ನವದೆಹಲಿ : ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ನಲ್ಲಿರುವ ಆಸ್ಪತ್ರೆಯ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯನ್ನು ಭಾರತ ಖಂಡಿಸಿದೆ. ಇದು ಅನಾಗರಿಕ ಹಾಗೂ ಹೇಡಿತನದ ಕೃತ್ಯ ಎಂದು ಭಾರತ ಕಿಡಿಕಾರಿದೆ. ಆಸ್ಪತ್ರೆಯ ಮೇಲಿನ ದಾಳಿಯು ಪಾಕಿಸ್ತಾನದ ಘೋರ ಆಕ್ರಮಣಕಾರಿ ಕೃತ್ಯ. ಅಫ್ಘಾನಿಸ್ತಾನದ ಸಾರ್ವಭೌಮತ್ವದ ಮೇಲಿನ ದಾಳಿ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಬೆದರಿಕೆ ಎಂದು ವಿದೇಶಾಂಗ ಸಚಿವಾಲಯ ಆಕ್ರೋಶ ಹೊರಹಾಕಿದೆ.
ಪ್ರಪಂಚದಾದ್ಯಂತ ಮುಸ್ಲಿಂ ಸಮುದಾಯಗಳಲ್ಲಿ ಶಾಂತಿ, ಆತ್ಮಾವಲೋಕನ ಮತ್ತು ಕರುಣೆಯ ಸಂದರ್ಭವಾದ ಪವಿತ್ರ ರಂಜಾನ್ ತಿಂಗಳಲ್ಲಿ ಈ ದಾಳಿ ನಡೆದಿರುವುದು ಖಂಡನೀಯ. ಆಸ್ಪತ್ರೆ ಮತ್ತು ಅದರ ರೋಗಿಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಳ್ಳುವುದನ್ನು ಸಮರ್ಥಿಸುವ ನೈತಿಕತೆ ಅವರಿಗಿಲ್ಲ ಎಂದು ಪಾಕ್ ವಿರುದ್ಧ ಭಾರತ ಕೆಂಡಕಾರಿದೆ.
ಕಾಬೂಲ್ ಆಸ್ಪತ್ರೆ ಮೇಲೆ ಪಾಕಿಸ್ತಾನ ನಡೆಸಿದ ಬಾಂಬ್ ದಾಳಿಯಲ್ಲಿ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಫ್ಘಾನಿಸ್ತಾನ ಇತಿಹಾಸದಲ್ಲೇ ಇದು ಅತ್ಯಂತ ಭೀಕರ ದಾಳಿಯಾಗಿದೆ. ಸ್ಥಳೀಯ ಸಮಯ ರಾತ್ರಿ 9 ಗಂಟೆ ಸುಮಾರಿಗೆ 2,000 ಹಾಸಿಗೆ ಸೌಲಭ್ಯವಿರುವ ದೊಡ್ಡ ಆಸ್ಪತ್ರೆಯ ಮೇಲೆ ವೈಮಾನಿಕ ದಾಳಿ ನಡೆದಿದೆ. 400 ಮಂದಿ ಸಾವಿಗೀಡಾಗಿದ್ದು, 250 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.















