ಮನೆ ರಾಜ್ಯ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಡಿಸಿಗಳಿಗೆ ಸೂಚನೆ – ಶಿವರಾಜ್ ತಂಗಡಗಿ

ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಡಿಸಿಗಳಿಗೆ ಸೂಚನೆ – ಶಿವರಾಜ್ ತಂಗಡಗಿ

0

ಬೆಂಗಳೂರು : ರಾಜ್ಯದಲ್ಲಿ ಕಡ್ಡಾಯ ಕನ್ನಡ ಭಾಷಾ ನಾಮಫಲಕ ಅಳವಡಿಕೆ ಕುರಿತು ನಿಗಾವಹಿಸಲು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಆದಷ್ಟೂ ಬೇಗ ರಾಜ್ಯದಲ್ಲಿ ನಿಯಮ ಸಂಪೂರ್ಣ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಅಂತ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಉಮಾಶ್ರೀ ಪ್ರಶ್ನೆ ಕೇಳಿದ್ರು. ಕನ್ನಡ ನಾಮಫಲಕ ಅಳವಡಿಸೋ ಅಭಿಯಾನ ಸಂಪೂರ್ಣ ಆಗಿಲ್ಲ. ನಾಮಫಲಕ ಸಂಪೂರ್ಣ ಆಗಬೇಕು. ಇದು ನಿರಂತರವಾಗಿ ಆಗೋ ಕೆಲಸ. ಅಪೂರ್ಣ ಆಗೋ ಪ್ರಶ್ನೆ ಇಲ್ಲ ಅಂತ ಸಚಿವರು ಹೇಳ್ತಾರೆ. ಹುಬ್ಬಳ್ಳಿಯಲ್ಲಿ ಉತ್ತಮವಾಗಿ ಆಗಿದೆ.

ಮೈಸೂರಿನಲ್ಲಿ ಜಾರಿ ಆಗಿಲ್ಲ. ಕನ್ನಡ ನಾಮಫಲಕ ಕಡ್ಡಾಯ ಶೀಘ್ರವೇ ಮುಗಿಸಬೇಕು. ಬೆಂಗಳೂರಿನಲ್ಲಿ ಕಡ್ಡಾಯ ಕನ್ನಡ ನಾಮಫಲಕ ನಿಯಮ ಸಮರ್ಪಕವಾಗಿ ಆಗ್ತಿಲ್ಲ. ಇದರಲ್ಲಿ ಯಾರ ನಿರ್ಲಕ್ಷ್ಯ ಆಗುತ್ತಿದೆ. ಅನುಷ್ಠಾನ ಸಮಿತಿ ಸರ್ಕಾರ ಮಾಡಿಲ್ಲ. ಕೂಡಲೇ ಕಡ್ಡಾಯ ಕನ್ನಡ ನಾಮಫಲಕ ಆದೇಶ ಪೂರ್ಣ ಆಗಬೇಕು ಅಂತ ಒತ್ತಾಯ ಮಾಡಿದ್ರು.

ಇದಕ್ಕೆ ಸಚಿವ ತಂಗಡಗಿ ಉತ್ತರ ಕೊಟ್ಟು, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಮೂಲ ಕಾಯಿದೆ 17ನೇ ಪ್ರಕರಣದ ಆರನೇ ಉಪಪ್ರಕರಣದಂತೆ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್ ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್‌ಗಳು ಮುಂತಾದವುಗಳು ತಮ್ಮ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು 60% ರಷ್ಟು ಪ್ರದರ್ಶಿಸಲಾಗಿದೆ.

ಕನ್ನಡ ಭಾಷೆಯು ನಾಮಫಲಕದ ಮೇಲ್ಬಾಗದಲ್ಲಿ ಪ್ರದರ್ಶಿತವಾಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳತಕ್ಕದ್ದು ಎಂದಿದ್ದು ಕಾಯ್ದೆಯ ಅನುಷ್ಠಾನ ಜವಾಬ್ದಾರಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳದ್ದಾಗಿರುತ್ತದೆ. ಇದು ನಿರಂತರ ಪ್ರಕ್ರಿಯೆಯಾಗಿರುವ ಕಾರಣ ಅಪೂರ್ಣಗೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲ. ಈ ಅಧಿನಿಯಮದಂತೆ ಕ್ರಮವಹಿಸಲು ಅನುಷ್ಠಾನ ಅಧಿಕಾರಿಗಳಾದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿರುತ್ತದೆ ಎಂದರು.

ಕನ್ನಡದಲ್ಲಿ ನಾಮಫಲಕ ಅಳವಡಿಸಿಕೊಳ್ಳದ ಸಂಘ-ಸಂಸ್ಥೆಗಳ ವಿರುದ್ಧ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ನಿಯಮ 23ರ ಅನುಸಾರ ಮೊದಲನೆಯ ಅಪರಾಧಕ್ಕಾಗಿ 5000 ರೂ. ಎರಡನೇ ಅಪರಾಧಕ್ಕಾಗಿ 10,000 ರೂ. ಮತ್ತು ನಂತರದ ಪ್ರತಿ ಅಪರಾಧಕ್ಕಾಗಿ 20,000 ರೂ. ವಿಸ್ತರಿಸಬಹುದಾದ ಜುಲ್ಮಾನೆಗೆ ಮತ್ತು ಪರವಾನಗಿಯನ್ನು ರದ್ದುಗೊಳಿಸುವುದಕ್ಕೆ ಗುರಿಯಾಗುವುದು ಎಂದಿರುತ್ತದೆ.

ಈ ಅಧಿನಿಯಮದಂತೆ ಕ್ರಮವಹಿಸಲು ಅನುಷ್ಠಾನ ಅಧಿಕಾರಿಗಳಾದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿರುತ್ತದೆ. ರಾಜ್ಯ ಸಮಿತಿ ರಚನೆಗೆ ಕಾನೂನು ಇಲಾಖೆ ಅಭಿಪ್ರಾಯ ಕೇಳಿದ್ದು,‌ ಕಾನೂನು ಇಲಾಖೆ ಒಪ್ಪಿಗೆ ಕೊಟ್ಟ ಕೂಡಲೇ ಸಮಿತಿ ರಚನೆ ಮಾಡೋದಾಗಿ‌ ತಿಳಿಸಿದರು.