿವಿಧ ದೇಶದ ಬ್ರ್ಯಾಂಡ್ನಲ್ಲಿ ರಫ್ತು ಮಾಡಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ಪಂಜಾಬ್, ಹರಿಯಾಣ, ತೆಲಂಗಾಣ ಸರ್ಕಾರದ ಹೆಸರಿನಲ್ಲಿಯೂ ಪಡಿತರ ಅಕ್ಕಿ ಚೀಲಗಳು ಪತ್ತೆಯಾಗಿದೆ.
ಈ ಬಗ್ಗೆ ತನಿಖೆಯಾದರೆ ಮತ್ತಷ್ಟು ಅಕ್ಕಿ ಮಾರಾಟ ಜಾಲ ಪತ್ತೆಯಾಗುವ ಸಾಧ್ಯತೆಯಿದೆ. ಸದ್ಯ ಇಬ್ಬರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಅರೆಸ್ಟ್ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.














