ಕಾರವಾರ: ಲಾರಿ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿ ಪತಿ, ಪತ್ನಿ ಮತ್ತು 7 ತಿಂಗಳ ಮಗ ಸೇರಿದಂತೆ ಮೂವರು ಸಾವನ್ನಪ್ಪಿದ ದಾರುಣ ಘಟನೆ ಯಲ್ಲಾಪುರದ ಅರೆಬೈಲ್ ಘಟ್ಟದ ಬಳಿ ಬುಧವಾರ ನಡೆದಿದೆ.
ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೊಪ್ಪಳ ಮೂಲಕ ಶ್ರೀಕಾಂತ ರೆಡ್ಡಿ (37), ಅವರ ಪತ್ನಿ ಚೈತ್ರಾ ಆರ್(31) ಹಾಗೂ ಅವರ 7 ತಿಂಗಳ ಮಗು ಶ್ರೀಹಾನ್ ಅಪಘಾತದಲ್ಲಿ ಮೃತಟಪಟ್ಟವರು. ಕಾರು ಚಾಲಕ ಆರ್ ವೆಂಕಟೇಶ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರಲ್ಲಿ ಇವರು ಕುಟುಂಬ ಸಮೇತರಾಗಿ ಅಂಕೋಲಾದಿಂದ ಹುಬ್ಬಳ್ಳಿ ಕಡೆ ಹೊರಟ್ಟಿದ್ದರು. ಈ ವೇಳೆ ಅರಬೈಲ್ ಘಟ್ಟದ ಇಳಿಜಾರಿನಲ್ಲಿ ಅಪಘಾತ ಸಂಭವಿಸಿದೆ.
ಲಾರಿ ಚಾಲಕ ವೇಗವಾಗಿ ಬಂದು ಅರಬೈಲ್ ಮಾರುತಿ ದೇವಾಲಯದದಿಂದ ಸ್ವಲ್ಪ ಮುಂದೆ ನಿಯಂತ್ರಣ ತಪ್ಪಿ ಬಲಕ್ಕೆ ಹೊರಳಿದೆ. ಈ ವೇಳೆ ಎದುರಿನಿಂದ ಬರುತ್ತಿದ್ದ ಕಾರಿಗೆ ರಭಸವಾಗಿ ಲಾರಿ ಡಿಕ್ಕಿಯಾಗಿದೆ. ಪರಿಣಾಮವಾಗಿ ಕಾರಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ಬಿಜಾಪುರದ ಪ್ರಶಾಂತ ಕುಂಬಾರ ಎಂಬಾತನೇ ಲಾರಿ ಚಾಲಕ ಎಂದು ತಿಳಿದುಬಂದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಯಲ್ಲಾಲಿಂಗ ಕುನ್ನೂರು ತನಿಖೆ ನಡೆಸುತ್ತಿದ್ದಾರೆ. ಸಿಪಿಐ ರಮೇಶ ಹಾನಾಪುರ ಹಾಗೂ ಶಿರಸಿ ಡಿವೈಎಸ್ಪಿ ಗಣೇಶ ಕೆ ಎಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.














