ಬೆಂಗಳೂರು : ಮಾಂಸಾಹಾರ ಸೇವಿಸದೇ ಸಿಎಂ ಸಿದ್ದರಾಮಯ್ಯ ಅವರು ಧರ್ಮಸ್ಥಳಕ್ಕೆ ಹೋಗಲಿ ಎಂದು ಕಾಂಗ್ರೆಸ್ ನಾಯಕರ ಧರ್ಮಸ್ಥಳ ಯಾತ್ರೆಯನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದರು.
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರಿಗೆ ಧರ್ಮಸ್ಥಳ ಚಲೋ ಮಾಡುವ ಬುದ್ಧಿ ಬಂದಿರೋದು ಒಳ್ಳೆಯದು. ಇದುವರೆಗೆ ಮಸೀದಿ, ದರ್ಗಾಗೆ ಹೋಗ್ತಿದ್ರು. ಈಗ ಧರ್ಮಸ್ಥಳಕ್ಕೆ ಹೋಗ್ತಿರೋದು ಸ್ವಾಗತ. ಸಿದ್ದರಾಮಯ್ಯ ಕೂಡಾ ಹೋಗಲಿ, ಡಿಕೆಶಿ ಸಹ ಹೋಗಲಿ. ಮಾಂಸಾಹಾರ ಸೇವಿಸದೇ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಹೋಗಲಿ ಎಂದು ತಿಳಿಸಿದರು.
ಸೌಜನ್ಯ ಪ್ರಕರಣ ಬಗ್ಗೆ ಹೈಕೋರ್ಟ್ ವರೆಗೆ ಏನಾಗಿದೆ ಅಂತ ಚಿಂತನೆ ಆಗಲಿ. ರಾಜ್ಯ ಸರ್ಕಾರವೇ ಪ್ರಕರಣ ಎನ್ಐಎಗೆ ಕೊಡಲಿ. ಸೌಜನ್ಯ ಪ್ರಕರಣ ಮೂಲಕ ಅವರಿಗೆ ಯಾರನ್ನೋ ಟಾರ್ಗೆಟ್ ಮಾಡೋದಿದೆ ಅನ್ಸುತ್ತೆ. ಹಾಗಾಗಿ, ಅದನ್ನ ಜೀವಂತ ಇಟ್ಟಿದ್ದಾರೆ. ಸರ್ಕಾರವೇ ಎನ್ಐಎಗೆ ಕೊಡಲಿ. ವಿಜಯೇಂದ್ರ ಸುಪ್ರೀಂ ಕೋರ್ಟ್ ವರೆಗೆ ಹೋಗುವ ಅಗತ್ಯ ಇಲ್ಲ. ವಚನಾನಂದ ಸ್ವಾಮೀಜಿ, ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ. ವಚನಾನಂದ ಸ್ವಾಮೀಜಿ, ವಿಜಯೇಂದ್ರ ಕ್ಯಾಂಪ್ನವ್ರು ಎಂದು ಹೇಳಿದರು.
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ಗೆ ಆಹ್ವಾನ ವಿಚಾರವಾಗಿ ಮಾತನಾಡಿ, ಆ ಹೆಣ್ಣುಮಗಳಿಗೂ ಏನಾದರೂ ಮಾನ-ಮರ್ಯಾದೆ ಬೇಕು. ಮೈಸೂರಿನಲ್ಲಿ ನಡೆಯುವುದು ಎಲ್ಲಾ ಸನಾತನ ಧರ್ಮದ ಸಂಸ್ಕಾರ. ಅಲ್ಲಿ ಭಾನು ಮುಷ್ತಾಕ್ ಅವರಿಗೆ ಏನು ಕೆಲಸ? ಅವರೇನು ಹಿಂದೂನಾ? ಅವರೇನು ಮಾಜಿ ಮುಸ್ಲಿಮರಾ? ಚಾಮುಂಡೇಶ್ವರಿ ಶಾಪ ತಗುಲಬಾರದು ಅಂದರೆ ಅವರೇ ಬಿಟ್ಟು ಬಿಡಬೇಕು ಎಂದರು.
ವಿಜಯೇಂದ್ರ ಸೌಜನ್ಯ ಪರ ಸುಪ್ರೀಂ ಕೋರ್ಟ್ಗೆ ಹೋಗೋದು ಬೇಕಿಲ್ಲ. ಧರ್ಮಸ್ಥಳಕ್ಕೆ ಹೋಗಿ ಭ್ರಷ್ಟಾಚಾರ ನಡೆಸದ ಬುದ್ದಿ ಕೊಡು ಎಂದು ಕೇಳಿಕೊಳ್ಳಲಿ. ನಮ್ಮ ಅಪ್ಪ ನಾಲ್ಕು ಬಾರಿ ಸಿಎಂ ಆಗಿದ್ದಾರೆ. ಉಳಿದವರಿಗೆ ಅವಕಾಶ ನೀಡಲಿ ಎಂದು ಧರ್ಮಸ್ಥಳದಲ್ಲಿ ಪ್ರಾರ್ಥನೆ ಮಾಡಲಿ ಎಂದು ಕಾಲೆಳೆದರು ಎನ್ನಲಾಗಿದೆ.















