ಮನೆ ಕಾನೂನು ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಶೇ . 75ರಷ್ಟು ಉದ್ಯೋಗ ಮೀಸಲು

ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಶೇ . 75ರಷ್ಟು ಉದ್ಯೋಗ ಮೀಸಲು

0

ಹೊಸದಿಲ್ಲಿ: ಖಾಸಗಿ ವಲಯದ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ 75ರಷ್ಟು ಮೀಸಲಾತಿ ನೀಡುವ ಹರಿಯಾಣ ಸರ್ಕಾರದ ಆದೇಶಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಗೆಲುವು ಸಿಕ್ಕಿದೆ.

ಸರ್ಕಾರದ ಆದೇಶವನ್ನು ತಡೆಹಿಡಿದಿದ್ದ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿದ್ದ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್  ಆದೇಶವನ್ನು ಸುಪ್ರೀಂಕೋರ್ಟ್ ಪಕ್ಕಕ್ಕಿರಿಸಿದೆ.
ಈ ಹೊಸ ಕಠಿಣ ಕಾನೂನನ್ನು ಪಾಲಿಸದ ಖಾಸಗಿ ವಲಯದ ಉದ್ಯೋಗದಾತರ ಮೇಲೆ ಯಾವುದೇ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ದೂರ ಇರುವಂತೆಯೂ ಹರ್ಯಾಣ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಮುಕ್ಕಾಲು ಪಾಲು ಉದ್ಯೋಗ ಮೀಸಲು ಇಡುವುದು ಸಮರ್ಥನೀಯವಲ್ಲ ಮತ್ತು ಇದು ಸ್ವಾಭಾವಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿತ್ತು. ಇದನ್ನು ಪ್ರಶ್ನಿಸಿ ಮನೋಹರ ಲಾಲ್ ಖಟ್ಟರ್ ನೇತೃತ್ವದ ಹರ್ಯಾಣ ಸರ್ಕಾರ ಈ ತಿಂಗಳ ಆರಂಭದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಕೇವಲ 90 ಸೆಕೆಂಡುಗಳಲ್ಲಿ ವಾದ ಆಲಿಸಿ ಹೈಕೋರ್ಟ್ ಆದೇಶ ಪ್ರಕಟಿಸಿದೆ. ತನ್ನ ವಕೀಲರ ವಾದ ಮಂಡನೆಗೆ ಅವಕಾಶವನ್ನೇ ನೀಡಿಲ್ಲ ಎಂದು ರಾಜ್ಯ ಸರ್ಕಾರ ಆರೋಪಿಸಿತ್ತು. ಪ್ರಕರಣವನ್ನು ಸಂಪೂರ್ಣವಾಗಿ ಆಲಿಸುವಂತೆ ಹೈಕೋರ್ಟ್‌ಗೆ ಸೂಚನೆ ನೀಡಿರುವ ಸುಪ್ರೀಂಕೋರ್ಟ್, ನಾಲ್ಕು ವಾರಗಳಲ್ಲಿ ತೀರ್ಪು ಪ್ರಕಟಿಸುವಂತೆ ನಿರ್ದೇಶಿಸಿದೆ.
ಹರ್ಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಕಾಯ್ದೆ 2020 ಅನ್ನು ಕಳೆದ ವರ್ಷದ ನವೆಂಬರ್‌ನಲ್ಲಿ ಅಂಗೀಕರಿಸಲಾಗಿತ್ತು. ಅದು ಈ ವರ್ಷದ ಜನವರಿ 15ರಂದು ಜಾರಿಗೆ ಬಂದಿತ್ತು. ತಿಂಗಳಿಗೆ ಗರಿಷ್ಠ ಒಟ್ಟು 30,000 ವೇತನ ಅಥವಾ ಕೂಲಿ ಆಫರ್ ನೀಡುವ ಕೆಲಸಗಳಿಗೆ ಇದು ಅನ್ವಯವಾಗುತ್ತದೆ. ಹರ್ಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಮಸೂದೆಗೆ ಸಹಿ ಹಾಕಿದ್ದರು.

ಈ ಕಾಯ್ದೆಯು ಸಾವಿರಾರು ಯುವ ಜನರಿಗೆ ಉದ್ಯೋಗದ ಹೊಸ ಅವಕಾಶಗಳನ್ನು ಕಲ್ಪಿಸಲಿದೆ ಎಂದು ಕಾನೂನು ಜಾರಿಯಾದ ನಂತರ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ಹೇಳಿದ್ದರು.
ಹರಿಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಕಾಯ್ದೆ ವಿಭಾಗ Iರ ಉಪ ವಿಭಾಗ 3ರ ಮೂಲಕ ನೀಡಲಾದ ಅಧಿಕಾರಗಳ ಅನುಷ್ಠಾನದಲ್ಲಿ, ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸರ್ಕಾರ ಈ ಅಧಿಸೂಚನೆಯನ್ನು ಹೊರಡಿಸಿತ್ತು. ರಾಜ್ಯದಲ್ಲಿ ನೆಲೆಗೊಂಡಿರುವ ವಿವಿಧ ಕಂಪನಿಗಳು, ಸೊಸೈಟಿಗಳು, ಟ್ರಸ್ಟ್‌ಗಳು ಮತ್ತು ಸೀಮಿತ ಹೊಣೆಗಾರಿಕೆಯ ಪಾಲುದಾರಿಕೆ ಸಂಸ್ಥೆಗಳಲ್ಲಿ, ಸ್ಥಳೀಯ ಅಭ್ಯರ್ಥಿಗಳಿಗೆ ಶೇ.75ರಷ್ಟು ಮೀಸಲಾತಿ ನೀಡಬೇಕು ಎಂದು ಈ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.

ಹಿಂದಿನ ಲೇಖನತಪ್ಪು ತಿದ್ದಿಕೊಳ್ಳುವ ಬದಲು ನೆಹರೂ ಅವರನ್ನೇ ದೂರುತ್ತಿದ್ದಾರೆ: ಡಾ. ಮನಮೋಹನ್ ಸಿಂಗ್
ಮುಂದಿನ ಲೇಖನಆಂತರಿಕ ಕಚ್ಚಾಟ ಮರೆ ಮಾಚಲು ಕಾಂಗ್ರೆಸ್ ನಾಯಕರಿಂದ ಸದನದ ದುರುಪಯೋಗ: ಆರಗ ಜ್ಞಾನೇಂದ್ರ