ಮನೆ ಅಪರಾಧ ಮದ್ದೂರು: ಹಣಕಾಸಿನ ವಿಚಾರಕ್ಕೆ ರೌಡಿ ಶೀಟರ್’ಗಳ ನಡುವೆ ಜಗಳ- ಕೊಲೆಯಲ್ಲಿ ಅಂತ್ಯ

ಮದ್ದೂರು: ಹಣಕಾಸಿನ ವಿಚಾರಕ್ಕೆ ರೌಡಿ ಶೀಟರ್’ಗಳ ನಡುವೆ ಜಗಳ- ಕೊಲೆಯಲ್ಲಿ ಅಂತ್ಯ

0

ಮದ್ದೂರು: ರೌಡಿಶೀಟರ್’ಗಳ ನಡುವೆ ಹಣಕಾಸಿನ ವಿಚಾರವಾಗಿ ಗಲಾಟೆ ನಡೆದಿದ್ದು, ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.

ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿ  ಈ ಘಟನೆ ಸಂಭವಿಸಿದೆ.

ದೊಡ್ಡರಸಿಕೆರೆ ಗ್ರಾಮದ ರಮೇಶ್ ಎಂಬುವರ ಪುತ್ರ ಅರುಣ್ ಅಲಿಯಾಸ್ ಕಪ್ಪೆ (23) ಮೃತ ರೌಡಿಶೀಟರ್.

ದೊಡ್ಡರಸಿಕೆರೆ ಗ್ರಾಮದ ರೌಡಿಶೀಟರ್’ಗಳಾದ ಅರುಣ್ ಅಲಿಯಾಸ್ ಕಪ್ಪೆ ಮತ್ತು ದೊಡ್ಡಯ್ಯ ಹಾಗೂ ದೇವರಾಜು ಎಂಬುವವರಿಗೆ ಹಣಕಾಸಿನ ವಿಚಾರಕ್ಕೆ ದೊಡ್ಡರಸಿಕೆರೆ ವಿ.ಎಸ್.ಎಸ್.ಎನ್ ಮುಂಭಾಗ  ಭಾನುವಾರ ರಾತ್ರಿ ವಾಗ್ವಾದ ನಡೆದಿದ್ದು, ಹೊಡೆದಾಟವಾಗಿದೆ.

ಹೊಡೆದಾಟದಲ್ಲಿ ಅರುಣ್ ಅಲಿಯಾಸ್ ಕಪ್ಪೆ ಎಂಬುವವರಿಗೆ  ದೊಡ್ಡಯ್ಯ ಹಾಗೂ ದೇವರಾಜು  ಎಂಬುವವರು ತೀವ್ರವಾಗಿ ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಅರುಣ್ ಮೂಗಿಗೆ ಬಲವಾಗಿ ಪೆಟ್ಟಾಗಿ ರಕ್ತಸ್ರಾವ ಉಂಟಾಗಿ ಚಿಕಿತ್ಸೆಗಾಗಿ ದೇವರಹಳ್ಳಿ ಮಾರ್ಗದಲ್ಲಿ ಕೆ.ಎಂ ದೊಡ್ಡಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಹಿಂಬಾಲಿಸಿ ಬಂದ ದೊಡ್ಡಯ್ಯ, ದೇವರಾಜ ಹಾಗೂ ಆತನ ಸಹಚರರು ದೊಣ್ಣೆ ಹಾಗೂ ಕಲ್ಲಿನಿಂದ ಅರುಣ್‍ನ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ತೀವ್ರವಾಗಿ ಹಲ್ಲೆಗೆ ಒಳಗಾಗಿದ್ದ ಅರುಣ್’ನನ್ನು ಕೆ.ಎಂ.ದೊಡ್ಡಿಯ ಜಿ.ಮಾದೇಗೌಡ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸೋಮವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ  ಅರುಣ್ ಸಾವನ್ನಪ್ಪಿದನು. ಅರುಣ್ ಮೃತ ದೇಹವನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ತರಲಾಗಿದೆ.

ಅರುಣ್ ಕೊಲೆ ಹಿನ್ನಲೆಯಲ್ಲಿ ದೊಡ್ಡರಸಿನಕೆರೆ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.

ಘಟನೆ ಸಂಬಂಧ ಕೆ.ಎಂ. ದೊಡ್ಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಎಎಸ್’ಪಿ ಎನ್. ಯತೀಶ್, ಅಪರ ಪೊಲೀಸ್ ವರಿಷ್ಟಾಧಿಕಾರಿ ವೇಣುಗೋಪಾಲ್, ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ನವೀನ್ ಭೇಟಿ ನೀಡಿದ್ದರು.