ಮನೆ ರಾಷ್ಟ್ರೀಯ ಜಮ್ಮು-ಕಾಶ್ಮೀರದ ಬಜೆಟ್‌, ಐಎಂಎಫ್‌ ಸಾಲಕ್ಕಿಂತಲೂ 2 ಪಟ್ಟು ಹೆಚ್ಚಿದೆ; ಪಾಕ್‌ಗೆ ಭಾರತ ತರಾಟೆ..!

ಜಮ್ಮು-ಕಾಶ್ಮೀರದ ಬಜೆಟ್‌, ಐಎಂಎಫ್‌ ಸಾಲಕ್ಕಿಂತಲೂ 2 ಪಟ್ಟು ಹೆಚ್ಚಿದೆ; ಪಾಕ್‌ಗೆ ಭಾರತ ತರಾಟೆ..!

0

ಜಿನೀವಾ : ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಯ ಬಗ್ಗೆ ತಪ್ಪು ಮಾಹಿತಿ ಹರಡಿದ್ದಕ್ಕಾಗಿ ಭಾರತ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದೆ. ಯುಎನ್‌ಹೆಚ್‌ಆರ್‌ಸಿಯ 61 ನೇ ಅಧಿವೇಶನದಲ್ಲಿ ಮಾತನಾಡಿದ ಭಾರತದ ಪ್ರತಿನಿಧಿ ಅನುಪಮಾ ಸಿಂಗ್, ಭಾರತದ ಅಭಿವೃದ್ಧಿಯನ್ನು ನಂಬಲು ಕಷ್ಟವಾಗಿದ್ದರೆ ಪಾಕಿಸ್ತಾನ ಭ್ರಮೆಯಲ್ಲಿದೆ ಎನಿಸುತ್ತಿದೆ. ಇತ್ತೀಚೆಗೆ ಪಾಕಿಸ್ತಾನ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಕೋರಿದ್ದ, ಬೇಲ್‌ಔಟ್ ಪ್ಯಾಕೇಜ್‌ಗಿಂತ ಜಮ್ಮು-ಕಾಶ್ಮೀರದ ಅಭಿವೃದ್ಧಿ ಬಜೆಟ್‌ ಇದೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನ ಮತ್ತು ಇಸ್ಲಾಮಿಕ್ ಸಹಕಾರ ಸಂಸ್ಥೆ ಮಾಡಿದ ಆರೋಪಗಳನ್ನು ಭಾರತ ತಿರಸ್ಕರಿಸಿದೆ. ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ಘಾಟನೆಗೊಂಡ ವಿಶ್ವದ ಅತಿ ಎತ್ತರದ ಸೇತುವೆಯಾದ ಚೆನಾಬ್ ರೈಲು ಸೇತುವೆ ನಕಲಿ ಎನ್ನುವ ಪಾಕಿಸ್ತಾನವು ಭ್ರಮೆಯಲ್ಲಿರಬೇಕು. ನಾವು ಈ ಆರೋಪಗಳನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ. ಪಾಕಿಸ್ತಾನದ ನಿರಂತರ ಪ್ರಚಾರವು ಈಗ ಅಸೂಯೆಯಿಂದ ಕೂಡಿದೆ ಎಂದು ಸಿಂಗ್‌ ವಾಗ್ದಾಳಿ ನಡೆಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಭಾರತದ ನಿಲುವನ್ನು ಸಿಂಗ್‌ ಪ್ರತಿಪಾದಿಸಿದರು. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿತ್ತು. ಈಗಲೂ ಇದೆ, ಮತ್ತು ಯಾವಾಗಲೂ ಉಳಿಯುತ್ತದೆ. 1947 ರಲ್ಲಿ ಈ ಪ್ರದೇಶವನ್ನು ಭಾರತಕ್ಕೆ ಸೇರಿಸಿಕೊಳ್ಳುವುದು ಭಾರತೀಯ ಸ್ವಾತಂತ್ರ್ಯ ಕಾಯ್ದೆ ಮತ್ತು ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಸಂಪೂರ್ಣವಾಗಿ ಕಾನೂನುಬದ್ಧ. ಅದನ್ನು ಬದಲಾಯಿಸಲಾಗದು ಎಂದು ಸ್ಪಷ್ಟಪಡಿಸಿದ್ದಾರೆ.

ಈ ಪ್ರದೇಶದ ಏಕೈಕ ವಿವಾದವೆಂದರೆ ಪಾಕಿಸ್ತಾನವು ಭಾರತೀಯ ಪ್ರದೇಶಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವುದು. ಪಾಕಿಸ್ತಾನ ತನ್ನ ನಿಯಂತ್ರಣದಲ್ಲಿರುವ ಪ್ರದೇಶಗಳನ್ನು ಖಾಲಿ ಮಾಡುವಂತೆ ಸಿಂಗ್ ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಬಜೆಟ್, ಪಾಕಿಸ್ತಾನವು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) ಕೋರಿದ ಇತ್ತೀಚಿನ ಬೇಲ್‌ಔಟ್ ಪ್ಯಾಕೇಜ್‌ಗಿಂತ ಎರಡು ಪಟ್ಟು ಹೆಚ್ಚಾಗಿದೆ. ಇದು ಕೇಂದ್ರಾಡಳಿತ ಪ್ರದೇಶದ ಆಡಳಿತ, ಅಭಿವೃದ್ಧಿ ಮತ್ತು ಪಾಕಿಸ್ತಾನದ ಆರ್ಥಿಕ ಸವಾಲುಗಳ ನಡುವಿನ ವ್ಯತ್ಯಾಸವನ್ನು ತೋರಿಸುತ್ತದೆ ಎಂದು ಟಾಂಗ್‌ ಕೊಟ್ಟಿದ್ದಾರೆ.